×
Ad

ಮುಂಡಾಜೆ: ಭಾರಿ ಮಳೆಗೆ ಬಿರುಕು ಬಿಟ್ಟ ರಸ್ತೆ

Update: 2018-07-08 23:02 IST

ಬೆಳ್ತಂಗಡಿ, ಜು. 8: ಕಳೆದ ಮೂರು ದಿನಗಳಿಂದ ನಿರಂತರ ಸುರಿದ ಮಳೆಗೆ ಸಿಆರ್‌ಎಫ್ ಅನುದಾನದಲ್ಲಿ ನಿರ್ಮಾಣವಾದ ಹೊಸತಾದ ಮುಂಡಾಜೆಯಿಂದ ಸತ್ಯನಪಲ್ಕೆ-ಧರ್ಮಸ್ಥಳ ರಸ್ತೆ ಬಿರುಕು ಬಿಟ್ಟಿದೆ. ಅಲ್ಲದೆ ರಸ್ತೆಯ ಬದಿಗೆ ಕಟ್ಟಿದ ಮೋರಿ ಕುಸಿತದಿಂದ ರಸ್ತೆ ಸಂಪರ್ಕವನ್ನು ಕಡಿದುಕೊಳ್ಳುವ ಅಪಾಯವನ್ನು ಎದುರಿಸುತ್ತಿದೆ.

ಮುಂಡಾಜೆಯಿಂದ ಧರ್ಮಸ್ಥಳಕ್ಕೆ ಮಾರ್ಗ ಮಧ್ಯೆ ಪಿಲತ್ತಡ್ಕದ ಬಳಿ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಗುಂಡಿ ದೇವಸ್ಥಾನದ ಬಳಿ ರಸ್ತೆಗೆ ಬದಿ ಕಟ್ಟಿದ್ದ ಮೋರಿ ಕುಸಿತ ಕಂಡಿದೆ.

ಕೇಂದ್ರ ರಸ್ತೆ ನಿಧಿ (ಸಿಆರ್‌ಎಫ್) ಅನುದಾನದಲ್ಲಿ ಸುಮಾರು 7 ಕೋ.ರೂ. ವೆಚ್ಚದಲ್ಲಿ ಮುಂಡಾಜೆ-ಸತ್ಯನಪಲ್ಕೆ-ಧರ್ಮಸ್ಥಳ ರಸ್ತೆ ನಿರ್ಮಾಣವಾಗಿತ್ತು. ಚಿಕ್ಕಮಗಳೂರುನಿಂದ ಚಾರ್ಮಾಡಿ ಘಾಟಿ ರಸ್ತೆ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹತ್ತಿರದ ಮಾರ್ಗವಾಗಿದ್ದು ಇದರ ಡಾಮರೀಕರಣಕ್ಕೆ ಊರವರ ಆಗ್ರಹವಾಗಿತ್ತು. ಹಲವಾರು ಪ್ರತಿಭಟನೆಗಳು, ಸಂಬಂಧಪಟ್ಟ ಇಲಾಖೆಗಳಿಗೆ ಮನವಿಗಳನ್ನು ನೀಡಲಾಗಿತ್ತು. ವಿದ್ಯಾರ್ಥಿಯೋರ್ವಳು ಹದಗೆಟ್ಟ ರಸ್ತೆಯ ಬಗ್ಗೆ ಪತ್ರವನ್ನೂ ಬರೆದಿದ್ದಳು.

2016ರಲ್ಲಿ ಬಿಡುಗಡೆಗೊಂಡ ಸಿಆರ್‌ಎಫ್ ಅನುದಾನದಲ್ಲಿ ರಸ್ತೆ ಕಾಮಗಾರಿ ಆರಂಭವಾಗಿತ್ತು. ಇದೀಗ ಮೊದಲ ಮಳೆಗೆ ರಸ್ತೆಗಳಲ್ಲಿ ಬಿರುಕುಗಳು ಕಾನೀಸಿಕೊಂಡಿದೆ. ಕಳೆದ ತಿಂಗಳು ರಸ್ತೆಯ ಬದಿಗಳು ಧರೆಗಳು ಕುಸಿದು ವಾಹನ ಸಂಚಾರಕ್ಕೆ ತಡೆಯಾಗಿತ್ತು. ಜೆಸಿಬಿ ಮೂಲಕ ಕುಸಿತಗೊಂಡ ಮಣ್ಣನ್ನು ತೆರವು ಮಾಡಿ ವಾಹನ ಸಂಚಾಕ್ಕೆ ಅನುವು ಮಾಡಿಕೊಡಲಾಗಿತ್ತು.

