ಸಚಿವ ಯು.ಟಿ.ಖಾದರ್, ಜಿಲ್ಲಾಧಿಕಾರಿ ಭೇಟಿ-ಪರಿಹಾರ ನೀಡುವ ಭರವಸೆ
ಬಂಟ್ವಾಳ, ಜೂ. 30: ಮುಲ್ಲರಪಟ್ನ ಫಲ್ಗುಣಿ ಸೇತುವೆ ಬಳಿ ತೂಗುಸೇತುವೆಯ ಬಳಿ ಸಂಪರ್ಕ ರಸ್ತೆ ಕಾಮಗಾರಿಯನ್ನು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಹಾಗೂ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಶನಿವಾರ ಭೇಟಿ ಪರಿಶೀಲಿಸಿ, ಸ್ಥಳೀಯರೊಂದಿಗೆ ಮಾತುಕತೆ ನಡೆಸಿದರು.
ಇಲ್ಲಿನ ಅರಳ ಗ್ರಾಮದ ಮುಲ್ಲರಪಟ್ನ ಜುಮಾ ಮಸೀದಿ ಮತ್ತು ಕೊಟ್ಟದಡ್ಕ ದೈವಸ್ಥಾನ ಬಳಿ ಫಲ್ಗುಣಿ ನದಿ ತೀರದಲ್ಲಿ ಬಡಗಬೆಳ್ಳೂರು ಗ್ರಾಮ ವ್ಯಾಪ್ತಿಯಲ್ಲಿರುವ ತೂಗು ಸೇತುವೆ ಸಂಪರ್ಕಿಸಲು ಈ ಹಿಂದೆ ಮರಳುಗಾರರು ನಿರ್ಮಿಸಿದ್ದ ತಾತ್ಕಾಲಿಕ ರಸ್ತೆಯನ್ನು ಮತ್ತೆ ಕೆಂಪು ಕಲ್ಲು ಹಾಸುವ ಮೂಲಕ ಎತ್ತರಗೊಳಿಸಿ ಸಿಮೆಂಟ್ ಮಿಶ್ರಿತ ಜೆಲ್ಲಿ ಹಾಸುವ ಕಾಮಗಾರಿ ಕಳೆದ ನಾಲ್ಕೈದು ದಿನಗಳಿಂದ ಭರದಿಂದ ನಡೆಯುತ್ತಿದೆ. ಈಗಾಗಲೇ ಸ್ಥಳೀಯ ನಿವಾಸಿಗಳಾದ ಸುಂದರ ಶೆಟ್ಟಿ, ಭೋಜ ಶೆಟ್ಟಿ, ಗೋಪಾಲ ಶೆಟ್ಟಿ, ಸಂಜೀವ ಶೆಟ್ಟಿ, ಬ್ರಿಜೇಶ ಶೆಟ್ಟಿ ಮತ್ತಿತರ ಜಮೀನಿನ ಬಳಿ ಬಂಟ್ವಾಳ ಪುರಸಭಾ ಸದಸ್ಯ ಎ.ಗೋವಿಂದ ಪ್ರಭು ಅವರು ಎರಡೆರಡು ಬೃಹತ್ ಗಾತ್ರದ ಸಿಮೆಂಟ್ ಪೈಪ್ ಅಳವಡಿಸಿ ಮೋರಿ ನಿರ್ಮಿಸಿದ್ದಾರೆ. ಈ ರಸ್ತೆ ಕಾಮಗಾರಿ ತ್ವರಿತಗೊಳಿಸಲು ಸ್ಥಳೀಯರ ಸಹಕಾರ ದೊರೆತರೆ ಮಾತ್ರ ಸಾಧ್ಯ. ಇಲ್ಲದಿದ್ದಲ್ಲಿ ಜು. 2ರಂದು ಪೂರ್ಣಗೊಳಿಸುವುದು ಅಸಾಧ್ಯ ಎಂದು ಗುತ್ತಿಗೆದಾರ ರಹಿಮಾನ್ ವಳವೂರು ಅವರು ಮಾಹಿತಿ ನೀಡಿದ್ದಾರೆ.
ಇಲ್ಲಿನ ಮುತ್ತೂರು ಸರಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಶೇ. 70ರಷ್ಟು ಮಂದಿ ವಿದ್ಯಾರ್ಥಿಗಳು ಮುಲ್ಲರಪಟ್ನ ಸೇತುವೆಯನ್ನೇ ಅವಲಂಬಿಸಿದ್ದಾರೆ. ಇದರಿಂದಾಗಿ ಮಂಗಳೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಅವರ ಸೂಚನೆಯಂತೆ ಜು. 2ರತನಕ ವಿದ್ಯಾರ್ಥಿಗಳಿಗೆ ರಜೆ ಘೋಷಿಸಲಾಗಿದೆ. ಇನ್ನೊಂದೆಡೆ ಬಹುತೇಕ ವಿದ್ಯಾರ್ಥಿಗಳಿಗೆ ತೂಗುಸೇತುವೆ ಸಂಚಾರ ಬಗ್ಗೆ ಭೀತಿ ವ್ಯಕ್ತಪಡಿಸುತ್ತಿದ್ದು, ಇದಕ್ಕಾಗಿ ತೂಗುಸೇತುವೆ ತನಕ ಮಕ್ಕಳ ಪೋಷಕರನ್ನು ಕೂಡಾ ಬರುವಂತೆ ವಿನಂತಿಸಲಾಗಿದೆ ಎಂದು ಮುಖ್ಯಶಿಕ್ಷಕ ಸಿಪ್ರಿಯಾನ್ ಡಿಸೋಜ ಪ್ರತಿಕ್ರಿಯಿಸಿದ್ದಾರೆ.
