ಮರಳುಗಾರಿಕೆ, ಕೋರೆಯ ವ್ಯವಹಾರ ಸಕ್ರಮ: ಚಂದ್ರಪ್ರಕಾಶ್ ತುಂಬೆ

Update: 2018-07-10 16:21 GMT

ಬಂಟ್ವಾಳ, ಜು. 10: ಮರಳುಗಾರಿಕೆ ಮತ್ತು ಕೋರೆಯ ವ್ಯವಹಾರವನ್ನು ನಾವು ಸಕ್ರಮವಾಗಿಯೇ ಮಾಡುತ್ತಿದ್ದು, ಇದಕ್ಕೆ ಬೇಕಾದ ಪೂರಕ ದಾಖಲೆಗಳು ತಮ್ಮಲ್ಲಿವೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ ಶೆಟ್ಟಿ ಹಾಗೂ ಬಿ.ಪದ್ಮಶೇಖರ ಜೈನ್ ಹೇಳಿದ್ದಾರೆ.

ಮಂಗಳವಾರ ಸಂಜೆ ಬಿ.ಸಿ.ರೋಡ್ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಅವರು ನಮ್ಮ ಮೇಲೆ ಆಧಾರ ರಹಿತ ಆರೋಪ ಮಾಡುತ್ತಿದ್ದು, ರಮಾನಾಥ ರೈ ಮತ್ತು ನಮ್ಮ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಇದಾಗಿದೆ ಎಂದರು.

ಎಂಎಲ್‌ಸಿ ಚುನಾವಣೆಯಲ್ಲಿ 127 ಮತಗಳಿಸಿದ ಬಂಟ್ವಾಳ್, ಜಿಪಂ ಸದಸ್ಯರಾಗಿ ಎರಡು ಬಾರಿ ಆಯ್ಕೆಯಾದ ತನ್ನನ್ನು ಅದರಲ್ಲೂ ಮಾಜಿ ಶಾಸಕರನ್ನು ಸೋಲಿಸಿ ಆಯ್ಕೆಯಾದ ತನ್ನನ್ನು ಹಾಗೂ ಅತ್ಯಧಿಕ ಬಹುಮತದಿಂದ ಗೆದ್ದ ಪದ್ಮಶೇಖರ್ ಜೈನ್ ಅವರ ಕುರಿತು ಹೇಳಲು ಯಾರು? ಎಂದು ಪ್ರಶ್ನಿಸಿದ ಚಂದ್ರಪ್ರಕಾಶ್ ಶೆಟ್ಟಿ, ಕನಿಷ್ಠ ಪಂಚಾಯತ್ ಸದಸ್ಯರಾಗದ ಹರಿಕೃಷ್ಣ ಬಂಟ್ವಾಳ ರಮಾನಾಥ ರೈ ಮತ್ತು ತಮ್ಮ ವಿರುದ್ಧ ವಿನಾ ಕಾರಣ ಆಪಾದನೆ ಮಾಡುತ್ತಿದ್ದಾರೆ. ರಾಜೇಶ್ ನಾಯ್ಕ್ ಅವರನ್ನು ನಾನೇ ಗೆಲ್ಲಿಸಿದ್ದು ಎಂದು ಹೇಳುವ ಹರಿಕೃಷ್ಣ ಬಂಟ್ವಾಳ, ಬಿಲ್ಲವ ಮುಖಂಡರೆನಿಸಿಕೊಂಡಿದ್ದರೂ ಜನಾರ್ದನ ಪೂಜಾರಿ ಅವರನ್ನು ಯಾಕೆ ಗೆಲ್ಲಿಸಲು ಶಕ್ತರಾಗಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಹರಿಕೃಷ್ಣ ಬಂಟ್ವಾಳ ಕಮಿಷನ್ ಪಡೆದಿದ್ದಾರೆ. ನಾನು ಎಲ್ಲಿಯೂ ಕಮಿಷನ್ ತೆಗೆದುಕೊಂಡಿಲ್ಲ. ಇದನ್ನು ದೇವರ ಎದುರು ಹೇಳಲೂ ಸಿದ್ಧ. ಮರಳು, ಕೋರೆ ವಹಿವಾಟನ್ನು ಕಾನೂನು ಪ್ರಕಾರ ಮಾಡುತ್ತಿದ್ದೇವೆ. ಬಿಜೆಪಿ ಮುಖಂಡರು ನಮ್ಮನ್ನು ಬೊಟ್ಟು ಮಾಡಿ ಅಕ್ರಮ ವ್ಯಾಪಾರದಲ್ಲಿ ತೊಡಗಿಕೊಂಡಿದ್ದಾರೆ ಎಂದು ಚಂದ್ರಪ್ರಕಾಶ ಶೆಟ್ಟಿ ಹೇಳಿದರು.

