×
Ad

ದ.ಕ. ಜಿಲ್ಲೆ: ಬಿರುಸುಗೊಂಡ ಮುಂಗಾರು ಮಳೆ

Update: 2018-06-07 20:26 IST

ಮಂಗಳೂರು, ಜೂ. 7: ಕಳೆದ ಕೆಲವು ದಿನಗಳಿಂದ ಮರೆಯಾಗಿದ್ದ ಮುಂಗಾರು ಮಳೆ ಗುರುವಾರ ಚುರುಕುಗೊಂಡಿದೆ. ರಾತ್ರಿಯಿಂದ ಸುರಿದ ಮಳೆಯು ಗುರುವಾರವೂ ಮುಂದುವರಿದು ಬಿರುಸುಗೊಂಡಿದೆ. ಗುರುವಾರ ಬೆಳಗ್ಗೆ 8:30ರ ವರೆಗೆ ವರದಿಯಾಗಿರು ಮಳೆ ವಿವರ ಹೀಗಿದೆ.

ಬಂಟ್ವಾಳದಲ್ಲಿ 12 ಮಿ.ಮೀ., ಬೆಳ್ತಂಗಡಿಯಲ್ಲಿ 10.7 ಮಿ.ಮೀ., ಮಂಗಳೂರಿನಲ್ಲಿ 16.3 ಮಿ.ಮೀ., ಪುತ್ತೂರಿನಲ್ಲಿ 16.5 ಮಿ.ಮೀ. ಹಾಗೂ ಸುಳ್ಯದಲ್ಲಿ 7.4 ಮಿ.ಮೀ. ಮಳೆಯಾಗಿದೆ. ಬುಧವಾರ ಬೆಳಗ್ಗಿನ ಮಲೆ ವಿವರದಂತೆ ಬಂಟ್ವಾಳ 3.5, ಬೆಳ್ತಂಗಡಿ 15.2, ಮಂಗಳೂರು 9.6, ಪುತ್ತೂರು 18.9 ಹಾಗೂ ಸುಳ್ಯ 5.4 ಮಿ.ಮೀ. ಮಳೆಯಾಗಿತ್ತು.

ಈ ಪೈಕಿ ಬೆಳ್ತಂಗಡಿ ಹಾಗೂ ಪುತ್ತೂರು ತಾಲೂಕುಗಳಲ್ಲಿ ಗುರುವಾರದ ಮಳೆಗೆ ಹೋಲಿಸಿದರೆ ಬುಧವಾರ ಹೆಚ್ಚಿನ ಮಳೆಯಾಗಿದೆ. ಕಳೆದ ತಿಂಗಳ 29ರಂದು ಕರ್ನಾಟಕದ ಕರಾವಳಿಗೆ ಪ್ರವೇಶಿಸಿದ ಮುಂಗಾರು ಜಿಲ್ಲೆಯಾದ್ಯಂತ ಭಾರೀ ಮಳೆಗೆ ನಾಲ್ಕು ಜೀವಗಳು ಬಲಿ ಪಡೆದುಕೊಂಡಿತ್ತು. ಅಪಾರ ಹಾನಿ ಸಹಿತ ಜನಜೀವನ ಅಸ್ತವ್ಯಸ್ತಗೊಳಿಸಿತ್ತು. ಜಿಲ್ಲಾಡಳಿತ ವರದಿಯಂತೆ ಆರು ಗಂಟೆಗಳ ಆ ಮಹಾ ಮಳೆಗೆ ದ.ಕ. ಜಿಲ್ಲೆಯಲ್ಲಿ 35 ಮನೆಗಳಿಗೆ ಸಂಪೂರ್ಣ ಹಾನಿಯಾಗಿದ್ದವು. 42 ಮನೆಗಳಿಗೆ ಬಹುತೇಕ ಹಾಗೂ 483 ಮನೆಗಳಿಗೆ ಸಣ್ಣ ಪುಟ್ಟ ಹಾನಿ ಸಹಿತ ಜಿಲ್ಲೆಯಲ್ಲಿ ಒಟ್ಟು 20 ಕೋಟಿ ರೂ.ಗೂ ಅಧಿಕ ನಷ್ಟ ಸಂಭವಿಸಿತ್ತು. ಅಲ್ಲದೆ ಎಡೆಬಿಡದೆ ಸುರಿದ ಮಳೆಗೆ ಮಂಗಳೂರು ನಗರದ ಪ್ರಮುಖ ರಸ್ತೆಗಳು ಹಾಗೂ ಹೆದ್ದಾರಿಗಳಲ್ಲಿ ಕೃತಕ ನೆರೆ ಉಂಟಾಗಿ ಜಿನಜೀವನ ಅಸ್ತವ್ಯಸ್ತಗೊಂಡಿತ್ತು.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲೇ 215 ಮಿ.ಮೀ. ಮಳೆಯಾಗಿದ್ದು, 40 ಲಕ್ಷಕ್ಕೂ ಅಧಿಕ ಹಾನಿ ಸಂಭವಿಸಿತ್ತು. ನಗರದ ಕೊಟ್ಟಾರ ಚೌಕಿ ರಾಷ್ಟ್ರೀಯ ಹೆದ್ದಾರಿ ಮತ್ತು ಪಂಪ್‌ವೆಲ್ ರಾಷ್ಟ್ರೀ ಹೆದ್ದಾರಿಗಳಲ್ಲಿ ಕೃತಕ ನೆರೆ ಉಂಟಾಗಿ ಬಸ್ಸು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಉಡುಪಿ ಹಾಗೂ ಸುರತ್ಕಲ್ ಕಾವೂರು ಮೊದಲಾದ ಕಡೆಗಳಿಂದ ಕೂಳೂರು ರಾಷ್ಟ್ರೀಯ ಹೆದ್ದಾರಿಯಾಗಿ ಮಂಗಳೂರಿಗೆ ಆಗಮಿಸಿದ ಬಸ್ಸುಗಳು ಕೊಟ್ಟಾರ ಚೌಕಿಯಲ್ಲಿ ಉಂಟಾದ ಕೃತಕ ನೆರೆಗೆ ನಗರ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಪ್ರಯಾಣಿಕರು ಕೆಲವು ಗಂಟೆಗಳ ಕಾಲ ಪರದಾಡಬೇಕಾಯಿತು.

