×
Ad

ಬಜರಂಗದಳ ಕಾರ್ಯಕರ್ತ ದಾಳಿ ವೇಳೆ ದನದ ವ್ಯಾಪಾರಿ ಮೃತ್ಯು

Update: 2018-05-30 22:05 IST

ಬಜರಂಗದಳ ಕಾರ್ಯಕರ್ತರಿಂದ ಹೊಡೆದು ಕೊಲೆ: ಸಹೋದರ ದೂರು

ಉಡುಪಿ, ಮೇ 30: ಬಜರಂಗದಳ ಕಾರ್ಯಕರ್ತರ ದಾಳಿ ವೇಳೆ ತಪ್ಪಿಸಿ ಕೊಂಡು ಪರಾರಿಯಾದ ದನದ ವ್ಯಾಪಾರಿಯೊಬ್ಬರ ಮೃತದೇಹವು ಪೆರ್ಡೂರು ಗ್ರಾಮದ ಕೊತ್ಯಾರು ಹಾಡಿಯಲ್ಲಿ ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಪತ್ತೆ ಯಾಗಿದ್ದು, ಈ ಬಗ್ಗೆ ಕುಟುಂಬಸ್ಥರು ಕೊಲೆ ಶಂಕೆ ವ್ಯಕ್ತಪಡಿಸಿ ಹಿರಿಯಡ್ಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮೃತರನ್ನು ಮಂಗಳೂರು ಜೋಕಟ್ಟೆಯ ದನದ ವ್ಯಾಪಾರಿ ಹುಸೈನಬ್ಬ(62) ಎಂದು ಗುರುತಿಸಲಾಗಿದೆ. ‘ಹುಸೈನಬ್ಬ ಅವರನ್ನು ಪೆರ್ಡೂರು ಬಜರಂಗದಳದ ಮುಖಂಡ ಸೂರಿ ಸೇರಿದಂತೆ ಇತರ ಕಾರ್ಯಕರ್ತರು ಸೇರಿ ಹೊಡೆದು ಕೊಲೆ ಮಾಡಿದ್ದಾರೆ’ ಎಂದು ಮೃತರ ಸಹೋದರ ಮುಹಮ್ಮದ್ ನೀಡಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಹಿರಿಯಡ್ಕ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಘಟನೆ ಹಿನ್ನೆಲೆ: ಹುಸೈನಬ್ಬ ಕಳೆದ 35 ವರ್ಷಗಳಿಂದ ಪೆರ್ಡೂರು ಪರಿಸರ ದಲ್ಲಿ ಸ್ಥಳೀಯ ದಲ್ಲಾಳಿಗಳ ಮೂಲಕ ದನ ಖರೀದಿಸಿ ವ್ಯಾಪಾರ ಮಾಡಿಕೊಂಡಿ ದ್ದರು. ಮೇ 29ರಂದು ಬೆಳಗಿನ ಜಾವ ಉಪವಾಸದ ಸಹರಿ ಮುಗಿಸಿದ ಬಳಿಕ ನಮಾಝ್ ನಿರ್ವಹಿಸಿ ಆರು ಗಂಟೆ ಸುಮಾರಿಗೆ ಇತರರೊಂದಿಗೆ ಸ್ಕಾರ್ಪಿಯೋ ವಾಹನದಲ್ಲಿ ದನದ ವ್ಯಾಪಾರಕ್ಕಾಗಿ ಪೆರ್ಡೂರಿಗೆ ತೆರಳಿದ್ದರು.

ಹುಸೈನಬ್ಬ ಹಾಗೂ ಇತರ ನಾಲ್ವರು ಬೆಳಗ್ಗೆಯಿಂದ ಸಂಜೆಯವರೆಗೆ ಪೆರ್ಡೂರಿನ ಪರಿಸರದಲ್ಲಿ ದಲ್ಲಾಳಿಗಳ ಮೂಲಕ ಹಣ ಕೊಟ್ಟು ದನವನ್ನು ಖರೀದಿಸಿ ವ್ಯಾಪಾರ ನಡೆಸಿದ್ದರು. ಪೆರ್ಡೂರು ಶೇಣರಬೆಟ್ಟುವಿನಿಂದ ಕಾಫಿ ತೋಟ ಮಾರ್ಗವಾಗಿ ಮೇ 30ರಂದು ಬೆಳಗಿನ ಜಾವ 5ಗಂಟೆ ಸುಮಾರಿಗೆ 11 ಜಾನುವಾರು ಗಳೊಂದಿಗೆ ಸ್ಕಾರ್ಪಿಯೋ ವಾಹನದಲ್ಲಿ ಇವರೆಲ್ಲ ಹೊರಟಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಸ್ಥಳೀಯ ಬಜರಂಗದಳದ ಕಾರ್ಯಕರ್ತರು ಪೆರ್ಡೂರು ಶೇಣರಬೆಟ್ಟುವಿನ ಬಳಿ ವಾಹನವನ್ನು ಅಡ್ಡಗಟ್ಟಿದರು ಎಂದು ದೂರಲಾಗಿದೆ.