ಬಿ.ಸಿ.ರೋಡ್ ಸರ್ವೀಸ್ ರಸ್ತೆ ಸರಿಪಡಿಸಲಿ

ಸರಕಾರದ ಅನುದಾನ ಪೋಲಾಗುತ್ತಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳುವುದು ಬೇಜವಾಬ್ದಾರಿ ಹೇಳಿಕೆ ಎಂದು ಹೇಳಿದ ಚಂದ್ರಪ್ರಕಾಶ ಶೆಟ್ಟಿ, ಬಂಟ್ವಾಳ ಕ್ಷೇತ್ರದಲ್ಲಿ ನಡೆದ ಹಲವು ಅಭಿವೃದ್ಧಿ ಕಾರ್ಯಗಳು ರಮಾನಾಥ ರೈ ಅವರಿಂದ ಆಗಿರುವುದು ಕಣ್ಣೆದುರೇ ಇದೆ. ಇವೆಲ್ಲವೂ ಪ್ರಯೋಜನ ಇಲ್ಲ ಎಂದು ಹೇಳುವ ಹಾಗೂ ತಜ್ಞರ ಸಮಿತಿ ನೇಮಿಸುತ್ತೇನೆ ಎಂದು ಹೇಳುವ ಮೊದಲು ಬಿ.ಸಿ.ರೋಡಿನ ಫ್ಲೈ ಓವರ್ ಅಡಿಯ ಕೆಸರನ್ನು ತೆಗೆಸಲಿ, ಸರ್ವೀಸ್ ರಸ್ತೆ ಸರಿಪಡಿಸಲಿ ಎಂದು ಸವಾಲೆಸೆದರು.

ಇದೆಲ್ಲವೂ ರಾಜಕೀಯ ಷಡ್ಯಂತ್ರ

ಕಾವಳಮುಡೂರು ಗ್ರಾಮದ ರಕ್ಷಿತಾರಣ್ಯದಲ್ಲಿ ಕಲ್ಲು ಕೋರೆ ಅನಧಿಕೃತವಾಗಿ ನಡೆಸುತ್ತಿದ್ದೇನೆ ಎಂದು ಪದ್ಮನಾಭ ಮಯ್ಯ ಅವರು, ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಜಿಪಂ ಸದಸ್ಯ ಪದ್ಮಶೇಖರ ಜೈನ್, ಈ ಆರೋಪವು ಸತ್ಯಕ್ಕೆ ದೂರವಾದದ್ದು, ಇದು ತನ್ನ ಹೆಸರಿಗೆ ಕಳಂಕ ತರಲು ಮತ್ತು ತೇಜೋವಧೆ ಮಾಡುವ ಉದ್ದೇಶದಿಂದ ಅವರು ಈ ಹೇಳಿಕೆ ನೀಡಿದ್ದಾರೆ. ತನಗೆ 2027ರವರೆಗೆ ಕೋರೆ ನಡೆಸಲು ಅನುಮತಿ ಇದ್ದು, ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲಾತಿಗಳು ತನ್ನ ಬಳಿ ಇವೆ. ಇವರು ಇತ್ತೀಚೆಗೆ ಲೋಕಾಯುಕ್ತಕ್ಕೂ ಈ ಕುರಿತು ದೂರು ನೀಡಿದ್ದು, ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಈ ದೂರನ್ನು ವಜಾಗೊಳಿಸಿ ಆದೇಶಿಸಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.

