ಅವಿಶ್ವಾಸ ನಿರ್ಣಯ ಚರ್ಚೆ : ದೇವೇಗೌಡರ ಬಗ್ಗೆ ಮಾತನಾಡಿದ ಪ್ರಧಾನಿ

Update: 2018-07-20 17:52 GMT

ಹೊಸದಿಲ್ಲಿ,ಜು.20: ಶುಕ್ರವಾರ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಗಳಿಗೆ ಉತ್ತರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ತನ್ನ ಸರಕಾರದ ಸಾಧನೆಗಳನ್ನು ತೆರೆದಿಟ್ಟರು. 18,000 ಗ್ರಾಮಗಳ ವಿದ್ಯುದ್ದೀಕರಣದಿಂದ ಹಿಡಿದು ಸರ್ವರಿಗೂ ಆರೋಗ್ಯ ಭಾಗ್ಯ,ಬಡವರಿಗೆ ಅಡಿಗೆ ಅನಿಲ ವಿತರಣೆ,ಕೃಷಿಕರಿಗಾಗಿ ಮತ್ತು ದೇಶದ ಆರ್ಥಿಕತೆಯನ್ನು ಬಲಗೊಳಿಸಲು ತನ್ನ ಸರಕಾರವು ಕೈಗೊಂಡಿರುವ ಕ್ರಮಗಳ ಕುರಿತು ಮಾತನಾಡಿದ ಅವರು,ಭಾರತೀಯ ಚುನಾವಣಾ ಆಯೋಗ,ನ್ಯಾಯಾಂಗ,ಆರ್‌ಬಿಐ,ಅಂತರರಾಷ್ಟ್ರೀಯ ಏಜೆನ್ಸಿಗಳಲ್ಲಿ ಕಾಂಗ್ರೆಸ್‌ಗೆ ನಂಬಿಕೆಯಿಲ್ಲ. ಅವರಿಗೆ ಯಾವುದರಲ್ಲಿಯೂ ವಿಶ್ವಾಸವಿಲ್ಲ ಎಂದು ಕುಟುಕಿದರು.

ಫ್ರಾನ್ಸ್‌ನಿಂದ ರಫೇಲ್ ಯುದ್ಧವಿಮಾನಗಳ ಖರೀದಿ ಕುರಿತಂತೆ ಟೀಕೆಗಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ತರಾಟೆಗೆತ್ತಿಕೊಂಡ ಮೋದಿ,ಅವರು ರಫೇಲ್ ವಿಷಯವನ್ನೆತ್ತಿದಾಗ ತನಗೆ ಆಶ್ಚರ್ಯವಾಗಿತ್ತು. ಸದನದಲ್ಲಿ ಒಂದು ಬೇಜವಾಬ್ದಾರಿಯ ಆರೋಪದಿಂದಾಗಿ ಉಭಯ ದೇಶಗಳು ಹೇಳಿಕೆಗಳನ್ನು ಬಿಡುಗಡೆ ಮಾಡುವಂತಾಯಿತು. ಇಂತಹ ಹುಡುಗಾಟಿಕೆಯ ವರ್ತನೆಯು ಯಾರಿಗಾದರೂ ಶೋಭಿಸುತ್ತದೆಯೇ ಎಂದು ಪ್ರಶ್ನಿಸಿದರು.

ಪ್ರಧಾನಿಯವರು ತನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಲಾರರು ಎಂಬ ರಾಹುಲ್ ಹೇಳಿಕೆಗೆ ತಿರುಗೇಟು ನೀಡಿದ ಮೋದಿ, ‘‘ಅವರು ಸರಿಯಾಗಿಯೇ ಹೇಳಿದ್ದಾರೆ. ಅವರು ದೊಡ್ಡ ‘ನಾಮದಾರ್’ ಆಗಿದ್ದಾರೆ.. ನಾನಾದರೋ ಬಡ ಕುಟುಂಬದಿಂದ ಬಂದಿರುವ ಹಿಂದುಳಿದ ವರ್ಗದ ವ್ಯಕ್ತಿಯಾಗಿದ್ದೇನೆ. ನಾನೋರ್ವ ಸಾದಾ ‘ಕಾಮದಾರ್’ ಆಗಿದ್ದೇನೆ. ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡುವಷ್ಟು ಧೈರ್ಯ ನನಗೆಲ್ಲಿಂದ ಬರಬೇಕು’’ ಎಂದು ಪ್ರಶ್ನಿಸಿದರು.