ಆಗ ಇವರು ಸ್ಕಾರ್ಪಿಯೋ ವಾಹನವನ್ನು ರಿವರ್ಸ್ ತೆಗೆದು ಹಿಂದಕ್ಕೆ ಚಲಾಯಿಸಿಕೊಂಡು ಬಂದರು. ಅದು ಸಾಧ್ಯವಾಗದಾಗ ವಾಹನವನ್ನು ಅಲ್ಲೇ ಬಿಟ್ಟು ಪರಾರಿಯಾದರು. ಆಗ ಮೂವರು ಒಂದು ಕಡೆ ಓಡಿದರೆ, ಹುಸೈನಬ್ಬ ಒಬ್ಬರೇ ಒಂದು ಕಡೆ ತಪ್ಪಿಸಿಕೊಂಡು ಪರಾರಿಯಾದರು. ಅಲ್ಲಿಂದ ತಪ್ಪಿಸಿ ಕೊಂಡು ಬಂದ ಮೂವರು, ಹಿರಿಯಡ್ಕ- ಪೆರ್ಡೂರು ರಾಷ್ಟ್ರೀಯ ಹೆದ್ದಾರಿಗೆ ಬಂದು ಬೇರೆ ಕಾರಿನಲ್ಲಿ ಮಂಗಳೂರಿಗೆ ಹೋದರು.

ಆದರೆ ಒಬ್ಬರೇ ಓಡಿ ಹೋಗಿದ್ದ ಹುಸೈನಬ್ಬ ನಾಪತ್ತೆಯಾಗಿದ್ದರು. ಅವರ ಮೃತದೇಹವು ಇಂದು ಬೆಳಗ್ಗೆ 9 ಗಂಟೆಯ ಸುಮಾರಿಗೆ ಪೆರ್ಡೂರು ಗ್ರಾಮದ ಕೊತ್ಯಾರು ಹಾಡಿಯಲ್ಲಿ ಪತ್ತೆಯಾಯಿತು. ಸ್ಥಳೀಯ ನಿವಾಸಿ ಸುಂದರ ಎಂಬವರು ಕೆಲಸಕ್ಕೆ ಹೋಗುವಾಗ ಮೃತದೇಹವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇವರ ಸ್ಕಾರ್ಪಿಯೋ ವಾಹನದ ಎಲ್ಲ ಗಾಜುಗಳನ್ನು ಸಂಪೂರ್ಣ ಪುಡಿಗೈದು ಜಖಂಗೊಳಿಸಲಾಗಿದೆ.

ಕಣ್ಣಿ ಭಾಗದ ಬಳಿ ಗಾಯ: ಬಳಿಕ ಪೊಲೀಸರು ಮನೆಯವರಿಗೆ ದೂರವಾಣಿ ಕರೆ ಮಾಡಿ ಠಾಣೆಗೆ ಕರೆಸಿದರು. ಹುಸೈನಬ್ಬರ ಸಾವಿನ ಮಾಹಿತಿ ತಿಳಿಯುತ್ತಿದ್ದಂತೆ ಜೋಕಟ್ಟೆಯಿಂದ ಸಂಬಂಧಿಕರು ಮೃತದೇಹ ಇರಿಸಲಾದ ಮಣಿಪಾಲ ಆಸ್ಪತ್ರೆಯ ಶವಾಗಾರಕ್ಕೆ ಆಗಮಿಸಿದ್ದರು.

