ಆರೆಸ್ಸೆಸ್ ಕೇಂದ್ರ ಕಚೇರಿಗೆ ಪ್ರಣವ್ ಭೇಟಿ: ಅಡ್ವಾಣಿ ಪ್ರತಿಕ್ರಿಯಿಸಿದ್ದು ಹೀಗೆ…
ಹೊಸದಿಲ್ಲಿ, ಜೂ.8: ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ನಾಗ್ಪುರದ ಆರೆಸ್ಸೆಸ್ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದು ಮತ್ತು ಭಾರತೀಯ ರಾಷ್ಟ್ರವಾದದ ಉದಾತ್ತ ಚಿಂತನೆಗಳು ಮತ್ತು ಆದರ್ಶಗಳ ಕುರಿತು ಮಾಡಿದ ಭಾಷಣ ದೇಶದ ಸಮಕಾಲೀನ ಇತಿಹಾಸದಲ್ಲಿ ಮಹತ್ವದ ಘಟನೆಯಾಗಿದೆ ಎಂದು ಹಿರಿಯ ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿ ಅವರು ಶುಕ್ರವಾರ ಇಲ್ಲಿ ಬಣ್ಣಿಸಿದರು.
ಸಂಘಟನೆಯ ಆಹ್ವಾನವನ್ನು ಸ್ವೀಕರಿಸಿದ್ದಕ್ಕೆ ದಶಕಗಳ ಕಾಲ ಕಾಂಗ್ರೆಸ್ನೊಂದಿಗೆ ಗುರುತಿಸಿಕೊಂಡಿದ್ದ ಮುಖರ್ಜಿ ಮತ್ತು ಅವರನ್ನು ಆಹ್ವಾನಿಸಿದ್ದಕ್ಕೆ ಆರೆಸ್ಸೆಸ್ನ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಪ್ರಶಂಸಿಸಿದ ಆಡ್ವಾಣಿ,ಉಭಯ ನಾಯಕರು ವ್ಯಕ್ತಪಡಿಸಿದ ಅಭಿಪ್ರಾಯಗಳಲ್ಲಿ ಗಮನಾರ್ಹ ಹೊಂದಾಣಿಕೆಯಿತ್ತು ಎಂದು ಹೇಳಿದರು.
ಮುಖರ್ಜಿ ಮತ್ತು ಭಾಗವತ್ ವೈಚಾರಿಕ ಸಂಬದ್ಧತೆ ಮತ್ತು ಮತಭೇದಗಳನ್ನು ಮೀರಿ ಸಂವಾದದ ಉತ್ತಮ ಉದಾಹರಣೆಯನ್ನು ನಮ್ಮ ಮುಂದಿರಿಸಿದ್ದಾರೆ ಎಂದು ಆರೆಸ್ಸೆಸ್ನ ಆಜೀವ ಸ್ವಯಂಸೇವಕರಾಗಿರುವ ಆಡ್ವಾಣಿ ಹೇಳಿದರು.
ಧರ್ಮಗಳ ಬಹುತ್ವ ಸೇರಿದಂತೆ ಎಲ್ಲ ವೈವಿಧ್ಯತೆಗಳನ್ನು ಒಪ್ಪಿಕೊಂಡಿರುವ ಮತ್ತು ಗೌರವಿಸಿರುವ ಭಾರತದ ಏಕತೆಯ ಅಗತ್ಯವನ್ನು ಅವರಿಬ್ಬರೂ ಪ್ರಮುಖವಾಗಿ ಬಿಂಬಿಸಿದ್ದಾರೆ ಎಂದು ಆಡ್ವಾಣಿ ಹೇಳಿಕೆಯೊಂದರಲ್ಲಿ ತಿಳಿಸಿದರು.
ಭಾಗವತ್ ಅವರ ನೇತೃತ್ವದಲ್ಲಿ ಆರೆಸ್ಸೆಸ್ನ ವಿಸ್ತರಣೆ ಮತ್ತು ಮಾತುಕತೆಗಳ ಮೂಲಕ ರಾಷ್ಟ್ರದ ವಿವಿಧ ವರ್ಗಗಳನ್ನು ತಲುಪುವ ಅದರ ತೀವ್ರ ಪ್ರಯತ್ನಗಳ ಬಗ್ಗೆ ತನ್ನ ಹರ್ಷ ವ್ಯಕ್ತಪಡಿಸಿದ ಅವರು, ಮುಕ್ತ ಮನೋಭಾವ ಮತ್ತು ಪರಸ್ಪರ ಗೌರವಗಳೊಂದಿಗೆ ನಡೆಸುವ ಇಂತಹ ಸಂವಾದಗಳು ನಮ್ಮೆಲ್ಲರ ಕನಸಿನ ಭಾರತ ನಿರ್ಮಾಣಕ್ಕಾಗಿ ಇಂದು ಅತ್ಯಂತ ಅಗತ್ಯವಾಗಿರುವ ಸಹಿಷ್ಣುತೆ, ಸದ್ಭಾವ ಮತ್ತು ಸಹಕಾರದ ವಾತಾವರಣವನ್ನು ಸೃಷ್ಟಿಸುವಲ್ಲಿ ಖಂಡಿತವಾಗಿಯೂ ನೆರವಾಗಲಿವೆ ಎಂದರು.
ಆರೆಸ್ಸೆಸ್ನ ಆಹ್ವಾನವನ್ನು ಸ್ವೀಕರಿಸುವ ಮೂಲಕ ಮುಖರ್ಜಿಯವರು ತನ್ನ ಸದ್ಭಾವನೆಗಳನ್ನು ಪ್ರದರ್ಶಿಸಿದ್ದಾರೆ ಎಂದು ಪ್ರಶಂಸಿಸಿದ ಆಡ್ವಾಣಿ, ಅವರೊಂದಿಗಿನ ತನ್ನ ದೀರ್ಘಕಾಲದ ಸಂಬಂಧವನ್ನು ನೆನಪಿಸಿಕೊಂಡರು.