ಅಡಿಕೆ ಗಿಡಗಳಿಗೆ ಹಾನಿ: ದೂರು
ಸಂಪರ್ಕ ರಸ್ತೆ ನಿರ್ಮಿಸುವ ನೆಪದಲ್ಲಿ ಸುಮಾರು 20ಕ್ಕೂ ಮಿಕ್ಕಿ ಅಡಿಕೆ ಗಿಡ ಮತ್ತು ಕೆಲವೊಂದು ತೆಂಗಿನ ಗಿಡಗಳನ್ನು ರಾತ್ರಿ ವೇಳೆ ಕಿಡಿಗೇಡಿಗಳು ಕಡಿದು ಹಾಕಿ ಹಾನಿ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ಇಲ್ಲಿನ ನಿವಾಸಿ ಸುಂದರ ಶೆಟ್ಟಿ ಎಂಬವರು ಶನಿವಾರ ಬಡಗಬೆಳ್ಳೂರು ಗ್ರಾಮ ಪಂಚಾಯತ್ಗೆ ದೂರು ಸಲ್ಲಿಸಿದ್ದಾರೆ. ಇಲ್ಲಿಗೆ ಶನಿವಾರ ಬೆಳಿಗ್ಗೆ ಭೇಟಿ ನೀಡಿದ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಸಹಾಯಕ ಕಮಿಷನರ್ ರೇಣುಕಾಪ್ರಸಾದ್, ತಹಶೀಲ್ದಾರ್ ಜಿ.ಸಂತೋಷ್ ಅವರಲ್ಲಿಯೂ ಈ ಬಗ್ಗೆ ದೂರಿಕೊಂಡಿದ್ದು, ಸೂಕ್ತ ಪರಿಹಾರ ನೀಡುವ ಭರವಸೆ ದೊರೆತಿದೆ ಎಂದಿದ್ದಾರೆ.
ಇದೇ ವೇಳೆ ತೂಗುಸೇತುವೆಯಲ್ಲಿ ಸಂಚರಿಸುವ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೆ ಕೆಲವೊಂದು ಕಿಡಿಗೇಡಿಗಳು ಮೊಬೈಲ್ನಲ್ಲಿ ಸೆಲ್ಫಿ ತೆಗೆಯುವ ಮೂಲಕ ಅವರ ಭಾವಚಿತ್ರ ಸೆರೆ ಹಿಡಿದು ಕಿರುಕುಳ ನೀಡುತ್ತಿದ್ದಾರೆ. ಇದಕ್ಕಾಗಿ ಎರಡು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಬೇಕು ಎಂದು ಮುತ್ತೂರು ಗ್ರಾಮ ಪಂಯತ್ ಮಾಜಿ ಸದಸ್ಯ ಹರಿಯಪ್ಪ ಅವರು ಜಿಲ್ಲಾಧಿಕಾರಿ ಮತ್ತು ಸಚಿವರಿಗೆ ಮನವಿ ಸಲ್ಲಿಸಿದರು.
ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವೈ.ಉಮೇಶ ಭಟ್, ಸಹಾಯಕ ಎಂಜಿನಿಯರ್ ಅರುಣ್ ಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್, ಅರಳ ಗ್ರಾಪಂ ಅಧ್ಯಕ್ಷೆ ತುಂಗಮ್ಮ, ಉಪಾಧ್ಯಕ್ಷ ಅಗ್ಗೊಂಡೆ ಜಗದೀಶ ಆಳ್ವ, ಸದಸ್ಯ ಎಂ.ಬಿ.ಆಶ್ರಫ್, ಮಾಜಿ ಅಧ್ಯಕ್ಷ ಹರೀಶ ಆಚಾರ್ಯ ರಾಯಿ, ಮಾಜಿ ಅಧ್ಯಕ್ಷ ರಝಾಕ್ ಕುಕ್ಕಾಜೆ, ರೈತ ಮೋರ್ಚಾ ಮುಖಂಡ ನಂದರಾಮ ರೈ ಮತ್ತಿತರರು ಹಾಜರಿದ್ದರು.
ಮುತ್ತೂರು ಸಂಪರ್ಕ ರಸ್ತೆ ಪೂರ್ಣ:
ಕಳೆದ 3 ವರ್ಷಗಳ ಹಿಂದೆ ಬಡಗಬೆಳ್ಳೂರು ಮತ್ತು ಮುತ್ತೂರು ಗ್ರಾಮ ಸಂಪರ್ಕಿಸಲು ಕರಾವಳಿ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ನಿರ್ಮಾಣಗೊಂಡ ತೂಗುಸೇತುವೆ ಇನ್ನೊಂದು ಬದಿಯಲ್ಲಿ ಮುತ್ತೂರು ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿ ಭರದಿಂದ ನಡೆದಿದ್ದು, ಇಂದು ಸಂಜೆಯೊಳಗೆ ಸಿಮೆಂಟ್ ಮಿಶ್ರಿತ ಜೆಲ್ಲಿ ಹಾಸುವ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅರಳ ಕನ್ಸ್ಟ್ರಕ್ಷನ್ಸ್ ಸಂಸ್ಥೆ ಗುತ್ತಿಗೆದಾರ ರಂಜನ್ ಕುಮಾರ್ ತಿಳಿಸಿದ್ದಾರೆ.