ಪೆರ್ಡೂರು ಪ್ರಕರಣದ ಹಿಂದೆ ಕಾಂಗ್ರೆಸ್ ಷಡ್ಯಂತ್ರ: ಬಿಜೆಪಿ
ಉಡುಪಿ, ಜೂ.8: ಪೆರ್ಡೂರಿನಲ್ಲಿ ನಡೆದ ಹುಸೇನಬ್ಬ ಸಾವು ಪ್ರಕರಣದ ಹಿಂದೆ ಕಾಂಗ್ರೆಸ್ನ ಪಕ್ಷದ ವ್ಯವಸ್ಥಿತ ಸಂಚು ಅಡಗಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯಕ್ ಗಂಭೀರ ಆರೋಪ ಮಾಡಿದ್ದಾರೆ.
ಪೆರ್ಡೂರು ಶಾಣರಬೆಟ್ಟುವಿನ ದೀಪಕ್ ಹೆಗ್ಡೆ ಈ ಕೃತ್ಯದ ರೂವಾರಿಯಾಗಿದ್ದು, ಈತ ಪೆರ್ಡೂರಿನ ಈ ಹಿಂದಿನ ಕಾಂಗ್ರೆಸ್ ಬೆಂಬಲಿತ ಪಂಚಾಯತ್ ಸದಸ್ಯನಾಗಿದ್ದನು. ದೀಪಕ್ ಹೆಗ್ಡೆ ತನ್ನ ಮನೆಯ ದನಗಳೊಂದಿಗೆ ಒಟ್ಟು 14 ದನಗಳನ್ನು ಒಟ್ಟುಗೂಡಿಸಿ ಮೃತ ಹುಸೇನಬ್ಬರನ್ನು ವ್ಯಾಪಾರಕ್ಕಾಗಿ ಕರೆಸಿದ್ದನು. ತದನಂತರ ಆತ ಬಜರಂಗದಳದ ಕಾರ್ಯಕರ್ತರಿಗೆ ದೂರವಾಣಿ ಕರೆ ಹಾಗೂ ಮೆಸೇಜ್ ಮಾಡಿದ್ದಾನೆ. ಇದೊಂದು ವ್ಯವಸ್ಥಿತ ಸಂಚು. ಇದರ ಹಿಂದೆ ಕಾಂಗ್ರೆಸ್ನ ಷಡ್ಯಂತ್ರ ಇದೆ ಎಂದು ಅವರು ತಿಳಿಸಿದರು.
ಪೊಲೀಸ್ ಇಲಾಖೆ ಪೆರ್ಡೂರಿನ ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡು ಇದರ ಹಿಂದಿನ ಷಡ್ಯಂತ್ರವನ್ನು ಬಯಲಿಗೆಳೆಯಬೇಕು. ಮಾತ್ರ ವಲ್ಲದೇ ಈಗಾಗಲೇ ಬಂಧಿತನಾಗಿರುವ ದೀಪಕ್ ಹೆಗ್ಡೆಯನ್ನು ಈ ಪ್ರಕರಣದಲ್ಲಿ ಒಂದನೇ ಆರೋಪಿಯನ್ನಾಗಿ ಪರಿಗಣಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದರು.