ಮೂಡುಬಿದಿರೆ ಪುರಸಭೆಯಲ್ಲಿ ಬಿಜೆಪಿಯನ್ನು ಆಡಳಿತಕ್ಕೆ ತಂದರೆ ಕೇಂದ್ರದ 'ಅಮೃತಾ ಯೋಜನೆ' ಅನುಷ್ಠಾನಕ್ಕೆ: ಸಂಸದ ನಳಿನ್
ಮೂಡುಬಿದಿರೆ, ಜೂ.25 :ಪುರಸಭೆಯು ಬಿಜೆಪಿ ತೆಕ್ಕೆಗೆ ಬಂದರೆ ಕೇಂದ್ರ ಸರಕಾರದ ಮಹತ್ವದ ಯೋಜನೆಯಾಗಿರುವ 'ಅಮೃತಾ ಯೋಜನೆ'ಯನ್ನು ಅನುಷ್ಠಾನಗೊಳಿಸುವ ಮೂಲಕ ಸಮಗ್ರ ಅಭಿವೃದ್ಧಿಯನ್ನು ಮಾಡಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಭರವಸೆಯನ್ನು ನೀಡಿದರು.
ಅವರು ಕಲ್ಲಬೆಟ್ಟು ಕೋ.ಅಪರೇಟಿವ್ ಬ್ಯಾಂಕಿನ ಅಕ್ಷಯಧಾಮ ಸಭಾಂಗಣದಲ್ಲಿ ಸೋಮವಾರ ಭಾರತೀಯ ಜನತಾ ಪಾರ್ಟಿಯ ಮೂಡುಬಿದಿರೆ ನಗರ ಮಹಾಶಕ್ತಿ ಕೇಂದ್ರದ ವತಿಯಿಂದ ಆಯೋಜಿಸಿದ್ದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. .
ನೂತನ ಶಾಸಕ ಉಮನಾಥ್ ಕೋಟ್ಯಾನ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ನಂತರ ಮಾತನಾಡಿದ ಉಮಾನಾಥ ಕೋಟ್ಯಾನ್, ಕಳೆದ ನಾಲ್ಕು ವರ್ಷಗಳಿಂದ ಸಂಸದರ ಕ್ಷೇತ್ರ ಪ್ರವಾಸ ಹಾಗೂ ಕಾರ್ಯಕರ್ತರ ಜೊತೆಗಿನ ಚರ್ಚೆ ಅಭಿವೃದ್ಧಿ ಕಾರ್ಯ ನಡೆಸಲು ಯೋಗ್ಯವಾಗಿದೆ. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ಜನಪ್ರತಿನಿಧಿಗಳಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.
ಮೂಡುಬಿದಿರೆ ಮಂಡಲ ಅಧ್ಯಕ್ಷ ಈಶ್ವರ ಕಟೀಲ್ ಅಧ್ಯಕ್ಷತೆಯನ್ನು ವಹಿಸಿದ್ದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಪಿ ಜಗದೀಶ ಅಧಿಕಾರಿ, ಪ್ರಧಾನ ಕಾರ್ಯದರ್ಶಿ ಸುದರ್ಶನ ಎಂ., ಮಂಡಲ ಪ್ರಧಾನ ಕಾರ್ಯದರ್ಶಿ ಸುಕೇಶ್ ಶೆಟ್ಟಿ, ಪುರಸಭಾ ಸದಸ್ಯರಾದ ಲಕ್ಷ್ಮಣ್ ಪೂಜಾರಿ, ಪ್ರಸಾದ್, ಎಸ್ಸಿ ಎಸ್ಟಿ ಮೋರ್ಚಾದ ಅಧ್ಯಕ್ಷ ಶೀನ ಮಾಸ್ತಿಕಟ್ಟೆ, ಹಿಂದುಳಿದ ಮೋರ್ಚಾದ ನಗರಾಧ್ಯಕ್ಷ ದಿನೇಶ್ ತಿರುಮಲಬೆಟ್ಟು, ನಗರ ಪ್ರ.ಕಾರ್ಯದರ್ಶಿ ಹರೀಶ್ ಎಂ.ಕೆ ಮುಖಂಡರಾದ ಕೆ.ಆರ್ ಪಂಡಿತ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಜೇಶ್ ಮಲ್ಯ ಸ್ವಾಗತಿಸಿದರು. ಪುರಸಭಾ ಸದಸ್ಯ ದಿನೇಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಶಶಿಕಿರಣ್ ಕಲ್ಲಬೆಟ್ಟು ವಂದಿಸಿದರು.