×
Ad

ಬಂಟ್ವಾಳದಲ್ಲಿ ಹಿಂದೂಗಳ ಸ್ವಾಭಿಮಾನ ಗೆದ್ದಿದೆ: ಶಾಸಕ ಸುನೀಲ್ ಕುಮಾರ್

Update: 2018-06-12 22:24 IST

ಬಂಟ್ವಾಳ, ಜೂ.12: ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಹಿಂದೂಗಳ ಸ್ವಾಭಿಮಾನ ಗೆದ್ದಿದೆ. ಹಿಂದೂಗಳನ್ನು ಅಪಮಾನ ಮಾಡಿದವರಿಗೆ ಸೋಲಾಗಿದೆ. ಬಂಟ್ವಾಳದಲ್ಲಿ ಶ್ರೀರಾಮನನ್ನು ಗೆಲ್ಲಿಸಿದ ಜನತೆಗೆ ಅಭಿನಂದನೆಗಳು ಎಂದು ಕಾರ್ಕಳ ಶಾಸಕ ಸುನೀಲ್ ಕುಮಾರ್ ಹೇಳಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಬಂಟ್ವಾಳ ತಾಲೂಕಿನ ಬ್ರಹ್ಮರಕೂಟ್ಲು ವಿನಲ್ಲಿರುವ ಬಂಟವಾಳ ಬಂಟರ ಭವನದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

10-15 ವರ್ಷಗಳಲ್ಲಿ ಬಂಟ್ವಾಳ ಸಹಿತ ಜಿಲ್ಲೆಯಲ್ಲಿ ನೆಮ್ಮದಿಯ ವಾತಾವರಣವಿರಲಿಲ್ಲ. ಬೆಳಗ್ಗೆ ಮನೆಯಿಂದ ಹೊರ ಹೋದವರು ರಾತ್ರಿ ಮನೆಗೆ ಬರುವ ಧೈರ್ಯವಿರಲಿಲ್ಲ. ಅಲ್ಲದೆ, ಹಿಂದೂ ಕಾರ್ಯಕರ್ತರ ಮೇಲಿನ ನಿರಂತರ ಹಲ್ಲೆ ಹಾಗೂ ಮುಂತಾದ ಘಟನೆಗಳಿಗೆ ಈ ಚುನಾವಣೆ ಉತ್ತರ ಕೊಟ್ಟಿದೆ. ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಗೆಲ್ಲಿಸಿದ್ದು, ಹಿಂದುತ್ವವೇ ಹೊರತು ಬೇರೆನೂ ಅಲ್ಲ. ಮುಂದಿನ ಚುನಾವಣೆಯನ್ನು ಕೂಡಾ ಹಿಂದುತ್ವದ ಆಧಾರ ಮೇಲೆಯೇ ಗೆಲ್ಲುತ್ತೇವೆ. ಅದರಲ್ಲಿ ಯಾವತ್ತೂ ರಾಜಿಮಾಡಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹಿಂದೂ ಸಮಾಜವನ್ನು ಕೀಳಾಗಿ ಕಂಡಿರುವ ಹಾಗೂ ತಾನು ಅಲ್ಲಾಹನ ಕೃಪೆಯಿಂದ ಗೆದ್ದಿದ್ದು ಎಂದು ಹೇಳಿರುವ ಇಲ್ಲಿನ ಶಾಸಕರು, ನ್ಯಾಯ ಮತ್ತು ಸತ್ಯ ಬೇಕು ಅಂದಾಗ, ಅಲ್ಲಾಹನ ಬಳಿ ಹೋಗದೇ ಹಿಂದೂ ದೈವಗಳ ಬಳಿ ಹೋಗಬೇಕಾಯಿತು ಎಂದು ವ್ಯಂಗವಾಡಿದ ಅವರು, ಬಂಟ್ವಾಳದಲ್ಲಿ ನೆಮ್ಮದಿ ವಾತಾವರಣ ನಿರ್ಮಾಣವಾಗಬೇಕಿದೆ ಎಂದರು.

