ಧರ್ಮಸ್ಥಳದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾದ ಸಚಿವರು
ಬೆಳ್ತಂಗಡಿ,ಜೂ.25: ಶ್ರೀಕ್ಷೇತ್ರ ಧರ್ಮಸ್ಥಳದ ಶಾಂತಿವನದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಂದೂ ಸಚಿವರುಗಳು ಹಾಗೂ ನಾಯಕರುಗಳು ಭೇಟಿಯಾಗಿ ಮಾತುಕತೆ ನಡೆಸಿದಿದ್ದಾರೆ. ರಾಜ್ಯ ಸರಕಾರದ ಅರಣ್ಯ ಸಚಿವರಾದ ಶಂಕರ್ ಅವರು ಇಂದು ಅಪರಾಹ್ನ ಧರ್ಮಸ್ಥಳಕ್ಕೆ ಆಗಮಿಸಿ ಬಳಿಕ ಶಾಂತಿವನಕ್ಕೆ ತೆರಳಿ ಮಾಜಿ ಮುಖ್ಯಮಂತ್ರಿಗಳನ್ನು ಭೇಟಿಯಾದರು. ಸಚಿವ ಪುಟ್ಟರಂಗ ಶೆಟ್ಟಿ ಅವರೂ ಇಂದು ಧರ್ಮಸ್ಥಳಕ್ಕೆ ಆಗಮಿಸಿ ಸಿದ್ದರಾಮಯ್ಯ ಅವರೊಂದಿಗೆ ಕೆಲಕಾಲ ಗುಪ್ತ ಮಾತುಕತೆ ನಡೆಸಿದರು. ಇಬ್ಬರು ಸಚಿವರುಗಳೂ ಮಾಧ್ಯಮದವರೊಂದಿಗೆ ಯಾವುದೆ ವಿಚಾರಗಳನ್ನು ಹಂಚಿಕೊಳ್ಳಲಿಲ್ಲ.
ಸಚಿವರಾದ ಝಮೀರ್ ಅಹ್ಮದ್ ಅವರು ಇಂದು ಧರ್ಮಸ್ಥಳಕ್ಕೆ ಆಗಮಿಸಿ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿಸಲಾಗಿತ್ತು, ಆದರೆ ಬೆಂಗಳೂರಿನಿಂದ ಹೆಲಿಕಾಪ್ಟರ್ ನಲ್ಲಿ ಹೊರಟಿದ್ದ ಅವರು ಹವಾಮಾನ ವೈಪರೀತ್ಯದಿಂದಾಗಿ ಹಾಸನದಿಂದಲೇ ಹಿಂತಿರುಗಿದರು. ಸಚಿವರುಗಳಲ್ಲದೆ ರಾಜ್ಯದ ವಿವಿಧ ಭಾಗಗಳಿಂದ ಕಾಂಗ್ರೆಸ್ನ ಹಿರಿಯ ಮುಖಂಡರುಗಳು ಹಾಗೂ ಶಾಸಕರುಗಳು ಸಿದ್ದರಾಮಯ್ಯ ಅವರ ಭೇಟಿಗೆ ಶಾಂತಿವನಕ್ಕೆ ಆಗಮಿಸುತ್ತಿದ್ದಾರೆ. ರಾಜ್ಯ ರಾಜಕೀಯದ ಕೇಂದ್ರವಾಗಿ ಇಂದೂ ಶಾಂತಿವನ ಮುಂದುವರಿದಿದೆ.
ಸಿದ್ದರಾಮಯ್ಯ ಅವರೂ ಇಂದು ರಿಲಾಕ್ಸ್ ಮೂಡಿನಲ್ಲಿದ್ದರು. ಸಂಜೆ ಎಂದಿನಂತೆ ವಾಕಿಂಗ್ ನಡೆಸಿ ಶಾಂತಿವನ ಗೇಟಿನ ಹೊರಗೆ ಬಂದ ಅವರು ಕಾದಿದ್ದ ಅಭಿಮಾನಿಗಳ ಕೈಕುಲುಕಿದರು. ಮಾಧ್ಯಮದವರ ಪ್ರಶ್ನೆಗಳಿಗೆ ಯಾವುದೇ ಉತ್ತರ ನೀಡದೆ ಹಿಂತಿರುಗಿದರು.