ಗುಂಡಿ ದೇವಸ್ಥಾನ ಸಮೀಪ ರಸ್ತೆಯಲ್ಲಿ ಬಿರುಕುಗಳು ಕಾನೀಸಿಕೊಂಡಿದ್ದರಿಂದ ಕುಸಿತ ಕಾಣುವ ಸಂಭವವಿದೆ. ಪಿಲತ್ತಡ್ಕದ ಬಳಿ ಮೋರಿ ಕುಸಿತದಿಂದ ರಸ್ತೆ ಸಂಪರ್ಕವನ್ನೇ ಕಡಿದುಕೊಳ್ಳಬಹುದು. ಮಳೆಯ ನೀರು ರಸ್ತೆಯಲ್ಲೇ ಹರಿಯುವುದರಿಂದ ರಸ್ತೆಯಲ್ಲಿ ಬಿರುಕು ಮಧ್ಯೆ ನೀರು ಹೋಗುವುದರಿಂದ ಇನ್ನಷ್ಟು ಬಿರುಕು ಕಾಣಿಸಿಕೊಂಡಿದೆ. ಬೆಳ್ತಂಗಡಿ ವೃತ್ತ ನಿರೀಕ್ಷಕ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಧರ್ಮಸ್ಥಳ ಪೋಲಿಸ್ ಠಾಣೆಯಿಂದ ಬಿರುಕುಗೊಂಡ ರಸ್ತೆ ಹಾಗೂ ಮೋರಿ ಕುಸಿತಗೊಂಡಲ್ಲಿ ಬ್ಯಾರಿಕೇಡ್ ಹಾಕಲು ಸೂಚಿಸಲಾಗಿದೆ.

ಅಪಾಯಕಾರಿ ರಸ್ತೆ:

ಇದೀಗ ಕಳೆದ ಮೂರು ದಿನಗಳಿಂದ ಧಾರಾಕಾರವಾಗಿ ಸುರಿವ ಮಳೆಗೆ ಈ ರಸ್ತೆಯಲ್ಲಿ ಬಿರುಕುಗಳು, ಮೋರಿ ಕುಸಿತದಿಂದ ಅಪಾಯದಲ್ಲಿದೆ. ಚಾರ್ಮಾಡಿಯಿಂದ ಧರ್ಮಸ್ಥಳಕ್ಕಾಗಿ ಪರಿಯಶಾಂತಿ ರಾಷ್ಟ್ರೀಯ ಹೆದ್ದಾರಿಗೆ ಹೋಗಿ ಬರುವ ಘನ ವಾಹನಗಳು ಸಮೀಪವಾಗುತ್ತದೆ ಎಂದು ಇದೇ ಮಾಗ್ವಾಗಿ ಸಂಚರಿಸುತ್ತದೆ. ಹೊಸತಾಗಿ ನಿರ್ಮಾಣವಾದ ರಸ್ತೆಯಲ್ಲಿ ತಿರುವುಗಳಿದ್ದು, ಶಿಥಿಲಗೊಂಡ ಮೋರಿಗಳಿದ್ದರೂ ಯಾವುದೇ ಫಲಕಗಳನ್ನು ಅಳವಡಿಸಲಾಗಿಲ್ಲ. ರಾತ್ರಿ ವೇಳೆ ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಬಿರುಕು ಬಿಟ್ಟ ರಸ್ತೆಯ ಬಗ್ಯೆ ಅರಿವಾಗದೇ ಅಪಾಯವನ್ನು ಎದುರಿಸಬೇಕಾದೀತು. ತಕ್ಷಣ ಸಂಬಂಧ ಪಟ್ಟ ಇಲಾಖೆ ಎಚ್ಚೆತ್ತುಕೊಂಡು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News