ಮಣಿಪಾಲ: ನೂತನ ವೈರಸ್ ಸಂಶೋಧನಾ ಕೇಂದ್ರಕ್ಕೆ ಶಿಲಾನ್ಯಾಸ

Update: 2018-06-19 15:54 GMT

ಮಣಿಪಾಲ, ಜೂ.19: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ)ನ ಮಣಿಪಾಲ ವೈರಸ್ ಸಂಶೋಧನಾ ಕೇಂದ್ರ (ಎಂಸಿವಿಆರ್)ದ ನೂತನ ಕ್ಯಾಂಪಸ್‌ಗಾಗಿ ಇತ್ತೀಚೆಗೆ ಇಲ್ಲಿ ಗುದ್ದಲಿ ಪೂಜೆ ನೆರವೇರಿಸಲಾಯಿತು.

ಕೇರಳದಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ನಿಫಾಹ್ ರೋಗದ ವೈರಸ್‌ನ್ನು ಪತ್ತೆ ಹಚ್ಚುವ ಹಾಗೂ ಅದನ್ನು ತ್ವರಿತಗತಿಯಲ್ಲಿ ನಿಯಂತ್ರಿಸುವ ಮೂಲಕ ಮಣಿಪಾಲದ ವೈರಸ್ ಸಂಶೋಧನಾ ಕೇಂದ್ರ ಇತ್ತೀಚೆಗೆ ಸುದ್ದಿಯಲ್ಲಿತ್ತು.

ವೈರಲ್ ರೋಗಗಳ ಪತ್ತೆ ಹಾಗೂ ಸಂಶೋಧನೆಗಾಗಿ ಎಂಸಿವಿಆರ್‌ಗೆ ಅತ್ಯಾಧುನಿಕ ಸೌಲಭ್ಯ ಹಾಗೂ ಸಲಕರಣೆಗಳನ್ನು, ನೂತನ ತಂತ್ರಜ್ಞಾನವನ್ನು ಅಳವಡಿಸಲು 7.43 ಎಕರೆ ಪ್ರದೇಶದಲ್ಲಿ ಹೊಸ ಕ್ಯಾಂಪಸ್‌ನ್ನು ನಿರ್ಮಿಸ ಲಾಗುತಿದ್ದು, ಇದಕ್ಕಾಗಿ ಮಾಹೆಯ ಮಾಜಿ ಕುಲಪತಿ ಹಾಗೂ ರಾಷ್ಟ್ರೀಯ ಸಂಶೋಧನಾ ಪ್ರೊಪೆಸರ್ ಡಾ.ಎಂ.ಎಸ್.ವಲಿಯತ್ತನ್ ಅವರು ಗುದ್ದಲಿ ಪೂಜೆ ನೆರವೇರಿಸಿದರು.

‘ಜಾಗತಿಕ ಆರೋಗ್ಯ ಭದ್ರತೆಯನ್ನು ಒದಗಿಸುವಲ್ಲಿ ಈ ಕೇಂದ್ರ ಗುರುತರವಾದ ಕೊಡುಗೆಯನ್ನು ನೀಡುವ ಸಾಧ್ಯತೆಯನ್ನು ಹೊಂದಿದೆ. ಇಂದು ಹೊಸ ಹೊಸ ವೈರಸ್‌ಗಳು ಹಾಗೂ ಅವುಗಳಿಂದ ಬರುವ ರೋಗಗಳು ವಿಶ್ವದ ಎದುರು ಹೊಸ ಹೊಸ ಸವಾಲುಗಳನ್ನು ಒಡ್ಡುತ್ತಿವೆ’ ಎಂದವರು ನುಡಿದರು.

ಎಂಸಿವಿಆರ್‌ನ ಹೊಸ ಕ್ಯಾಂಪಸ್‌ನಲ್ಲಿ ಅತ್ಯಾಧುನಿಕವಾದ ಪ್ರಯೋಗಾಲಯ ಗಳಿದ್ದು, ಇದು ಪೂರ್ಣಗೊಂಡಾಗ ದೇಶದ ಸಾರ್ವಜನಿಕ ಆರೋಗ್ಯದಲ್ಲಿ ಆಸ್ತಿಯಾಗಲಿದೆ ಎಂದು ಮಾಹೆಯ ಕುಲಪತಿ ಡಾ.ವಿನೋದ್ ಭಟ್ ನುಡಿದರು.

ಎಂಸಿವಿಆರ್‌ನ ಮುಖ್ಯಸ್ಥ ಡಾ.ಅರುಣ್‌ಕುಮಾರ್ ಮಾತನಾಡಿ, ವೈರಲ್ ರೋಗಗಳು ಸದಾ ಒಡ್ಡುತ್ತಿರುವ ಸವಾಲುಗಳನ್ನು ಎದುರಿಸಲು ಇಲ್ಲಿನ ಸೌಲಭ್ಯಗಳು ನಮಗೆ ಸಹಾಯಕವಾಗಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News