ಗೃಹರಕ್ಷಕರು ಸಮಾಜದ ಆಸ್ತಿ: ಡಾ.ಚೂಂತಾರು
Update: 2018-06-10 23:01 IST
ಮಂಗಳೂರು, ಜೂ. 10: ಮಂಗಳೂರಿನಲ್ಲಿ ಉಂಟಾದ ನೆರೆ ಸಂದರ್ಭದಲ್ಲಿ ಉತ್ತಮ ಸೇವೆ ಸಲ್ಲಿಸಿದ ಗೃಹರಕ್ಷಕರನ್ನು ಇತ್ತೀಚೆಗೆ ಜಿಲ್ಲಾ ಗೃಹರಕ್ಷಕದಳದ ವತಿಯಿಂದ ಹೂವು ಹಣ್ಣು ನೀಡಿ, ಶಾಲು ಹೊದಿಸಿ ಸನ್ಮಾನಿಸಲಾಯಿತು.
ನೆರೆಯ ಸಂದರ್ಭದಲ್ಲಿ ಪಾಂಡೇಶ್ವರ ಮತ್ತು ಅತ್ತಾವರದ ಬಳಿ ಕೃತಕ ನೆರೆ ಉಂಟಾದಾಗ ಸ್ಥಳೀಯ ನಿವಾಸಿಗಳನ್ನು ಬೋಟ್ಗಳ ಮುಖಾಂತರ ಸ್ಥಳಾಂತರ ಮಾಡುವಾಗ ಅಸಾಮಾನ್ಯ ಧೈರ್ಯ ಮತ್ತು ಬುದ್ಧಿಮತ್ತೆ ಉಪಯೋಗಿಸಿದ ಗೃಹರಕ್ಷಕರಾದ ಕೇಶವ, ಪ್ರಜ್ವಲ್ ಡಿಸೋಜ ಮತ್ತು ಚೇತನ್ ಕುಮಾರ್ ಅವರನ್ನು ಜಿಲ್ಲಾ ಸಮಾದೇಷ್ಟರಾದ ಡಾ.ಮುರಲೀ ಮೋಹನ್ ಚೂಂತಾರು ಸನ್ಮಾನಿಸಿದರು.
ಕಷ್ಟಕರ ಪರಿಸ್ಥಿತಿಯಲ್ಲಿ ಎದೆಗುಂದದೆ ಸಾರ್ವಜನಿಕರ ಸೇವೆಗೆ ಕಟ್ಟಿಬದ್ಧರಾದ ಗೃಹರಕ್ಷಕರು ನಿಜವಾಗಿಯೂ ದೇಶದ ಮತ್ತು ಸಮಾಜದ ಆಸ್ತಿ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು. ಉಪಸಮಾದೇಷ್ಟ ರಮೇಶ್, ಘಟಕಾಧಿಕಾರಿ ಮಾರ್ಕ್ಶೇರಾ, ಹಿರಿಯ ಗೃಹರಕ್ಷಕ ರಮೇಶ್ ಭಂಡಾರಿ, ಸ್ಟಾಫ್ ಆಫೀಸರ್ ಉಷಾ ಮುಂತಾದವರು ಉಪಸ್ಥಿತರಿದ್ದರು.