ಶೈಕ್ಷಣಿಕ ಸಾಲ ನೀಡಿಕೆಗೆ ಹೆಚ್ಚಿನ ಆದ್ಯತೆ ಅಗತ್ಯ: ಶಿವಾನಂದ ಕಾಪಶಿ
ಉಡುಪಿ, ಜೂ.27: ಉಡುಪಿ ಜಿಲ್ಲೆ ಶೈಕ್ಷಣಿಕವಾಗಿ ರಾಜ್ಯದಲ್ಲೇ ಅಗ್ರಸ್ಥಾನ ದಲ್ಲಿದ್ದರೂ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ನೀಡುವಲ್ಲಿ ಜಿಲ್ಲೆಯ ಬ್ಯಾಂಕ್ಗಳು ತೀರಾ ಹಿಂದುಳಿದಿವೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ನೀಡುವಲ್ಲಿ ಎಲ್ಲಾ ಬ್ಯಾಂಕುಗಳು ಅದ್ಯತೆ ನೀಡಬೇಕಾದ ಅಗತ್ಯವಿದೆ. ಕನಿಷ್ಠ ಉದ್ದೇಶಿತ ಗುರಿ ತಲುಪುವುದಕ್ಕೆ ಹೆಚ್ಚಿನ ಮುತುವರ್ಜಿ ವಹಿಸುವಂತೆ ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಹೇಳಿದ್ದಾರೆ.
ಬುಧವಾರ ಮಣಿಪಾಲದಲ್ಲಿರುವ ಉಡುಪಿ ಜಿಪಂ ಸಭಾಂಗಣದಲ್ಲಿ ಜಿಲ್ಲೆಯ ಲೀಡ್ ಬ್ಯಾಂಕ್ ಆದ ಸಿಂಡಿಕೇಟ್ ಬ್ಯಾಂಕಿನ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಬ್ಯಾಂಕ್ಗಳ ಪ್ರಗತಿ ಪರಿಶೀಲನಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
2018ರ ಮಾ.31ಕ್ಕೆ ಮುಕ್ತಾಯಗೊಂಡಂತೆ 2017-18ನೇ ಸಾಲಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಜಿಲ್ಲೆಯ ಬ್ಯಾಂಕುಗಳ ಸಾಧನೆಯ ವಿವರಗಳನ್ನು ನೀಡಿದ ಲೀಡ್ ಬ್ಯಾಂಕ್ ಮ್ಯಾನೇಜರ್ ರುದ್ರೇಶ್ ಡಿ.ಸಿ., ಕಳೆದ ಸಾಲಿನಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಜಿಲ್ಲೆಯಲ್ಲಿ 264.6 ಕೋಟಿ ರೂ.ಗಳ ಶೈಕ್ಷಣಿಕ ಸಾಲ ವಿತರಣೆಯ ಗುರಿಯನ್ನು ನೀಡಲಾಗಿತ್ತು. ಆದರೆ ಬ್ಯಾಂಕುಗಳು ಮಾರ್ಚ್ ಅಂತ್ಯಕ್ಕೆ ಕೇವಲ 69 ಕೋಟಿ ರೂ.ಗಳ ಸಾಲ ವಿತರಿಸಿ, ಶೇ.26 ರಷ್ಟು ಮಾತ್ರ ಗುರಿ ಸಾಧಿಸಲಾಗಿದೆ ಎಂದರು.
ಬ್ಯಾಂಕ್ಗಳ ಈ ಕಳಪೆ ಸಾಧನೆಗೆ ಕಾರಣಗಳನ್ನು ನೀಡುವಂತೆ ಕಾಪಸಿ ನುಡಿದರು. ಬ್ಯಾಂಕ್ಗಳು ಶೈಕ್ಷಣಿಕ ಸಾಲ ಮಂಜೂರು ಮಾಡಲು ವಿದ್ಯಾರ್ಥಿ ತನ್ನ ಕೋರ್ಸ್ಗೆ ಬೇಕಾಗುವ ಒಟ್ಟು ಅಂದಾಜು ವೆಚ್ಚದ ವಿವರಗಳನ್ನು ಆಯಾ ಕಾಲೇಜಿನಿಂದ ಪಡೆದು ನೀಡಬೇಕಾಗಿದೆ. ಆದರೆ ಈ ವಿವರ ನೀಡಲು ಕೆಲವು ಕಾಲೇಜುಗಳು ವಿದ್ಯಾರ್ಥಿಗಳಿಂದ 10,000ರೂ.ವರೆಗೆ ಡಿಪಾಸಿಟ್ ಕೇಳುತಿದ್ದು, ಇದರಿಂದ ಅವರಿಗೆ ಈ ಎಸ್ಟಿಮೇಟ್ ರಿಪೋರ್ಟ್ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಬ್ಯಾಂಕ್ ಅಧಿಕಾರಿಯೊಬ್ಬರು ತಿಳಿಸಿದರು.
