×
Ad

ಜು. 21-23: ಮಂಗಳೂರಿನಿಂದ ಹಜ್‌ಯಾನ

Update: 2018-07-17 23:27 IST

ಮಂಗಳೂರು, ಜು.17: ಸರಕಾರಿ ಸ್ವಾಮ್ಯದ ಭಾರತೀಯ ಹಜ್ ಸಮಿತಿ ಮೂಲಕ ಪವಿತ್ರ ಹಜ್ ನಿರ್ವಹಿಸಲಿರುವ ರಾಜ್ಯದ ಯಾತ್ರಿಕರ ಮೊದಲ ತಂಡವು ಜು. 21ರಂದು ಸಂಜೆ ಮಂಗಳೂರು ವಿಮಾನ ನಿಲ್ದಾಣದಿಂದ ಪ್ರಯಾಣ ಹೊರಡಲಿದೆ.

ಜು. 21ರಿಂದ 23ರವರೆಗೆ ಮೂರು ದಿನಗಳ ಕಾಲ ಪ್ರತಿ ಸಂಜೆ ತಲಾ 146 ಯಾತ್ರಿಕರನ್ನೊಳಗೊಂಡ ವಿಮಾನಗಳು ಮಂಗಳೂರಿನಿಂದ ಪವಿತ್ರ ಮದೀನಾ ನಗರಕ್ಕೆ ಹಾರಾಡಲಿವೆ. ಮಕ್ಕಾ, ಮದೀನಾ ಪುಣ್ಯಭೂಮಿಗಳಲ್ಲಿ 42 ದಿನ ವಾಸ್ತವ್ಯ ಹೂಡಲಿರುವ ಯಾತ್ರಿಕರು ಸೆ.1, 2, 3ರಂದು ಜಿದ್ದಾದಿಂದ ಹೊರಟು ಮಂಗಳೂರು ತಲುಪಲಿದ್ದಾರೆ ಎಂದು ರಾಜ್ಯ ಹಜ್ ಸಮಿತಿಯ ಸದಸ್ಯ ಕೆ.ಎಂ.ಅಬೂಬಕರ್ ಸಿದ್ದೀಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜು.19ರಿಂದ ನೋಂದಣಿ:  ಜು.21ರಂದು ಪ್ರಯಾಣಿಸಲಿರುವ ಹಜ್ ಯಾತ್ರಿಕರು ಜು.19ರಂದು ಬಜ್ಪೆ ಅನ್ಸಾರ್ ಶಾಲೆಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಜು.22 ಮತ್ತು 23ರ ಯಾತ್ರಿಕರು ಕ್ರಮವಾಗಿ ಜು.20 ಮತ್ತು 21ರಂದು ನೋಂದಣಿ ಮಾಡಿಕೊಳ್ಳಬೇಕು. ಪ್ರತಿದಿನ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ನೋಂದಣಿ ನಡೆಯಲಿದೆ.

ನೋಂದಣಿಗೆ ಬರುವ ವೇಳೆ ಹಣ ಪಾವತಿಸಿದ ರಶೀದಿ ಹಾಗೂ ಲಗೇಜ್‌ಗಳನ್ನು ತರಬೇಕು. ಲಗೇಜ್ ತಲಾ ಒಬ್ಬರಿಗೆ ಗರಿಷ್ಠ 22 ಕೆ.ಜಿ.ಗಳಿರುವ ಎರಡು ಸೂಟ್‌ಕೇಸ್‌ಗಳಾಗಿರುವಂತೆ ಸೂಚಿಸಲಾಗಿದೆ. ಪ್ರಯಾಣದ ವೇಳೆ ಗರಿಷ್ಠ 7 ಕೆ.ಜಿ. ಭಾರದ ಕೈಚೀಲಗಳನ್ನು ಒಯ್ಯಲು ಅವಕಾಶವಿದೆ.

ಜು.21ರಂದು ಉದ್ಘಾಟನಾ ಸಮಾರಂಭ

ಮೂರು ದಿನಗಳ ಮಂಗಳೂರು ಹಜ್ ಶಿಬಿರದ ಉದ್ಘಾಟನಾ ಸಮಾರಂಭವು ಜು. 21ರಂದು ಬೆಳಗ್ಗೆ 10 ಗಂಟೆಗೆ ಬಜ್ಪೆ ಅನ್ಸಾರ್ ಶಾಲಾ ಸಭಾಂಗಣದಲ್ಲಿ ನಡೆಯಲಿದೆ. ರಾಜ್ಯ ಹಜ್ ಸಚಿವ ಝಮೀರ್ ಅಹ್ಮದ್ ಖಾನ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಚಿವ ಯು.ಟಿ.ಖಾದರ್ ಹಾಗೂ ರಾಜ್ಯ ಹಜ್ ಸಮಿತಿಯ ಅಧ್ಯಕ್ಷ, ಮಾಜಿ ಸಚಿವ ಆರ್.ರೋಶನ್ ಬೇಗ್ ಭಾಗವಹಿಸಲಿದ್ದಾರೆ.

ಖಾಝಿ  ತ್ವಾಕ ಅಹ್ಮದ್ ಮುಸ್ಲಿಯಾರ್ ದುವಾ ನಡೆಸಿಕೊಡಲಿದ್ದಾರೆ. ಖಾಝಿ ಸೈಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಹಾಗೂ ಖಾಝಿ ಪಿ.ಎಂ. ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ಆಶೀರ್ವಚನ ನೀಡಲಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ವಿ.ವಿ.ರಾವ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಶಾಸಕ ಉಮಾನಾಥ್ ಕೋಟ್ಯಾನ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ನಳಿನ್‌ಕುಮಾರ್ ಕಟೀಲ್, ಶಾಸಕರಾದ ಡಾ. ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ರಾಜೇಶ್ ನಾಯಕ್, ಐವನ್ ಡಿಸೋಜ, ಬಿಎಂ ಫಾರೂಕ್, ಹರೀಶ್ ಕುಮಾರ್, ಯೆನೆಪೊಯ ವಿವಿ ಕುಲಾಧಿಪತಿ ವೈ ಅಬ್ದುಲ್ಲಾ ಕುಂಞಿ, ವಕ್ಫ್ ಜಿಲ್ಲಾಧ್ಯಕ್ಷ ಹಾಜಿ ಕಣಚೂರ್ ಮೋನು, ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಹಾಜಿ ಕೆ.ಎಸ್.ಎಂ.ಮಸೂದ್, ಮಾಜಿ ಶಾಸಕ ಬಿ.ಎ. ಮೊಯ್ದಿನ್ ಬಾವ ಆಗಮಿಸಲಿದ್ದಾರೆ.

ಮಂಗಳೂರು ಹಜ್ ನಿರ್ವಹಣಾ ಸಮಿತಿಯ ಅಧ್ಯಕ್ಷ ಹಾಜಿ ವೈ.ಮುಹಮ್ಮದ್ ಕುಂಞಿ ನೇತೃತ್ವದಲ್ಲಿ ಹಜ್ ಶಿಬಿರದ ಸಿದ್ಧತೆಗಳು ಭರದಿಂದ ಸಾಗುತ್ತಿವೆ ಎಂದು ರಾಜ್ಯ ಹಜ್ ಸಮಿತಿಯ ಸದಸ್ಯ ಕೆ.ಎಂ.ಅಬೂಬಕರ್ ಸಿದ್ದೀಕ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News