ಚಂದ್ರಶೇಖರ್,ಪ್ರಣವ್ ಮುಖರ್ಜಿ,ಐ.ಕೆ ಗುಜ್ರಾಲ್ ಅಥವಾ ಎಚ್.ಡಿ.ದೇವೇಗೌಡ ಹೀಗೆ ಯಾರೇ ಆಗಿರಲಿ...ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಪ್ರಯತ್ನಿಸಿದ್ದರು ಮತ್ತು ಅದಕ್ಕಾಗಿ ದುಬಾರಿ ಬೆಲೆಯನ್ನು ತೆತ್ತಿದ್ದಾರೆ ಎಂದರು.

ಸರ್ಜಿಕಲ್ ದಾಳಿಯನ್ನು ನೀವು(ರಾಹುಲ್)ಜುಮ್ಲಾ ದಾಳಿ ಎಂದು ಬಣ್ಣಿಸಿದಿರಿ. ನೀವು ನನ್ನನ್ನು ಎಷ್ಟು ಬೇಕಾದರೂ ಬೈಯಬಹುದು. ಆದರೆ ಭಾರತದ ಯೋಧರನ್ನು ಅವಮಾನಿಸುವುದನ್ನು ನಿಲ್ಲಿಸಿ. ನಮ್ಮ ಸಶಸ್ತ್ರ ಪಡೆಗಳಿಗೆ ಇಂತಹ ಅವಮಾನವನ್ನು ನಾನು ಸಹಿಸುವುದಿಲ್ಲ ಎಂದರು.

ಕಪ್ಪುಹಣದ ವಿರುದ್ಧ ತನ್ನ ಸರಕಾರದ ಹೋರಾಟ ಮುಂದುವರಿಯಲಿದೆ. ಇದರಿಂದಾಗಿ ತಾನು ಶತ್ರುಗಳನ್ನು ಸೃಷ್ಟಿಸಿಕೊಂಡಿದ್ದೇನೆ,ಆದರೆ ಅದೂ ಒಳ್ಳೆಯದೇ ಎಂದ ಮೋದಿ,ತನ್ನ ಸರಕಾರವು ತಂದಿದ್ದ ಬೇನಾಮಿ ಆಸ್ತಿಗಳ ಮಸೂದೆ ಹಲವಾರು ವರ್ಷಗಳಿಂದ ಅಂಗೀಕಾರಗೊಳ್ಳದೆ ಸಿಕ್ಕಿಹಾಕಿಕೊಂಡಿದೆ. ಇದು ಏಕೆ ಸಂಭವಿಸಿದೆ,ಅವರು(ಪ್ರತಿಪಕ್ಷ) ಯಾರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಇದು ಸರಕಾರದ ಸದನ ಪರೀಕ್ಷೆಯಲ್ಲ,ಇದು ಕಾಂಗ್ರೆಸ್ ಮತ್ತು ಅದರ ತಥಾಕಥಿತ ಮಿತ್ರಪಕ್ಷಗಳ ಸದನ ಪರೀಕ್ಷೆಯಾಗಿದೆ. ಅವಿಶ್ವಾಸ ನಿರ್ಣಯವು ಈ ಎಲ್ಲ ಪಕ್ಷಗಳನ್ನು ಒಂದಾಗಿರಿಸಲು ನಡೆಸಿದ ಷಡ್ಯಂತ್ರವಾಗಿದೆ. ಓರ್ವ ವ್ಯಕ್ತಿಯನ್ನು ತೆಗೆದುಹಾಕುವುದು ಇದರ ಉದ್ದೇಶ. ನೀವು ಸರಕಾರದಲ್ಲಿ ಎಷ್ಟು ಅಪನಂಬಿಕೆಯನ್ನು ಹೊಂದಿದ್ದೀರೋ ಕನಿಷ್ಠ ಅಷ್ಟಾದರೂ ನಂಬಿಕೆೆಯನ್ನು ನಿಮ್ಮ ಮಿತ್ರಪಕ್ಷಗಳಲ್ಲಿ ಇರಿಸಿ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News