ಈ ಬಾರಿಯಿಂದ ಶೈಕ್ಷಣಿಕ ಸಾಲಕ್ಕೆ ಆನ್ಲೈನ್ ಮೂಲಕವೇ ಅರ್ಜಿ ಹಾಕ ಬೇಕಾಗಿದೆ. ಒಮ್ಮೆ ಅರ್ಜಿ ಹಾಕಿದಮೇಲೆ ಯಾವುದೇ ಮಾರ್ಪಾಡು ಮಾಡಲು ಅವಕಾಶ ಇಲ್ಲವಾದ ಕಾರಣ ಅರ್ಜಿಗಳು ತಿರಸ್ಕೃತಗೊಳ್ಳುತ್ತಿವೆ ಎಂದು ಬ್ಯಾಂಕ್ ಅಧಿಕಾರಿಗಳು ವಿವರಿಸಿದರು. ಆನ್ಲೈನ್ನಲ್ಲಿ ಸಲ್ಲಿಸಿದ್ದ ಅರ್ಜಿಗಳನ್ನು ಕೈ ಬರಹ ಮೂಲಕ ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಎಲ್ಲಾ ಬ್ಯಾಂಕ್ಗಳು ಇದನ್ನು ಪಾಲಿಸಿ ನಿಗದಿತ ಗುರಿ ಸಾಧಿಸುವಂತೆ ರುದ್ರೇಶ್ ತಿಳಿಸಿದರು.
ಬ್ಯಾಂಕ್ ಔಟ್ಲೆಟ್: ರಿಸರ್ವ್ ಬ್ಯಾಂಕ್ ಆಪ್ ಇಂಡಿಯಾ ಹೊರಡಿಸಿದ ಹೊಸ ಸುತ್ತೋಲೆಗಳನ್ನು ವಿವರಿಸಿದ ಬೆಂಗಳೂರು ಆರ್ಬಿಐನ ಎಜಿಎಂ ಪಟ್ಟಾನಾಯಕ್, ದೇಶದಲ್ಲಿ 5000ಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಪ್ರತಿ ಗ್ರಾಮದಲ್ಲೂ ಬ್ಯಾಂಕ್ನ ಔಟ್ಲೆಟ್ ಒಂದನ್ನು ಕಡ್ಡಾಯವಾಗಿ ತೆರೆಯುವಂತೆ ಸೂಚಿಸಲಾಗಿದೆ. ಆಯಾ ಗ್ರಾಮದ ಬ್ಯುಸಿನೆಸ್ ಕರೆಸ್ಪಾಂಡೆಂಟ್ (ಬಿಸಿ) ಇನ್ನು ಆ ಗ್ರಾಮದಲ್ಲಿ ಕಚೇರಿ ತೆರೆದು ವಾರದಲ್ಲಿ ಐದು ದಿನ, ಪ್ರತಿದಿನ ನಾಲ್ಕು ಗಂಟೆ ಕಾಲ ಜನರ ಸೇವೆಗೆ ಲಭ್ಯವಿರಬೇಕಾಗಿದೆ ಎಂದರು.