ಮೃತದೇಹದ ಕಣ್ಣಿನ ಭಾಗದ ಬಳಿ ಗಾಯ ಹಾಗೂ ರಕ್ತದ ಕಲೆಯನ್ನು ಕಂಡ ಮನೆಯವರು ಈ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ನೂರಾರು ಸಂಖ್ಯೆಯ ಜನ ಜಮಾಯಿಸಿ ದ್ದರು. ಠಾಣೆಗೆ ಆಗಮಿಸಿದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರಗಿ, ಮನೆಯರೊಂದಿಗೆ ಮಾತುಕತೆ ನಡೆಸಿದರು.

ಬಳಿಕ ಮೃತರ ಸಹೋದರ ಮುಹಮ್ಮದ್ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡರು. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಶವಾಗಾರದ ಬಳಿ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಬಳಿಕ ಶವಾಗಾರಕ್ಕೆ ಆಗಮಿಸಿದ ಎಸ್ಪಿ ಲಕ್ಷ್ಮಣ್ ನಿಂಬರಗಿ ಕುಟುಂಬದವರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆಗೆ ಅವಕಾಶ ಮಾಡಿ ಕೊಟ್ಟರು. ಸಂಜೆ ವೇಳೆ ಮೃತದೇಹವನ್ನು ಕುಟುಂಬವರಿಗೆ ಒಪ್ಪಿಸಲಾಯಿತು.

ಶವಾಗಾರಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್ ಆಗಮಿಸಿ ಮನೆಯವರಿಗೆ ಸಾಂತ್ವಾನ ಹೇಳಿದರು. ಸ್ಥಳದಲ್ಲಿ ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕ ಹೃಷಿಕೇಶ್ ಸೋನವಾಣೆ, ಕುಂದಾಪುರ ಡಿವೈಎಸ್ಪಿ ದಿನೇಶ್ ಕುಮಾರ್ ಮೊದಲಾದವರು ಹಾಜರಿದ್ದರು. ಮೃತರು ಪತ್ನಿ, ಮೂವರು ಪುತ್ರಿಯರು, ಐವರು ಪುತ್ರರನ್ನು ಅಗಲಿದ್ದಾರೆ.

ಎರಡು ವರ್ಷದ ಹಿಂದೆ ಮೂತ್ರ ಕುಡಿಸಿದ್ದರು !
ಕಳೆದ 35ವರ್ಷಗಳಿಂದ ಪೆರ್ಡೂರು, ಹಿರಿಯಡ್ಕ ಪರಿಸರದಲ್ಲಿ ದನದ ವ್ಯಾಪಾರ ನಡೆಸುತ್ತಿದ್ದ ಹುಸೈನಬ್ಬರ ಮೇಲೆ ಬಜರಂಗದಳದ ಕಾರ್ಯಕರ್ತರು ಈ ಹಿಂದೆ ಎರಡು ಮೂರು ಬಾರಿ ದಾಳಿ ನಡೆಸಿದ್ದರು. ಎರಡು ವರ್ಷಗಳ ಹಿಂದೆ ಇವರನ್ನು ಹಿಡಿದು ಮರಕ್ಕೆ ಕಟ್ಟಿ ಹಾಕಿ ದನದ ಮೂತ್ರವನ್ನು ಕುಡಿಸಿ ಹಿಂಸೆ ನೀಡಿದ್ದರು.

ಈ ಅಮಾನವೀಯ ಘಟನೆಯನ್ನು ಮೃತರ ಸಂಬಂಧಿಕರಾದ ಜೋಕಟ್ಟೆಯ ಶೇಕುಂಞಿ ಇಂದು ಮಣಿಪಾಲ ಶವಾಗಾರದ ಬಳಿ ಮಾಧ್ಯಮದವರ ಮುಂದೆ ಹೇಳಿಕೊಂಡರು. ಪೆರ್ಡೂರಿನಲ್ಲಿ ಬಹುತೇಕ ಮಂದಿಗೆ ಇವರ ಪರಿಚಯವಿದೆ. ಇಲ್ಲಿನ ಹಿರಿಯರು ಮನೆಮಂದಿಯಂತೆ ಇವರೊಂದಿಗೆ ನಡೆದುಕೊಳ್ಳುತ್ತಿದ್ದರು. ಆದರೆ ಕೆಲವೊಂದು ಯುವಕರ ಪಡೆ ಇವರ ಬಗ್ಗೆ ಧ್ವೇಷ ಕಾರುತ್ತಿದ್ದರು. ಇವರು ಸ್ಥಳೀಯ ದಲ್ಲಾಳಿಗಳಿಂದ ಹಣ ಕೊಟ್ಟೇ ದನಗಳನ್ನು ಖರೀದಿಸುತ್ತಿದ್ದರು. ಕಳವು ಮಾಡಿ ಯಾವುದೇ ವ್ಯಾಪಾರ ಮಾಡುತ್ತಿರಲಿಲ್ಲ ಎಂದು ಶೇಕುಂಞಿ ತಿಳಿಸಿದರು.

