ಪಡುಬಿದ್ರೆ : ಇಲಾಖೆಯ ಆದೇಶ ಉಲ್ಲಂಘಿಸಿದ ಶಿಕ್ಷಕಿ ಅಮಾನತು
ಪಡುಬಿದ್ರೆ, ಜು. 18: ಬೇರೆ ಶಾಲೆಗೆ ನಿಯೋಜನೆಗೊಂಡರೂ ಇಲಾಖೆಯ ಆದೇಶವನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಸಹಶಿಕ್ಷಕಿಯನ್ನು ಇಲಾಖೆ ಅಮಾನತುಗೊಳಿಸಿದೆ.
ಪಡುಬಿದ್ರೆಯ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸಹಶಿಕ್ಷಕಿ ಸಂಧ್ಯಾಸರಸ್ವತಿ ಅವರನ್ನು ಮೂಳೂರಿನ ಪ್ರೌಢಶಾಲೆಗೆ ನಿಯೋಜನೆಗೊಳಿಸಲು ಇಲಾಖೆ ಒಂದು ತಿಂಗಳ ಹಿಂದೆ ಆದೇಶ ನೀಡಿತ್ತು. ಆದರೆ ಅವರು ಅದನ್ನು ಪಾಲಿಸಲಿಲ್ಲ. ಈ ಬಗ್ಗೆ ಶಿಕ್ಷಣಾಧಿಕಾರಿಯವರೇ ಜೂ. 30ರಂದು ಶಾಲೆಗೆ ತೆರಳಿ ಜುಲೈ 2ರಂದು ನಿಯೋಜನೆಗೊಂಡ ಶಾಲೆಯಲ್ಲಿ ವರದಿ ನೀಡುವಂತೆ ನಿರ್ದೇಶನ ನೀಡಿದ್ದರು. ಆದರೆ ಅದನ್ನೂ ಪಾಲಿಸಲಿಲ್ಲ. ಈ ಕಾರಣದಿಂದ ಇಲಾಖೆಯ ಶಿಸ್ತು ಕ್ರಮದಂತೆ ಜುಲೈ 17ರಂದು ಶಿಕ್ಷಕಿಯನ್ನು ಅಮಾನತುಗೊಳಿಸಿ ಆದೇಶ ನೀಡಲಾಗಿದೆ. ಇದನ್ನೂ ಉಲ್ಲಂಘಿಸಿದಲ್ಲಿ ಇನ್ನೂ ಹೆಚ್ಚಿನ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶೇಷಶಯನ ಕಾರಿಂಜೆ ತಿಳಿಸಿದ್ದಾರೆ.
ಸಂಧ್ಯಾ ಸರಸ್ವತಿಯವರ ನಿಯೋಜನೆ ಹಿಂಪಡೆಯುವಂತೆ ಆಗ್ರಹಿಸಿ ಶಾಲೆಯ ಎಸ್ಡಿಎಂಸಿ ನಿಕಟಪೂರ್ವ ಅಧ್ಯಕ್ಷ ವೈ.ಸುಕುಮಾರ್ ನೇತೃತ್ವದಲ್ಲಿ ಇತ್ತೀಚೆಗೆ ಪ್ರತಿಭಟನೆ ನಡೆಸಲಾಗಿತ್ತು. ಅವರನ್ನು ವರ್ಗಾಯಿಸದಿದ್ದಲ್ಲಿ ಶಾಲೆಗೆ ಬೀಗ ಜಡಿಯುವುದಾಗಿ ದಲಿತ ಮುಖಂಡ ಲೋಕೇಶ್ ಕಂಚಿನಡ್ಕ ಅವರು ಎಚ್ಚರಿಕೆ ನೀಡಿದ್ದರು.