ವಕ್ಫ್ ಸಂಪತ್ತುಗಳ ರಕ್ಷಣೆಗೆ ಇಮಾಮ್ಸ್ ಕೌನ್ಸಿಲ್ ಒತ್ತಾಯ

Update: 2018-07-16 17:59 GMT

ಬೆಂಗಳೂರು, ಜು.16: ನೂರಾರು ವರ್ಷಗಳ ಇತಿಹಾಸವಿರುವ ವಕ್ಫ್ ಆಸ್ತಿಯು ರಾಜ್ಯದಲ್ಲಿ ಸುಮಾರು 54 ಸಾವಿರ ಎಕ್ರೆಯಷ್ಟಿದ್ದು, ಅದರ ರಕ್ಷಣೆಗೆ ಸರಕಾರ ಮುಂದಾಗಬೇಕು ಎಂದು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಕರ್ನಾಟಕ ರಾಜ್ಯ ಅಧ್ಯಕ್ಷ ಮೌಲಾನ ಯೂಸುಫ್ ರಷಾದಿ ಒತ್ತಾಯಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಇದು ಪೂರ್ವ ಕಾಲದ ಮುಸ್ಲಿಂ ರಾಜರುಗಳು, ಜಮೀನುದಾರರು ಅಲ್ಲಾಹನ ಹೆಸರಿನಲ್ಲಿ ವಕ್ಫ್ ಮಾಡಿ ಮುಸ್ಲಿಂ ಸಮುದಾಯದ ಧಾರ್ಮಿಕ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಅಭಿವೃದ್ಧಿಗಾಗಿ ದಾನ ಮಾಡಿದ ಆಸ್ತಿಗಳಾಗಿದೆ. ಇದನ್ನು ನಿರ್ದಿಷ್ಟ ಉದ್ದೇಶಕ್ಕಾಗಿ ಮಾತ್ರ ಬಳಕೆ ಮಾಡಬೇಕಾದದ್ದು ಧಾರ್ಮಿಕ ನಿಯಮ ಮತ್ತು ದೇಶದ ಸಂವಿಧಾನದ ನಿಯಮವೂ ಆಗಿರುತ್ತದೆ. ಈ ಮೊದಲಿನ ವರದಿಗಳು ಬಹಿರಂಗಪಡಿಸಿದ ಪ್ರಕಾರ 27 ಸಾವಿರ ಎಕ್ರೆ (2.5 ಲಕ್ಷ ಕೋಟಿ ರೂ.) ಭೂಮಿ ಕಾನೂನಿಗೆ ವಿರುದ್ಧವಾಗಿ ಅನ್ಯರ ಪಾಲಾಗಿದೆ. ವಕ್ಫ್ ಭೂಮಿ ಅತಿಕ್ರಮಣದಲ್ಲಿ ಮುಸ್ಲಿಂ ಸಮಾಜದ ಮುಖಂಡರ ಹೆಸರುಗಳು ಕೇಳಿ ಬರುತ್ತಿರುವುದು ದುರಂತವಾಗಿದೆ. ವಕ್ಫ್ ಸಂಪತ್ತು ನಾಶವಾಗುವುದರಲ್ಲಿ ಕೆಲವು ರಾಜಕಾರಣಿಗಳು, ಸರಕಾರಿ ಅಧಿಕಾರಿಗಳು ಕಾರಣಕರ್ತರಾಗಿದ್ದಾರೆ ಎಂದು ಆಪಾದಿಸಿದ್ದಾರೆ.

ವಕ್ಫ್ ಭೂಮಿ ಅತಿಕ್ರಮಣಗಳನ್ನು ತೆರವುಗೊಳಿಸಲು 1998ರಲ್ಲಿ ಸುಪ್ರೀಂ ಕೋರ್ಟ್ ಸರಕಾರಗಳಿಗೆ ಆದೇಶ ಮಾಡಿದೆ. ಧಾರ್ಮಿಕವಾದ ವಕ್ಫ್ ನಿಯಮ ಮತ್ತು ಸಂವಿಧಾನದ ನಿಯಮವನ್ನು ಉಲ್ಲಂಘಿಸಿ ಅತಿಕ್ರಮಣ ನಡೆಸಿದ ವಕ್ಫ್ ಭೂಮಿಯನ್ನು ಸರಕಾರ ಶೀಘ್ರವಾಗಿ ತೆರವುಗೊಳಿಸಬೇಕು. ಎಲ್ಲಾ ವಕ್ಫ್ ಭೂಮಿಯ ರಕ್ಷಣೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ವಕ್ಫ್ ಸಂಪತ್ತನ್ನು ನಿರ್ದಿಷ್ಟ ಉದ್ದೇಶಗಳಿಗಾಗಿ ಬಳಕೆ ಮಾಡುವುದರ ಮೂಲಕ ಮುಸ್ಲಿಂ ಸಮುದಾಯದ ಸಬಲೀಕರಣಕ್ಕಾಗಿ ಸರಕಾರ ಪ್ರಮಾಣಿಕ ಪ್ರಯತ್ನ ಮಾಡಬೇಕೆಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News