×
Ad

ಮಾರಿಕೊಂಡ ಮಾಧ್ಯಮಗಳನ್ನು ಗೌರವಿಸಿದರೆ ನಾನೇ ನೀಚ: ವಸಂತ ಬಂಗೇರ ಆಕ್ರೋಶ

Update: 2018-06-14 21:55 IST

ಮಂಗಳೂರು, ಜೂ.14: ಪತ್ರಕರ್ತರ ವಿರುದ್ಧ ಮಾಜಿ ಶಾಸಕ ವಸಂತ ಬಂಗೇರ ಅವರು ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಚಾರ್ಮಾಡಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಚಾರ್ಮಾಡಿಯಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಬಂಗೇರ, “ಪತ್ರಿಕೆಗಳ ಮೇಲೆ ನನಗೆ ಗೌರವವಿತ್ತು. ಆದರೆ ಆ ಗೌರವವನ್ನು ಮಾಧ್ಯಮಗಳು ಮೋದಿಯಿಂದಾಗಿ ಕಳೆದುಕೊಂಡಿವೆ. ನೀವು ನಿಮ್ಮನ್ನು ಮೋದಿಗೆ ಮಾರಾಟ ಮಾಡಿಕೊಂಡಿದ್ದೀರಿ. ಮೊನ್ನೆ ನಡೆದ ಚುನಾವಣೆಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ 20,400 ಮತಗಳಿಂದ ಗೆದ್ದರು. ಮರುಮತದಾನ ನಡೆಯಿತು. ಒಂದು ಬೂತ್ ನಲ್ಲಿ ವ್ಯತ್ಯಾಸ ಬಂತು. ಲೆಕ್ಕ ಮಾಡಿದಾಗ 20 ಸಾವಿರ ಕಾಂಗ್ರೆಸ್ ಮತಗಳು ಬಿಜೆಪಿಗೆ ಬಿದ್ದದ್ದು ಪತ್ತೆಯಾಯಿತು. ನಿಮ್ಮ ಪತ್ರಿಕೆಯಲ್ಲಿ ಈ ಸುದ್ದಿ ಪ್ರಕಟವಾಗಿದೆಯೇ?” ಎಂದವರು ಪ್ರಶ್ನಿಸಿದರು.

“ನನಗೆ ಪ್ರಚಾರದ ಅಗತ್ಯವಿಲ್ಲ. ನಿಮಗೆ ಸಮಾಜವನ್ನು ತಿದ್ದುವ ಜವಾಬ್ದಾರಿಯಿದೆ. ನನ್ನಂತಹ ಕಳ್ಳರನ್ನು ಅಂದರೆ ರಾಜಕಾರಣಿಗಳನ್ನು ತಿದ್ದುವ ಕೆಲಸ ನಿಮ್ಮದು. ದೇಶವನ್ನು ಮುನ್ನಡೆಸುವವರು ನೀವು. ಆದರೆ ನೀವು ನಿಮ್ಮನ್ನು ಪ್ರಧಾನಿ ಮೋದಿಗೆ ಮಾರಿಕೊಂಡಿದ್ದೀರಿ. ಮೋದಿ ಇನ್ನು ಮುಂದೆ ಇದ್ದರೆ ಈ ದೇಶವನ್ನು ಮಾರುತ್ತಾನೆ. ಪ್ರಜಾಪ್ರಭುತ್ವ ನಾಶವಾಗುತ್ತದೆ” ಎಂದು ಬಂಗೇರ ಹೇಳಿದರು.

ತಾನು ಹೇಳಿದ ಎಲ್ಲವನ್ನೂ ಪ್ರಕಟಿಸಬೇಕು ಎಂದ ಅವರು, “ಒಂದಕ್ಷರವೂ ಬಿಡಬೇಡಿ. ಅವನಿಗೂ ಇದು ತಲುಪಲಿ. ಇಂತಹ ನೀಚಕೃತ್ಯ ಮಾಡುವವನು, ಪ್ರಜಾಪ್ರಭುತ್ವ ಕಗ್ಗೊಲೆ ಮಾಡುವವನು ಬದುಕಬಾರದು. ಅಂತಹ ಪತ್ರಿಕೆಯವರೂ, ಟಿವಿಯವರೂ ಬದುಕಬಾರದು. ನಾನು ಪತ್ರಿಕೆಗೆ, ಮಾಧ್ಯಮಕ್ಕೆ ಗೌರವ ಕೊಡುವಂತಹ ನೀಚನಲ್ಲ. ಗೌರವ ಕೊಟ್ಟರೆ ನಾನೇ ನೀಚನಾಗಿ ಬಿಡುತ್ತೇನೆ. ಸಮಾಜವನ್ನು ತಿದ್ದುವಂತಹವರು ಮಾಧ್ಯಮದವರು. ಆದರೆ ಯಾರಿಗೋ ನಿಮ್ಮನ್ನು ಮಾರಿಕೊಂಡು ಈ ದೇಶವನ್ನು ಅಧೋಗತಿಗೆ ಕೊಂಡೊಯ್ಯುತ್ತಿದ್ದೀರಿ. ಈ ದೇಶ ಮೋದಿಯಿದ್ದರೆ ಸರ್ವನಾಶವಾಗುತ್ತದೆ” ಎಂದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News