ನೆಲ್ಲಿಕಾರು ಅಪಘಾತ ವಲಯಕ್ಕೆ ಸಂಸದ ನಳಿನ್ ಭೇಟಿ
ಮೂಡುಬಿದಿರೆ, ಜೂ.25: ಅನೇಕ ತಿರುವು ಹಾಗೂ ಏರುತಗ್ಗುಗಳಿಂದ ಈ ರಸ್ತೆ ಸಾಗುವುದರಿಂದ ಅಪಘಾತಕ್ಕೆ ಕಾರಣವಾಗುತ್ತಿದ್ದು ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದು ಹೆಚ್ಚು ಅಪಘಾತವಾಗುವ ಕನಿಷ್ಠ 50 ಮೀಟರ್ ಪ್ರದೇಶದಲ್ಲಿ ರಸ್ತೆಯನ್ನು ನೇರಗೊಳಿಸಲು ಮತ್ತು ಮರಗಳನ್ನು ಕಟಾವುಗೊಳಿಸಲು ಮೇಲಾಧಿಕಾರಿಗಳಿಗೆ ಕೂಡಲೇ ಪ್ರಸ್ತಾವನೆ ಸಲ್ಲಿಸುವಂತೆ ಸಂಸದ ನಳಿನ್ ಕುಮಾರ್ ಅರಣ್ಯಾಧಿಕಾರಿಗಳಿಗೆ ಸೂಚಿಸಿದರು.
ಕಾರ್ಕಳ ಗುರುವಾಯನಕೆರೆ ರಾಜ್ಯ ಹೆದ್ದಾರಿಯ ನೆಲ್ಲಿಕಾರು ಬೊಂಡದಂಗಡಿ ಬಳಿ ಅಪಘಾತ ವಲಯಕ್ಕೆ ಸೋಮವಾರ ಭೇಟಿ ನೀಡಿದ ಸಂದರ್ಭ ಅವರು ಸ್ಥಳೀಯರ ಜೊತೆ ಸಂವಾದ ನಡೆಸಿದರು. ಜಿಲ್ಲಾಧಿಕಾರಿಗಳ ಸಭೆಯಲ್ಲಿ ಈ ಕುರಿತು ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸುವುದಾಗಿ ನಳಿನ್ ಕುಮಾರ್ ಹೇಳಿದರು.
ಶಾಸಕ ಉಮಾನಾಥ ಕೋಟ್ಯಾನ್, ಜಿ.ಪಂ.ಸದಸ್ಯೆ ಸುಜಾತ, ತಾ.ಪಂ.ಸದಸ್ಯೆ ನಾಗವೇಣಿ, ಬಿಜೆಪಿ ಕ್ಷೇತ್ರಾಧ್ಯಕ್ಷ ಈಶ್ವರ ಕಟೀಲು, ಪ್ರಧಾನ ಕಾರ್ಯದರ್ಶಿ ಸುಕೇಶ್ ಶೆಟ್ಟಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕೆ.ಪಿ. ಜಗದೀಶ ಅಧಿಕಾರಿ, ಪಡುಮಾರ್ನಾಡು ಗ್ರಾ.ಪಂ.ಅಧ್ಯಕ್ಷ ಶ್ರೀನಾಥ್ ಸುವರ್ಣ, ಶಿರ್ತಾಡಿ ಗ್ರಾ. ಪಂ ಅಧ್ಯಕ್ಷೆ ಲತಾ ಹೆಗ್ಡೆ, ಬೆಳುವಾಯಿ ಗ್ರಾ.ಪಂ ಅಧ್ಯಕ್ಷ ಭಾಸ್ಕರ ಆಚಾರ್ಯ, ನೆಲ್ಲಿಕಾರು ಗ್ರಾ.ಪಂ ಮಾಜಿ ಅಧ್ಯಕ್ಷ ಹರೀಶ್ ಆಚಾರ್ಯ ಮತ್ತಿತರರು ಉಪಸ್ಥಿತರಿಸದ್ದರು.