×
Ad

ಕರ್ತವ್ಯ ನಿರ್ವಹಣೆ ಮಾನವೀಯವಾಗಿರಲಿ: ಪಿಡಿಒಗಳಿಗೆ ಭಟ್ ಕರೆ

Update: 2018-06-18 20:02 IST

ಉಡುಪಿ, ಜೂ.18: ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಣೆ ಸಮಯದಲ್ಲಿ ಅಧಿಕಾರ ನಿರ್ವಹಣೆಯ ಜೊತೆಜೊತೆಗೆ ಮಾನವೀಯ ಗುಣವನ್ನು ಬೆಳೆಸಿಕೊಂಡು ಕಾರ್ಯ ನಿರ್ವಹಿಸುವಂತೆ ಶಾಕ ರಘುಪತಿ ಭಟ್ ಕರೆ ನೀಡಿದ್ದಾರೆ.

ಸೋಮವಾರ ಅಂಬಲಪಾಡಿಯ ಪ್ರಗತಿಸೌಧದಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಮೈಸೂರು ಹಾಗೂ ಉಡುಪಿ ಮತ್ತು ಚಿಕ್ಕಮಗಳೂರು ಜಿಪಂಗಳ ಸಹಯೋಗದಲ್ಲಿ, ಹೊಸದಾಗಿ ನೇಮಕಗೊಂಡ 50 ಮಂದಿ ಪಿಡಿಓಗಳಿಗೆ ಏರ್ಪಡಿಸಿದ್ದ ವೃತ್ತಿಬುನಾದಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಪಿಡಿಓ ಹುದ್ದೆ ಜನ ಸೇವೆ ಮಾಡಲು ಅತ್ಯಂತ ಉತ್ತಮ ಹುದ್ದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಾರಿಗೆ ತರುವ ಯೋಜನೆಗಳನ್ನು ಗ್ರಾಮೀಣ ಜನತೆಗೆ ತಲುಪಿಸುವಂತಹ ಜವಾಬ್ದಾರಿಯುತ ಹುದ್ದೆ ಇದಾಗಿದೆ. ನಿರಂತರವಾಗಿ ಜನರ ಸಂಪರ್ಕ ಹೊಂದಿರಬೇಕಾಗಿದ್ದು, ಸರಕಾರ ತಮಗೆ ನೀಡಿರುವ ಅಧಿಕಾರ ದುರುಪಯೋಗವಾಗಂತೆ, ಯಾವುದೇ ಆಮಿಷಗಳಿಗೆ ಒಳಗಾಗದೇ ವ್ಯಕ್ತಿಗತ ವಾಗಿ ಕೆಲಸ ಮಾಡದೇ ಸಮಾಜಮುಖಿಯಾಗಿ, ಜನರಿಗೆ ಅನುಕೂಲವಾಗು ವಂತೆ ಕಾರ್ಯ ನಿರ್ವಹಿಸಿ. ಆದರೆ ನಿಯಮಗಳ ಪಾಲನೆ ಜೊತೆಗೆ ಮಾನವೀಯತೆಯಿಂದ ಕರ್ತವ್ಯ ನಿರ್ವಹಿಸಿ ಎಂದು ಶಾಸಕರು ಹೇಳಿದರು.

ಉಡುಪಿ ಜಿಪಂ ಸಿಇಓ ಶಿವಾನಂದ ಕಾಪಶಿ ಮಾತನಾಡಿ, ಗ್ರಾಮಗಳ ಅಭಿವೃದ್ದಿಯ ದಿಕ್ಕು ಬದಲಿಸುವ ಅವಕಾಶ ಪಿಡಿಓಗಳಿಗಿದೆ. ಕಾನೂನು ನಿಯಮ ಗಳನ್ನು ಅರ್ಥೈಸಿಕೊಂಡು, ಜನಪ್ರತಿನಿಧಿಗಳ ಸಹಕಾರ ಪಡೆದು ಕಾರ್ಯ ನಿರ್ವಹಿಸಿ. ಸರಕಾರದ 29 ಇಲಾಖೆಗಳ ಹಲವು ಅಭಿವೃದ್ದಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ನೇರ ಜವಾಬ್ದಾರಿ ಪಿಡಿಓಗಳದ್ದಾಗಿದ್ದು, ಸಾರ್ವಜನಿಕರೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಂಡು ಮಾದರಿ ಪಿಡಿಓಗಳಾಗಿ ಎಂದರು.

ಮೈಸೂರು ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್ ಸಂಸ್ಥೆಯ ಬೋಧಕ ಸುದರ್ಶನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಅಧ್ಯಕ್ಷತೆ ವಹಿಸಿದ್ದರು.

ಕಾಯಕ್ರಮದಲ್ಲಿ ಉಡುಪಿ ತಾಪಂ ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಜಿಪಂ ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್, ಉಡುಪಿ ತಾಪಂ ಕಾರ್ಯ ನಿರ್ವಹಣಾಧಿಕಾರಿ ಮೋಹನ್‌ರಾಜ್, ಪ್ರಾದ್ಯಾಪಕ ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಜಯವಂತ ರಾವ್ ಹಿರಿಯಡ್ಕ, ಡಿಮೆಲ್ಲೋ, ಮಮತಾ ಮತ್ತಿತರರು ಉಪಸ್ಥಿತರಿದ್ದರು. 

ಎಸ್‌ಕೆಡಿಅರ್‌ಪಿಯ ಪ್ರಾಂಶುಪಾಲ ಅಶೋಕ್ ಸ್ವಾಗತಿಸಿದರು. ಉಡುಪಿ ತಾಪಂ ಸಹಾಯಕ ನಿರ್ದೇಶಕ ಹರಿಕೃಷ್ಣ ಶಿತ್ತಾಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News