ಉಳ್ಳಾಲದಲ್ಲಿ ತೀವ್ರಗೊಂಡ ಕಡಲ್ಕೊರೆತ
Update: 2018-07-17 23:12 IST
ಉಳ್ಳಾಲ, ಜು. 17: ಉಳ್ಳಾಲದಲ್ಲಿ ಕಳೆದ ಕೆಲವು ದಿನಗಳಿಂದ ಕಡಲ್ಕೊರೆತದ ಆರ್ಭಟ ತೀವ್ರಗೊಂಡಿದ್ದು ಉಳ್ಳಾಲದ ಕೈಕೋ, ಹಿಲೇರಿಯಾನಗರ ಪ್ರದೇಶದಲ್ಲಿ ಹಲವಾರು ಮನೆಗಳಿಗೆ ಸಮುದ್ರದ ಅಲೆಗಳು ಅಪ್ಪಳಿಸಿ ಅಪಾರ ಹಾನಿಯಾಗಿದೆ. ಕೈಕೋ ಪ್ರದೇಶದಲ್ಲಿ ಮಂಗಳವಾರ ಬೀಪಾತುಮ್ಮ ಅವರ ಮನೆಯು ಕಡಲಿನ ಆರ್ಭಟಕ್ಕೆ ಧರೆಗುರುಳಿದ್ದು, ಹಿಲೇರಿಯಾ ನಗರದ ಅಬ್ದುಲ್ ಖಾದರ್, ಹಮೀದ್ ಸೇರಿದಂತೆ ಹಲವಾರು ಮನೆಗಳು ಅಲೆಗಳಿಗೆ ಆಹುತಿಯಾಗಿದೆ. ಈ ಭಾಗದ ಒಟ್ಟು ಎಂಭತ್ತಕ್ಕೂ ಅಧಿಕ ಮನೆಗಳು ಅಪಾಯದಂಚಿನಲ್ಲಿದೆ ಮತ್ತು ಜನಜೀವನ ಅಸ್ತವ್ಯಸ್ಥಗೊಂಡಿದೆ.