ಹಲಸು ಮೇಳ ಸಮಾಪ್ತಿ: 2.7ಟನ್ ಹಲಸು, ಸಾವಿರ ಗಿಡ ಮಾರಾಟ
ಉಡುಪಿ, ಜೂ.24: ಉಡುಪಿ ಜಿಲ್ಲಾಡಳಿತ, ಜಿಪಂ, ತೋಟಗಾರಿಕೆ ಇಲಾಖೆ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ಜಿಲ್ಲೆ ಇದರ ಸಹಯೋಗ ದಲ್ಲಿ ದೊಡ್ಡಣಗುಡ್ಡೆ ಶಿವಳ್ಳಿ ಮಾದರಿ ತೋಟಗಾರಿಕೆ ಕ್ಷೇತ್ರದ ಪುಷ್ಪ ಹರಾಜು ಕೇಂದ್ರದ ಆವರಣದಲ್ಲಿ ಹಮ್ಮಿಕೊಳ್ಳಲಾದ ಎರಡು ದಿನಗಳ ಉಡುಪಿ ಜಿಲ್ಲಾ ಮಟ್ಟದ ಹಲಸು ಮೇಳ ರವಿವಾರ ಸಮಾಪ್ತಿ ಗೊಂಡಿತು.
ಕೊನೆಯ ದಿನವಾದ ಇಂದು ಸಹಸ್ರ ಸಂಖ್ಯೆಯಲ್ಲಿ ಜನ ಮೇಳಕ್ಕೆ ಆಗಮಿ ಸಿದ್ದು, ಎರಡು ದಿನಗಳಲ್ಲಿ ಒಟ್ಟು 15 ಸಾವಿರಕ್ಕೂ ಅಧಿಕ ಮಂದಿ ಸಂದರ್ಶಿಸಿ ದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತೂಬು ಗೆರೆ ಹಲಸು ಬೆಳಗಾರರ ರೈತ ಸಂಘವು ತಂದಿದ್ದ ಎರಡು ಟನ್ ಹಲಸು ಚಂದ್ರಬಕ್ಕೆ, ಕೆಂಪು ರುದ್ರಾಕ್ಷಿ, ಹಳದಿ ರುದ್ರಾಕ್ಷಿ, ಶಿವರಾತ್ರಿ, ಏಕದಶಿ, ಬಂಗಾರದ ಹಲಸು ಖಾಲಿಯಾಗಿದ್ದು, ಕಾರ್ಕಳ ಸಾಣೂರು ಹಲಸು ಬೆಳೆ ಗಾರರ ತಂದಿದ್ದ ಸುಮಾರು 500ಕೆ.ಜಿ. ಹಾಗೂ ತೋಟಗಾರಿಕೆ ಇಲಾಖೆ ಯಿಂದ ಇರಿಸಿದ್ದ ಸುಮಾರು 150ಕೆ.ಜಿ.ಯಷ್ಟು ಹಲಸು ಮಾರಾಟವಾಗಿದೆ.
ತೋಟಗಾರಿಕೆ ಇಲಾಖೆ, ಕರ್ಜೆ ಅನ್ನಪೂರ್ಣ, ಬಿಲ್ಲಾಡಿ, ನವನೀತ್ ನರ್ಸರಿ ಯವರು ಪ್ರದರ್ಶನ ಹಾಗೂ ಮಾರಾಟಕ್ಕೆ ಇರಿಸಿದ್ದ ವಿವಿಧ ಜಾತಿಯ ಗಿಡ ಗಳಲ್ಲಿ ಸುಮಾರು 4000 ಗಿಡಗಳು ಮಾರಾಟವಾಗಿದ್ದು, ಇದರಲ್ಲಿ ಒಂದು ಸಾವಿರ 11 ಜಾತಿಯ ಹಲಸಿನ ಗಿಡಗಳು ಸೇರಿವೆ. ಈ ಬಾರಿಯ ಹಲಸು ಮೇಳಕ್ಕೆ ಜನರಿಂದ ಉತ್ತಮ ಸ್ಪಂದನೆ ದೊರೆತಿದ್ದು, ಸಾವಿರಾರು ಸಂಖ್ಯೆಯಲ್ಲಿ ಜನ ಆಗಮಿಸಿ ಮೇಳದ ಪ್ರಯೋಜನ ಪಡೆದುಕೊಂಡರು ಎಂದು ಉಡುಪಿ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಭುವನೇಶ್ವರಿ ಪತ್ರಿಕೆಗೆ ತಿಳಿಸಿದ್ದಾರೆ.
ಇಂದು ಮೇಳಕ್ಕೆ ಉಡುಪಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಅಪರ ಜಿಲ್ಲಾಧಿಕಾರಿ ಅನುರಾಧ ಜಿ., ಜಿಪಂ ಉಪಕಾರ್ಯದರ್ಶಿ ನಾಗೇಶ್ ರಾಯ್ಕ್ ಮೊದಲಾದವರು ಭೇಟಿ ನೀಡಿದರು.