ಅಕ್ರಮ ಜಾನುವಾರು ಸಾಗಾಟ: ಪ್ರಕರಣ ದಾಖಲು
ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಸ್ಕಾರ್ಪಿಯೋ ವಾಹನವನ್ನು ಮೇ 30ರಂದು ಬೆಳಗಿನ ಜಾವ 5ಗಂಟೆ ಸುಮಾರಿಗೆ ಪೆರ್ಡೂರು ಗ್ರಾಮದ ಶೇಣರಬೆಟ್ಟು ಎಂಬಲ್ಲಿ ನಿಲ್ಲಿಸಲು ಸೂಚನೆ ನೀಡಿದರೂ ನಿಲ್ಲಿಸದೆ ಪರಾರಿ ಯಾಗಲು ಯತ್ನಿಸಿದಾಗ ಹತೋಟಿ ತಪ್ಪಿಸ್ಕಿಡ್ ಆಗಿ ಬಿತ್ತು. ಅದರಲ್ಲಿದ್ದವರು ಕತ್ತಲೆಯಲ್ಲಿ ಓಡಿ ಪರಾರಿಯಾದರು. ಬಳಿಕ ವಾಹನವನ್ನು ಪರಿಶೀಲಿಸಿದಾಗ 11 ಜಾನುವಾರುಗಳಿದ್ದು ಅದರಲ್ಲಿ ಎರಡು ಮೃತಪಟ್ಟಿತ್ತು. 4,00,000 ರೂ. ಮೌಲ್ಯ ಸ್ಕಾರ್ಪಿಯೋ ಹಾಗೂ 7,200ರೂ. ಮೌಲ್ಯ ಜಾನುವಾರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯಡ್ಕ ಪೊಲೀಸ್ ಠಾಣಾಧಿಕಾರಿ ಡಿ.ಎನ್. ಕುಮಾರ್ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

ಯಾರೇ ಆರೋಪಿಗಳಿದ್ದರೂ ಸೂಕ್ತ ಕ್ರಮ: ಎಸ್ಪಿ
ಹುಸೈನಬ್ಬರನ್ನು ಬಜರಂಗದಳವರು ಹೊಡೆದು ಕೊಲೆ ಮಾಡಿದ್ದಾರೆ ಎಂದು ಮೃತರ ಸಂಬಂಧಿಕರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಅದೇ ರೀತಿ ಅಕ್ರಮ ಜಾನುವಾರು ಸಾಗಾಟಕ್ಕೆ ಸಂಬಂಧಿಸಿದಂತೆಯೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಎರಡು ಪ್ರಕರಣಗಳ ಬಗ್ಗೆ ಕೂಲಂಕಷ ತನಿಖೆ ಮಾಡಲಾಗುತ್ತಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.

ಮಣಿಪಾಲ ಶವಾಗಾರದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೂರಿನಲ್ಲಿ ಸೂರಿ ಹಾಗೂ ಇತರರು ಈ ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ. ಇದರ ಹಿಂದೆ ಯಾರೇ ಆರೋಪಿಗಳಿದ್ದರೂ ಅವರ ವಿರುದ್ಧ ನಾವು ಸೂಕ್ತ ಕಾನೂನು ಕ್ರಮ ಜರಗಿಸುತ್ತೇವೆ. ಮರಣೋತ್ತರ ಪರೀಕ್ಷೆಯನ್ನು ಕುಟುಂಬದವರ ಮುಂದೆ ವಿಡಿಯೋಗ್ರಾಫಿ ನಡೆಸಿ ಮಾಡಲಾಗಿದೆ. ಅದರಲ್ಲಿ ಬಂದ ವರದಿಯಂತೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ವೈದ್ಯರು ಕೂಡಲೇ ವರದಿ ನೀಡುವ ನಿರೀಕ್ಷೆ ಇದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News