ಪ್ರಮುಖ ರಸ್ತೆಗಳನ್ನು ಸೇರು ಪಂಪ್‌ವೆಲ್‌ನಲ್ಲೂ ಬಿ.ಇಸಿ.ರೋಡ್, ಉಳ್ಳಾಲ ಕಡೆಯಿಂಗಳಿಂದ ಬರುವ ಬಸ್ಸುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ನಗರದ ಪ್ರಮುಖ ರಸ್ತೆಗಳಲ್ಲಿ ಉಂಟಾದ ನೆರೆಗೆ ಆಟೊ ರಿಕ್ಷಾಗಳು ಬಂದ್ ಬಿದ್ದು ಪರಾದಾಡಿದ್ದವು. ದಿಢೀರ್ ಸುರಿದ ಈ ಮಹಾ ಮಳೆಗೆ ಜಿಲ್ಲಾಡಳಿತ ಶಾಲೆಗಳಿಗೆ ಎರಡು ದಿನಗಳ ಕಾಲ ರಜೆ ಘೋಷಿಸಿತ್ತು. ಇದರಿಂದಾಗಿ ವಿದ್ಯಾರ್ಥಿಗಳು ಕೂಡ ವಾಹನ ಸಂಚಾರವಿಲ್ಲದೆ ಪೋಷಕರು ತಮ್ಮ ಮಕ್ಕಳನ್ನು ಮನೆಗೆ ಕರೆ ತರಲು ಪರದಾಡಬೇಕಾಯಿತು.

ಮೇ 29ರಂದು ಸುರಿದ ಮಹಾ ಮಳೆಗೆ ಚರಂಡಿಗಳ ತ್ಯಾಜ್ಯಗಳು ತುಂಬಿರುವುದು ಮತ್ತು ರಾಜಕಾಲುವೆಗಳ ಒತ್ತುವರಿ ಕಾರಣ ಎಂಬ ಆರೋಪ ಕೇಳಿಬಂದಿತ್ತು. ಆದರೂ ಜಿಲ್ಲಾಧಿಕಾರಿ ಆದೇಶದ ಬಳಿಕ ಮಂಗಳೂರು ಮಹಾನಗರ ಪಾಲಿಕೆಯು ರಾಜಕಾಲುವೆಗಳ ಒತ್ತುವರಿ ಕಾರ್ಯಾಚರಣೆಯನ್ನು ಆರಂಭಿಸಿದವು. ಅಲ್ಲದೆ, ನಗರದ ಕೆಲವು ರಸ್ತೆಗಳಲ್ಲಿನ ಚರಂಡಿಗಳಲ್ಲಿನ ತ್ಯಾಜ್ಯಗಳನ್ನು ತೆರವುಗೊಳಿಸುವ ಮೂಲಕ ನೀರು ಸರಾಗವಾಗಿ ಹರಿದು ಹೋಗಲು ಅನುವು ಮಾಡಿಕೊಡಲಾಗಿತ್ತು. ಇದೀಗ ಗುರುವಾರ ಚುರುಕು ಪಡೆದ ಮುಂಗಾರು ಮಳೆ ಮತ್ತೊಮ್ಮೆ ಪ್ರಾಣ-ಸೊತ್ತು ಹಾನಿ ಸಹಿತ ಜನಜೀವನವನ್ನು ಅಸ್ತವ್ಯವಸ್ತಗೊಳಿಸುವುದೇ ಎಂಬ ಆತಂಕ ಜನತೆಯನ್ನು ಕಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News