ದನದ ಮಾಂಸ ಅಕ್ರಮ ಸಾಗಾಟ : ದನದ ಮಾಂಸ, ವಾಹನ ವಶ
ಮಂಗಳೂರು, ಜು.21: ಕೊಣಾಜೆ ಪೊಲೀಸ್ ಠಾಣಾ ಅಧಿಕಾರಿ, ಸಿಬ್ಬಂದಿ ಕರ್ತವ್ಯದಲ್ಲಿದ್ದ ವೇಳೆ ಕರ್ತವ್ಯಕ್ಕೆ ಅಡ್ಡಿ ಪಡಿಸಿ ದನದ ಮಾಂಸವನ್ನು ಅಕ್ರಮವಾಗಿ ಸಾಗಾಟ ಮಾಡಲು ಯತ್ನಿಸಿದ ಘಟನೆ ಕಾಯರ್ಗೋಳಿ ಎಂಬಲ್ಲಿ ಶನಿವಾರ ನಡೆದಿದೆ. ದನದ ಮಾಂಸ ಹಾಗೂ ಬೊಲೆರೊ ವಾಹನವೊಂದನ್ನು ವಶಕ್ಕೆ ಪಡೆಯಲಾಗಿದೆ.
ಮೆಲ್ಕಾರ್ ಕಡೆಯಿಂದ ಬರುತ್ತಿದ್ದ ಬೊಲೆರೊ ಕಾರನ್ನು ಕರ್ತವ್ಯದಲ್ಲಿದ್ದ ಪೊಲೀಸರು ನಿಲ್ಲಿಸಲು ಸೂಚಿಸಿದ್ದಾರೆ. ಈ ವೇಳೆ ವಾಹನವನ್ನು ಚಾಲಕ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾನೆ. ಪೊಲೀಸರು ವಾಹನವನ್ನು ಬೆನ್ನಟ್ಟಿದ್ದಾರೆ. ಆರೋಪಿಗಳು ಮುಡಿಪು ಎಂಬಲ್ಲಿ ವಾಹನ ಬಿಟ್ಟು ಪರಾರಿಯಾಗಿದ್ದಾರೆ.
ಬಳಿಕ ವಾಹನವನ್ನು ತಪಾಸಣೆ ಮಾಡಿದಾಗ ದನಗಳನ್ನು ಕಳವು ಮಾಡಿ ಕಡಿದು ಅಕ್ರಮವಾಗಿ ಮಾಂಸ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ದನದ ಮಾಂಸ ಹಾಗೂ ಸಾಗಾಟಕ್ಕೆ ಬಳಸಿದ ಬೊಲೆರೊ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ದಾಳಿಯಲ್ಲಿ ಕೊಣಾಜೆ ಠಾಣಾ ಪೊಲೀಸ್ ನಿರೀಕ್ಷಕ ಅಶೋಕ್, ಪಿಎಸ್ಸೈ ರವಿ ಪಿ. ಪವಾರ್ ಹಾಗೂ ಸಿಬ್ಬಂದಿ ರಮೇಶ್, ದೇವರಾಜ್, ಸತೀಶ್ ಭಾಗವಹಿಸಿದ್ದರು.
ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.