ರಾಜಕಾರಣಿಗಳು ಬಿ.ಎ.ಮೊಹಿದೀನ್‌ರ ಆದರ್ಶ ಪಾಲಿಸಬೇಕಿದೆ: ಮಾಜಿ ಸಿಎಂ ಸಿದ್ದರಾಮಯ್ಯ

Update: 2018-07-20 15:46 GMT

ಮಂಗಳೂರು, ಜು.20: ನಿಸ್ವಾರ್ಥ ರಾಜಕಾರಣಿಯಾಗಿದ್ದ ಮಾಜಿ ಸಚಿವ ಬಿ.ಎ.ಮೊಹಿದೀನ್ ಕೇವಲ ಮುಸ್ಲಿಮ್ ಸಮುದಾಯಕ್ಕೆ ಸೀಮಿತರಾದ ನಾಯಕರಾಗಿರಲಿಲ್ಲ. ಅವರು ಈ ನಾಡಿನ ಸರ್ವರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗುವ ಮೂಲಕ ಎಲ್ಲಾ ಸಮುದಾಯದ ನಾಯಕರಾಗಿ ಬೆಳೆದಿದ್ದರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ನಗರದ ಪುರಭವನದಲ್ಲಿ ಶುಕ್ರವಾರ ನಡೆದ ಮಾಜಿ ಸಚಿವ, ಹಿರಿಯ ಚೇತನ ಬಿ.ಎ.ಮೊಹಿದೀನ್ ಅವರ ‘ನನ್ನೊಳಗಿನ ನಾನು’ ಆತ್ಮಕಥನವನ್ನು ಬಿಡುಗಡೆಯ ಬಳಿಕ ನಡೆದ ‘ನುಡಿನಮನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರಾಜಕಾರಣದಲ್ಲಿ ಸದಾ ಕೈ-ಬಾಯಿ ಶುದ್ಧ ಮಾಡಿಕೊಂಡಿದ್ದ ಬಿ.ಎ.ಮೊಹಿದೀನ್ ಅವರಂತಹ ಆದರ್ಶ ರಾಜಕಾರಣಿ ಸಿಗಲಿಕ್ಕಿಲ್ಲ. ಅವರು ಬದುಕಿನುದ್ದಕ್ಕೂ ಆದರ್ಶ ಪಾಲಿಸಿಕೊಂಡು ಬಂದಿದ್ದರು. ಅದಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧರಾಗಿದ್ದರು. ಅವರು ಎಂದೂ ಕೂಡಾ ಸ್ವಾರ್ಥ ರಾಜಕಾರಣ ಮಾಡಿದವರಲ್ಲ. ಎಲ್ಲರನ್ನೂ ಪ್ರೀತಿಸುವ ಮತ್ತು ಗೌರವಿಸುವ ಗುಣ ಅವರಲ್ಲಿತ್ತು. ಅಹಿಂದ ವರ್ಗದ ಹಿತ ಬಯಸಿದ್ದ ಅವರ ಆದರ್ಶದ ಬದುಕನ್ನು ಇಂದಿನ ರಾಜಕಾರಣಿಗಳು ಪಾಲಿಸಬೇಕಾದ ಅಗತ್ಯವಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಮತೀಯವಾದ ಬೆಳೆಯಲು ಬಿಡಬಾರದು ಎಂದಿದ್ದ ಅವರು ಅದಕ್ಕಾಗಿ ಸ್ವಾತಂತ್ರ ಸಂಗ್ರಾಮದ ಮಾದರಿಯ ಹೋರಾಟದ ಅಗತ್ಯವಿದೆ ಎಂದು ಹೇಳಿಕೊಳ್ಳುತ್ತಿದ್ದರು. ಇಂತಹ ಹೋರಾಟಕ್ಕೆ ನೇತೃತ್ವ ನೀಡದೇ ಇದ್ದರೆ ಸೌಹಾರ್ದ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದರು. ಮೌಲ್ಯಾಧಾರಿತ ರಾಜಕಾರಣಕ್ಕಾಗಿ ಸದಾ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದ ಬಿ.ಎ.ಮೊಹಿದೀನ್ ಮುಸ್ಲಿಮ್ ಸಮುದಾಯದ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ವಿಶೇಷ ಕಾಳಜಿ ಹೊಂದಿದ್ದರು ಎಂದು ಸಿದ್ದರಾಮಯ್ಯ ನುಡಿದರು.