ಹರಿಕೃಷ್ಣ ಬಂಟ್ವಾಳ್ ತನ್ನ ವಿರುದ್ಧ ನೀಡಿದ ಹೇಳಿಕೆಯನ್ನು ಗಮನಿಸಿದಾಗ, ಇದೆಲ್ಲವೂ ರಾಜಕೀಯ ಷಡ್ಯಂತ್ರದಿಂದ ನಡೆದಿದೆ ಎಂಬುದು ಸ್ಪಷ್ಟವಾಗಿದೆ. ಈ ವಿಚಾರದಲ್ಲಿ ಯಾವುದೇ ಮಾಹಿತಿ ಇಲ್ಲದೆ ಯಾರೋ ಹೇಳಿದ ಸುಳ್ಳು ಆರೋಪವನ್ನು ನಂಬಿ ನನ್ನ ಮೇಲೆ ಹರಿಕೃಷ್ಣ ಬಂಟ್ವಾಳ್ ಅವರು ಹೇಳಿಕೆ ನೀಡಿರುವುದು ದುರದೃಷ್ಟಕರ ಎಂದು ಜೈನ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಬೇಬಿ ಕುಂದರ್, ಬ್ಲಾಕ್ ಕಾಂಗ್ರೆಸ್ ಬಂಟ್ವಾಳ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಪ್ರಮುಖರಾದ ಜಗದೀಶ ಕೊಯ್ಲ, ಪ್ರಕಾಶ್ ಶೆಟ್ಟಿ ತುಂಬೆ ಉಪಸ್ಥಿತರಿದ್ದರು.

ಇವರೆಲ್ಲ ಹಿಂದೂವಲ್ಲವೇ?:

ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ನಾವೂರು ಹರೀಶ್ ಪೂಜಾರಿ, ವಿನಾಯಕ ಬಾಳಿಗ, ಪ್ರವೀಣ್ ಪೂಜಾರಿ ಹಿಂದೂಗಳಲ್ಲವೇ ಎಂದು ಪ್ರಶ್ನಿಸಿದ ಚಂದ್ರಪ್ರಕಾಶ್ ಶೆಟ್ಟಿ, ಕಾಂಗ್ರೆಸ್‌ ಅವರಿಂದ ಇವರ ಹತ್ಯೆಯಾಗಿರಲಿಲ್ಲ. ಆಕ್ಷನ್‌ಗೆ ಮಾತ್ರ ರಿಯಾಕ್ಷನ್ ಎಂದು ಹೇಳುವ ಕಲ್ಲಡ್ಕ ಪ್ರಭಾಕರ ಭಟ್ ಇದಕ್ಕೆ ಉತ್ತರಿಸಲಿ. ಜಿಲ್ಲೆಯಲ್ಲಿ ನಡೆದ ಐದು ಕೊಲೆಗಳಲ್ಲಿ 4 ಕೊಲೆಗಳನ್ನು ಬಿಜೆಪಿಯ ನೇತೃತ್ವದಲ್ಲಿ ನಡೆದಿದೆ ಎಂದರು.

ಚುನಾವಣೆಯಲ್ಲಿ ಗೆದ್ದ ಬಳಿಕ ರಾಜೇಶ್ ನಾಯ್ಕ್ ಮತ್ತು ಕಲ್ಲಡ್ಕ ಪ್ರಭಾಕರ ಭಟ್ ಶಾಂತಿಮಂತ್ರ ಜಪಿಸುತ್ತಿದ್ದಾರೆ. ಮೊದಲೇ ಅದನ್ನು ಮಾಡಬಹು ದಿತ್ತಲ್ಲವೇ ? ಎಂದು ಹೇಳಿದ ಅವರು, ಇತ್ತೀಚೆಗೆ ಕಾಂತಪ್ಪ ಪೂಜಾರಿ ಮತ್ತು ಅವರ ಮಗಳ ಮೇಲೆ ಹಲ್ಲೆ ನಡೆಸಿದ್ದು, ಇದೇ ಕಲ್ಲಡ್ಕ ಪ್ರಭಾಕರ ಭಟ್ ಅವರ ಆಪ್ತರು ಎಂದು ಆರೋಪಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News