ಮಾ.31ಕ್ಕೆ ಮುಕ್ತಾಯಗೊಂಡಂತೆ ಜಿಲ್ಲೆಯ ಬ್ಯಾಂಕುಗಳ ಹಿಂದಿನ ಮೂರು ತಿಂಗಳ ಸಾಧನೆಯನ್ನು ವಿವರಿಸಿದ ಸಿಂಡಿಕೇಟ್ ಬ್ಯಾಂಕಿನ ಡಿಜಿಎಂ ನಟರಾಜ್ ಎಸ್.ಇ. ಅವರು, ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಬ್ಯಾಂಕುಗಳ ಠೇವಣಿ 22,364 ಕೋಟಿ ರೂ.ಗಳಿಗೇರಿ ಶೇ.8.02ರ ಹೆಚ್ಚಳ ತೋರಿದರೆ, ಇದೇ ಅವಧಿಯಲ್ಲಿ ನೀಡಿದ ಸಾಲದ ಪ್ರಮಾಣ 11,252 ಕೋಟಿ ಆಗಿದ್ದು ಇಲ್ಲಿ ಶೇ.10.77ರ ಹೆಚ್ಚಳ ತೋರಲಾಗಿದೆ ಎಂದರು. ಈ ಅವಧಿಯಲ್ಲಿ ಸಾಲ-ಠೇವಣಿಯ ಅನುಪಾತ ಶೇ.50.31 ಆಗಿದ್ದು, ಹಿಂದಿನ ತ್ರೈಮಾಸಿಕಕ್ಕಿಂತ ಶೇ.0.96 ಕುಸಿದಿದೆ ಎಂದರು.
ಠೇವಣಿ-ಸಾಲದಲ್ಲಿ ಹಿನ್ನಡೆ: ಹಿಂದಿನ ಅವಧಿಗೆ ಹೋಲಿಸಿದರೆ ಏಳು ಬ್ಯಾಂಕ್ಗಳು ಠೇವಣಿ ಸಂಗ್ರಹದಲ್ಲಿ ಹಿನ್ನಡೆಯನ್ನು ಸಾಧಿಸಿವೆ. ಆ್ಯಕ್ಸಿಸ್ ಬ್ಯಾಂಕ್ -59.23 ಕೋಟಿ ರೂ.ಸಾಧನೆ ತೋರಿದೆ. ಅದೇ ರೀತಿ ಸಾಲ ನೀಡಿಕೆಯಲ್ಲೂ ಏಳು ಬ್ಯಾಂಕ್ಗಳು ನೇತ್ಯಾತ್ಮಕ ಪ್ರಗತಿ ತೋರಿಸಿವೆ. ಇವುಗಳಲ್ಲಿ ಸಿಂಡಿಕೇಟ್ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕುಗಳು ಸೇರಿವೆ. ಆದರೆ ವಿಜಯಾ ಬ್ಯಾಂಕ್ (413ಕೋಟಿ) ಹಾಗೂ ಕರ್ನಾಟಕ ಬ್ಯಾಂಕ್ (149ಕೋಟಿ) ಉತ್ತಮ ಸಾಧನೆ ಮಾಡಿವೆ ಎಂದು ರುದ್ರೇಶ್ ವಿವರಿಸಿದರು.
ಕಳೆದ ಸಾಲಿನಲ್ಲಿ ಜಿಲ್ಲೆಯ ಬ್ಯಾಂಕ್ಗಳು ಕೃಷಿ ಕ್ಷೇತ್ರಕ್ಕೆ 2177 ಕೋಟಿ ರೂ., ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗೆ 1592 ಕೋಟಿ ರೂ., ವಸತಿ ಕ್ಷೇತ್ರಕ್ಕೆ 442 ಕೋಟಿ ರೂ, ಹಾಗೂ ಆದ್ಯತೇತರ ವಲಯಕ್ಕೆ 514 ಕೋಟಿ ರೂ. ಗಳನ್ನು ವಿತರಿಸಿವೆ. ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ 30492 ಮಂದಿಗೆ 423 ಕೋಟಿ ರೂ. ಸಾಲ, 1,49,33 ಮಹಿಳೆಯರಿಗೆ 2666 ಕೋಟಿ ರೂ. ಸಾಲವನ್ನು ನೀಡಲಾಗಿದೆ ಎಂದು ಲೀಡ್ ಬ್ಯಾಂಕ್ ಮೆನೇಜರ್ ಹೇಳಿದರು.
ಸಭೆಯಲ್ಲಿ ನಬಾರ್ಡ್ನ ಎಜಿಎಂ ಎಸ್.ರಮೇಶ್ ಉಪಸ್ಥಿತರಿದ್ದರು. ರುದ್ರೇಶ್ ಅವರು ಅತಿಥಿಗಳನ್ನು ಸ್ವಾಗತಿಸಿ, ಸಭೆಯನ್ನು ನಿರ್ವಹಿಸಿದರು.