ರಾಜಕಾರಣದಲ್ಲಿ ಶತ್ರು-ಮಿತ್ರ ಎಂದೇನೂ ಇಲ್ಲ. ಯಾರು, ಯಾವಾಗ ಏನೂ ಆಗಬಹುದು. ಆದರೆ ಬಿ.ಎ.ಮೊಹಿದೀನ್ ತತ್ವ ಸಿದ್ಧಾಂತವನ್ನು ಕೊನೆಯವರೆಗೂ ಪಾಲಿಸುತ್ತಿದ್ದರು. ರಾಜಕೀಯದಲ್ಲಿ ಬದ್ಧತೆ ಬೆಳೆಸಿಕೊಂಡಿದ್ದರು. ಅವರು ಕಂಡ ಕನಸುಗಳನ್ನು ನಾವೆಲ್ಲಾ ನನಸುಗೊಳಿಸುವುದೇ ಅವರಿಗೆ ಸಲ್ಲಿಸುವ ಗೌರವವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

"ಬಿ.ಎ.ಮೊಹಿದೀನ್ ಎಂದೂ ಅಧಿಕಾರಕ್ಕಾಗಿ ಹಪಹಪಿಸಿದವರಲ್ಲ. ತನಗೆ ಸಿಗದಿದ್ದರೆ ಪರಿತಪಿಸಿದವರೂ ಅಲ್ಲ. ಆದರೆ, ತನ್ನ ಬಳಗದವರಿಗೆ ಅಧಿಕಾರ ಸಿಗದಿದ್ದರೆ ನೋವುನ್ನುತ್ತಿದ್ದರು. ರಾಜಕಾರಣ ಹೂವಿನ ಹಾಸಿಗೆಯಲ್ಲ. ನಾವು ಕ್ಷಣಕ್ಷಣಕ್ಕೂ ಅನುಭವಿಸುವ ಯಾತನೆ ನಮಗೆ ಮಾತ್ರ ಗೊತ್ತು. ಚಾರಿತ್ರ್ಯವಧೆ, ಆಧಾರರಹಿತ ಟೀಕೆ ಕೇಳಿಬಂದಾಗ ಯಾತಕ್ಕಾಗಿ ಹುಟ್ಟಿದ್ದೇವೆ ಎಂದೆಲ್ಲಾ ಅನಿಸುತ್ತಿದೆ. ಆದರೆ ಬಿ.ಎ. ಮೊಹಿದೀನ್ ಅವೆಲ್ಲವನ್ನು ಮೀರಿದ್ದರು. ನಾನೀಗ ರಾಜ್ಯ ವಿಧಾನ ಸಭಾಧ್ಯಕ್ಷ ಸ್ಥಾನದಲ್ಲಿರುವ ಕಾರಣ ಕೊಂಕು, ವ್ಯಂಗ್ಯ, ಸತ್ಯವನ್ನೂ ಹೇಳಲಾಗದ ಸ್ಥಿತಿಯಲ್ಲಿದ್ದೇನೆ" ಎನ್ನುತ್ತಾ ಸ್ಪೀಕರ್ ರಮೇಶ್ ಕುಮಾರ್ ಭಾವುಕರಾದರು.

"ನಾನು, ರಮೇಶ್ ಕುಮಾರ್, ಜಯಪ್ರಕಾಶ್ ಹೆಗ್ಡೆ, ಬಿ.ಎ.ಮೊಹಿದೀನ್ ಸಮಕಾಲೀನರು. ಜಾತ್ಯತೀತ ಮೌಲ್ಯಕ್ಕಾಗಿ ಎಂತಹ ತ್ಯಾಗಕ್ಕೂ ಸಿದ್ಧರಾಗಿದ್ದೆವು. ಅಂದಿನ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಬಿಜೆಪಿ ಜೊತೆ ಸಖ್ಯ ಮಾಡಿಕೊಂಡಾಗ ಮನನೊಂದು ನಾವು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ತಟಸ್ಥರಾಗಿ ನಿಲ್ಲುತ್ತಿದ್ದೆವು. ಆವಾಗ ನಮಗೆ ಸತ್ಯ, ನ್ಯಾಯ, ಪ್ರಾಮಾಣಿಕತೆ ಮುಖ್ಯವಾಗಿತ್ತು. ಈಗ ಅಂತಹವರೆಲ್ಲಾ ರಾಜಕಾರಣಕ್ಕೆ ಅರ್ಹರಲ್ಲ. ಅದನ್ನು ಬಿ.ಎ.ಮೊಹಿದೀನ್ ತನ್ನ ಕೃತಿಯಲ್ಲಿ ಮಾರ್ಮಿಕವಾಗಿ ತಿಳಿಸಿದ್ದಾರೆ" ಎಂದು ಮಾಜಿ ಸಚಿವ ಎಂ.ಸಿ.ನಾಣಯ್ಯ ಹೇಳಿದರು.