ಬಿಜೆಪಿ ಕಾರ್ಯಕರ್ತರು ಕೈಗೆ ಬಳೆಹಾಕಿ ಕುಳಿತುಕೊಂಡಿಲ್ಲ: ನಳಿನ್

ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಬಿಜೆಪಿ ಗೆಲುವು ಹಿಂದೂ ವಿಚಾರಧಾರೆಯ ಗೆಲುವು ಎಂದು ರಮಾನಾಥ ರೈ ಅವರೇ ಒಪ್ಪಿಕೊಂಡಿದ್ದಾರೆ. ಅವರಿಗೆ ಇದೀಗ ಹಿಂದೂಗಳ ಶಕ್ತಿ ಮನವರಿಕೆಯಾಗಿದೆ. ಇದುವೇ ನಮ್ಮ ಹಿಂದೂ ಶಕ್ತಿಯ ಚೈತನ್ಯ ಎಂದ ಅವರು, ನಮ್ಮ ಶಾಸಕರ ಹೆಸರುಗಳನ್ನು ಕೆಡಿಸುವ ಉದ್ದೇಶದಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಾಂಗ್ರೆಸ್ ಪ್ರಾಯೋಜಕತ್ವದ ಕೋಮುಗಲಭೆಗಳು ಮತ್ತೆ ನಡೆಯುತ್ತಿವೆ. ಜಿಲ್ಲೆಯಲ್ಲಿ ಬಿಜೆಪಿಯ ಗೆಲುವನ್ನು ಅರಗಿಸಲು ಸಾಧ್ಯವಾಗದ ಕಾಂಗ್ರೆಸ್ ಕಾರ್ಯಕರ್ತರು, ಬಿಜೆಪಿಯ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಬಿಜೆಪಿ ಕಾರ್ಯಕರ್ತರು ಕೈಗೆ ಬಳೆ ಹಾಕಿ ಕುಳಿತುಕೊಂಡಿಲ್ಲ. ನಿಮಗೆ ಎಚ್ಚರಿಕೆಯನ್ನು ನೀಡುತ್ತಿದ್ದೇವೆ, ಮುಂದಿನ ದಿನಗಳಲ್ಲಿ ಇದೇ ರೀತಿಯಾದ ಗೂಂಡಾಗಿರಿಯನ್ನು ಮುಂದುವರಿಸಿದರೆ, ಬಿಜೆಪಿ ತಕ್ಕ ಪಾಠ ಕಲಿಸಲಿದೆ. ಈಗ ನೀವು ಜಿಲ್ಲೆಯಲ್ಲಿ ಒಂದು ಕ್ಷೇತ್ರದಲ್ಲಿ ಗೆದ್ದಿದ್ದೀರಿ. ಮುಂದಿನ ಚುನಾವಣೆಯಲ್ಲಿ ಅದನ್ನು ಕೂಡಾ ಸಮುದ್ರಕ್ಕೆ ಎಸೆಯಲಿದ್ದೇವೆ ಎಂದು ಹೇಳಿದರು. 

ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರಕಾರ ಡೈವರ್ಸ್ ಹಂತಕ್ಕೆ ಬಂದಿದ್ದು, ಮೂರು ತಿಂಗಳ ಬಳಿಕ ಮತ್ತೆ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಸಂಸದ ನಳಿನ್ ಭವಿಷ್ಯ ನುಡಿದರು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕಾ ಉಳಿಪಾಡಿಗುತ್ತು ಅಭಿನಂದನಾ ಭಾಷಣ ಮಾಡಿ, ಗೆಲುವನ್ನು ಪಕ್ಷದ ಕಾರ್ಯಕರ್ತರಿಗೆ ಅರ್ಪಣೆ ಮಾಡಿದರು. ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ, ಶಾಸಕರಾದ ಆರ್.ಲಾಲಾಜಿ ಮೆಂಡನ್, ಉಮಾನಾಥ ಕೋಟ್ಯಾನ್, ಎಸ್.ಅಂಗಾರ, ವಿಪಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಂತೋಷ ಕುಮಾರ್ ರೈ ಬೋಳಿಯಾರ್, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಪ್ರತಾಪಸಿಂಹ ನಾಯಕ್ ಬೆಳ್ತಂಗಡಿ ಸಭೆಯನ್ನುದ್ದೇಶಿಸಿ ಮಾತನಾಡಿ, ಕಾರ್ಯಕರ್ತರು ಹಾಗೂ ಪೇಜ್ ಪ್ರಮುಖರನ್ನು ಅಭಿನಂದಿಸಿ ಮುಂದಿನ ಲೋಕಸಭಾ ಚುನಾವಣೆಗೂ ಸಜ್ಜಾಗುವಂತೆ ಸಲಹೆ ನೀಡಿದರು.

