ಎಸ್ಡಿಪಿಐ ಬಂಟ್ವಾಳ ಪುರಸಭಾ ಸಮಿತಿ: ಅಧ್ಯಕ್ಷರಾಗಿ ಮೂನಿಶ್ ಆಲಿ, ಕಾರ್ಯದರ್ಶಿಯಾಗಿ ಸಿದ್ದಿಕ್
ಬಂಟ್ವಾಳ, ಜೂ. 8: ಎಸ್ಡಿಪಿಐ ಬಂಟ್ವಾಳ ಪುರಸಭಾ ಸಮಿತಿಯ ಆಂತರಿಕ ಚುನಾವಣೆಯು ಗೂಡಿನಬಳಿಯ ಸಾಮುದಾಯ ಭವನದಲ್ಲಿ ಸಮಿತಿಯ ಅಧ್ಯಕ್ಷ ಯೂಸುಫ್ ಆಲಡ್ಕ ಅವರ ಅಧ್ಯಕ್ಷತೆ ಶುಕ್ರವಾರ ನಡೆಯಿತು.
ಇದೇ ಸಂದರ್ಭದಲ್ಲಿ ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆ ನಡೆಯಿತು. ಪುರಸಭಾ ಸಮಿತಿಯ ನೂತನ ಅಧ್ಯಕ್ಷರಾಗಿ ಮುನೀಶ್ ಅಲಿ, ಉಪಾಧ್ಯಕ್ಷರಾಗಿ ಅಕ್ಬರ್ ಅಲಿ, ಕಾರ್ಯದರ್ಶಿಯಾಗಿ ಸಿದ್ದಿಕ್ ನಂದರಬೆಟ್ಟು, ಜೊತೆ ಕಾರ್ಯದರ್ಶಿಯಾಗಿ ಅನ್ವರ್ ಆಲಡ್ಕ, ಕೋಶಾಧಿ ಕಾರಿಯಾಗಿ ಇಕ್ಬಾಲ್ ಮೈನ್ಸ್ ಅವರನ್ನು ಆಯ್ಕೆ ಮಾಡಲಾಯಿತು.
ನಿಕಟ ಪೂರ್ವ ಅಧ್ಯಕ್ಷರಾಗಿದ್ದ ಯೂಸುಫ್ ಆಲಡ್ಕ ಅವರಿಂದ ಅಧಿಕಾರ ವಹಿಸುಕೊಂಡು ಮುನೀಶ್ ಅಲಿ ಮಾತನಾಡಿ, ಪ್ರಸಕ್ತ ರಾಜಕೀಯ ಸನ್ನಿವೇಶಗಳನ್ನು ಗಮನಿಸಿದಾಗ ಮತ್ತು ಪುರಸಭಾ ವ್ಯಾಪ್ತಿಯಲ್ಲಿ ಪಕ್ಷದ ಬಲ ಹಾಗೂ ಸಾಮರ್ಥವನ್ನು ಅವಲೋಕಿಸಿದಾಗ ಮುಂದಿನ ಅವಧಿಯಲ್ಲಿ ಪುರಸಭೆಯ ಅಧಿಕಾರವು ಎಸ್ಡಿಪಿಐ ತೆಕ್ಕೆಗೆ ಬೀಳಲಿದೆ ಎಂದು ಹೇಳಿದರು.
ಪಕ್ಷದ ವಿವಿಧ ಸ್ಥರಗಳಲ್ಲಿ ಆಂತರಿಕ ಚುನಾವಣೆ ನಡೆಯುತ್ತಿರುವುದರಿಂದ ನಾಯಕತ್ವದಲ್ಲಿ ಉಂಟಾಗುವ ಬದಲಾವಣೆಯು ಮುಂದಿನ ನಗರ ಸಭೆ/ ಪುರಸಭೆಗಳ ಆಡಳಿತಕ್ಕಾಗಿ ನಡೆಯುವ ಚುನಾವಣೆಯಲ್ಲಿ ಪಕ್ಷವು ಇನ್ನಷ್ಟು ಕ್ರಿಯಾಶೀಲವಾಗಿ ಕಾರ್ಯಪ್ರವೃತ್ತಿಯಾಗಲು ಪೂರಕವಾಗಲಿದೆ ಎಂದರು.
ರಾಜ್ಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿ, ಪಕ್ಷವು ಕಳೆದ ಪುರಸಭಾ ಚುನಾವಣೆಯಲ್ಲಿ ಮೂರು ಸ್ಥಾನಗಳನ್ನು ಪಡೆದಿತ್ತು. ಅದೇ ರೀತಿ ಈ ಬಾರಿ ಕೂಡ ಕ್ಷೇತ್ರದ ಎಲ್ಲ 27 ವಾರ್ಡ್ಗಳಲ್ಲಿ ಗುರಿ ಇಟ್ಟು ಕೆಲಸ ಮಾಡಿದರೆ, ನಾವು ನಿರ್ಣಾಯಕ ಪಾತ್ರದಾರಿಗಳಾಗಿ ಹೊರಹೊಮ್ಮಲಿದ್ದೇವೆ. ಈ ನಿಟ್ಟಿನಲ್ಲಿ ಎಲ್ಲ ಕಾರ್ಯಕರ್ತರು ಮುಂದಿನ ಮೂರು ತಿಂಗಳು ಅವಿರತವಾಗಿ ಶ್ರಮಿಸಬೇಕು ಎಂದು ಹೇಳಿದರು.
ಚುನಾವಣಾ ಆಧಿಕಾರಿಯಾಗಿ ಸತ್ತಾರ್ ಕಲ್ಲಡ್ಕ ಹಾಗೂ ರಿಟರ್ನಿಂಗ್ ಆಫೀಸರ್ ಆಗಿ ಖಲಂದರ್ ಪರ್ತಿಪ್ಪಾಡಿ ನಡೆಸಿಕೊಟ್ಟರು.ಸಂಧರ್ಭದಲ್ಲಿ ಕ್ಷೇತ್ರ ಅಧ್ಯಕ್ಷ ಶಾಹುಲ್ ಹಮೀದ್, ಕಾರ್ಯದರ್ಶಿ ಇಸ್ಮಾಯಿಲ್ ಬಾವ, ಪುರಸಭಾ ಸದಸ್ಯ ಇಕ್ಬಾಲ್ ಐಎಂಆರ್ ಮುಂತಾದವರು ಉಪಸ್ಥಿತರಿದ್ದರು.