"ನನ್ನ ತಂದೆ ಯು.ಟಿ.ಫರೀದ್ ಅವರ ಒಡನಾಡಿಯಾಗಿದ್ದ ಬಿ.ಎ. ಮೊಹಿದೀನ್ ತನಗೆ ಸದಾ ಮಾರ್ಗದರ್ಶಕರಾಗಿದ್ದರು. ಸಮಸ್ಯೆಗಳು ಎದುರಾದಾಗಲೆಲ್ಲಾ ನಾನು ಅವರ ಸಲಹೆ ಪಡೆಯುತ್ತಿದ್ದೆ" ಎಂದು ಸಚಿವ ಯು.ಟಿ.ಖಾದರ್ ಹೇಳಿದರು.

ಬೆಂಗಳೂರಿನಲ್ಲಿ ನಿರ್ಮಿಸಲಿರುವ ಬ್ಯಾರಿ ಸೌಹಾರ್ದ ಭವನಕ್ಕೆ ಸ್ವಾಭಿಮಾನಿ ರಾಜಕಾರಣಕ್ಕೆ ಹೆಸರಾದ ಬಿ.ಎ.ಮೊಹಿದೀನ್ ಅವರ ಹೆಸರನ್ನಿಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಹೇಳಿದರು.

ಬಿ.ಎ.ಮೊಹಿದೀನ್ ಅವರ ಅಗಲಿಕೆಯಿಂದ ನಮಗೆ ತಬ್ಬಲಿಯ ಭಾವನೆಯಾಗುತ್ತಿದೆ. ಅವರು ನಮ್ಮನ್ನಗಲಿ 10 ದಿನಗಳಾದರೂ ಕೂಡಾ ನಮ್ಮ ಮನಸ್ಸಿನಿಂದ ಅವರು ದೂರವಾಗಿಲ್ಲ ಎನ್ನುತ್ತಾ ಬ್ಯಾರೀಸ್ ಸಂಸ್ಥೆಯ ಮುಖ್ಯಸ್ಥ ಸೈಯದ್ ಮುಹಮ್ಮದ್ ಬ್ಯಾರಿ ಭಾವುಕರಾದರು.

ಐವನ್ ಡಿಸೋಜ, ಮಾಜಿ ಶಾಸಕ ಯೋಗೀಶ್ ಭಟ್, ಮೇಯರ್ ಭಾಸ್ಕರ ಮೊಯ್ಲಿ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ. ವಸಂತ ಆಚಾರಿ, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ನುಡಿನಮನ ಸಲ್ಲಿಸಿದರು.

ಬಿ.ಎ.ಮೊಹಿದೀನ್ ಅವರ ಸಹಕಾರ ಮತ್ತು ಪ್ರೋತ್ಸಾಹದಿಂದ ಎಂಬಿಬಿಎಸ್ ತೇರ್ಗಡೆಗೈದ ಜೋಕಟ್ಟೆಯ ತಬ್ರೀಝ್ ಅವರು ಬಿ.ಎ.ಮೊಹಿದೀನ್ ಅವರನ್ನು ಸ್ಮರಿಸಿದರು.

ಟೀಕೇಸ್ ಸಂಸ್ಥೆಯ ಮುಖ್ಯಸ್ಥ ಉಮರ್ ಟೀಕೆ, ಯೆನೆಪೊಯ ಸಂಸ್ಥೆಯ ಮುಖ್ಯಸ್ಥ ಯೆನೆಪೊಯ ಅಬ್ದುಲ್ಲ ಕುಂಞಿ,ಆತ್ಮಕಥನದ ನಿರೂಪಕ ಮುಹಮ್ಮದ್ ಕುಳಾಯಿ, ಬಿ.ಎ.ಮೊಹಿದೀನ್ ಅವರ ಪುತ್ರ ಅಬ್ದುಲ್ ಖಾದರ್ ಮುಸ್ತಾಕ್, ಅಳಿಯಂದಿರಾದ ಅಹ್ಮದ್ ಶರೀಫ್, ಮುಹಮ್ಮದ್ ನವಾಝ್ ಮತ್ತಿತರರು ಉಪಸ್ಥಿತರಿದ್ದರು.

ಆತ್ಮಕಥನದ ನಿರೂಪಕ ಬಿ.ಎ.ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು. ಬಿ.ಎ.ಮೊಹಿದೀನ್ ಅವರ ಪುತ್ರ ಆಸಿಫ್ ಮಸೂದ್ ವಂದಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News