'ಹಿಂದೂ ಪಾಕಿಸ್ತಾನ' ಹೇಳಿಕೆ: ಶಶಿ ತರೂರ್ ಕಚೇರಿ ಮೇಲೆ ದಾಳಿ
Update: 2018-07-16 14:13 GMT
ಹೊಸದಿಲ್ಲಿ, ಜು.16: ತಿರುವನಂತಪುರಂನಲ್ಲಿರುವ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರ ಕಚೇರಿಯ ಮೇಲೆ ಸೋಮವಾರ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಎನ್ ಡಿಎ ಸರಕಾರ ಮತ್ತೊಮ್ಮೆ ಅಧಿಕಾರಕ್ಕೆ ಬಂದಲ್ಲಿ ಭಾರತವು ಹಿಂದೂ ಪಾಕಿಸ್ತಾನವಾಗಲಿದೆ ಎಂಬ ತರೂರ್ ಹೇಳಿಕೆ ವಿರೋಧಿಸಿ ಈ ದಾಳಿ ನಡೆದಿದೆ ಎನ್ನಲಾಗಿದೆ.
ಈ ದಾಳಿಯ ಹಿಂದೆ ಬಿಜೆಪಿಯ ಯುವ ಮೋರ್ಛಾ ಇದೆ ಎಂದು ಶಶಿ ತರೂರ್ ಆರೋಪಿಸಿದ್ದು, "ಹಿಂಸೆ ಹಾಗು ವಿಧ್ವಂಸಕತೆ"ಗೆ ಬಿಜೆಪಿ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದಿದ್ದಾರೆ.
"ತಿರುನಂತಪುರಂನಲ್ಲಿರುವ ನನ್ನ ಕಚೇರಿಯ ಮೇಲೆ ಬಿಜೆಪಿ ಯುವಮೋರ್ಛಾ ದಾಳಿ ನಡೆಸಿದೆ. ಬಾಗಿಲುಗಳು, ಗೋಡೆಗಳು ಹಾಗು ಗೇಟ್ ಗಳಿಗೆ ಕಪ್ಪು ಬಣ್ಣ ಎರಚಿದ ಅವರು, ಅಹವಾಲುಗಳೊಂದಿಗೆ ಕಾಯುತ್ತಿದ್ದ ಮುಗ್ಧ ಜನರನ್ನು ಅಲ್ಲಿಂದ ಹೊರದಬ್ಬಿದರು. ನಾನು ಪಾಕಿಸ್ತಾನಕ್ಕೆ ಹೋಗುವಂತೆ ಘೋಷಣೆಗಳನ್ನು ಕೂಗಿದರು" ಎಂದವರು ಟ್ವೀಟ್ ಮಾಡಿದ್ದಾರೆ.