ಶಾಸಕರಾದ ಸಂಜೀವ ಮಠಂದೂರು, ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಮಲ್ಲಿಕಾ ಪ್ರಸಾದ್ ಭಂಡಾರಿ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಸದಸ್ಯರಾದ ರವೀಂದ್ರ ಕಂಬಳಿ, ತುಂಗಪ್ಪ ಬಂಗೇರ, ಕಮಾಲಾಕ್ಷಿ ಪೂಜಾರ್ತಿ, ಧನಲಕ್ಷ್ಮಿ ಗಟ್ಟಿ, ರಾಜ್ಯ ಸಹ ವಕ್ತಾರೆ ಸುಲೋಚನ ಜಿ.ಕೆ.ಭಟ್, ಡಾ.ಪ್ರಸಾದ್ ಭಂಡಾರಿ ಪುತ್ತೂರು, ಪಕ್ಷದ ಪ್ರಮುಖರಾದ ಚಂದ್ರಶೇಖರ ಉಚ್ಚಿಲ್, ಜಿ.ಆನಂದ, ದಿನೇಶ್ ಅಮ್ಟೂರು, ಸತೀಶ್ ಕುಮೇರಡ್ಕ, ಕ್ಯಾ.ಬ್ರಿಜೇಶ್ ಚೌಟ, ರುಕ್ಮಯ ನಾಯ್ಕಿ,ಸುಮೀತ್ ರಾಜ್, ಪೂಜಾ ಪೈ, ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿಗುತ್ತು ಮೊದಲಾವರು ವೇದಿಕೆಯಲ್ಲಿದ್ದರು.

ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವದಾಸ ಶೆಟ್ಟಿ ಪ್ರಸ್ತಾವಿಸಿ, ಸ್ವಾಗತಿಸಿದರು. ಪ್ರ.ಕಾರ್ಯದರ್ಶಿ ಮೋನಪ್ಪ ದೇವಸ್ಯ ವಂದಿಸಿದರು. ರಾಮದಾಸ ಬಂಟ್ವಾಳ ನಿರೂಪಿಸಿದರು. ಗಂಗಾಧರ ಮಾಣಿ ಮಂದೆ ಮಾತರಂ ಗೀತೆ ಹಾಡಿದರು.

ಸಭಾ ಕಾರ್ಯಕ್ರಮದ ಬಳಿಕ ಖ್ಯಾತ ಕಲಾವಿದರನ್ನೊಳಗೊಂಡ ತಂಡದಿಂದ ಪಟ್ಲ ಸತೀಶ್ ಶೆಟ್ಟಿ ಅವರ ನೇತೃತ್ವದಲ್ಲಿ ಯಕ್ಷ-ಗಾನ-ವೈಭವ ನಡೆಯಿತು.
ಸಭಾಂಗಣದಲ್ಲಿ ಹಾಗೂ ಹೊರಭಾಗ, ಬೋಜನ ಶಾಲೆಯಲ್ಲೂ ಕಾರ್ಯಕ್ರಮ ವೀಕ್ಷಿಸಲು ಎಲ್‌ಇಡಿ ಪರದೆ ಅಳವಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News