ಮೂಡುಬಿದಿರೆಯಲ್ಲಿ ಗುಂಪು ಥಳಿತ ಪ್ರಕರಣ: ಗಾಯಾಳು ಮೃತ್ಯು

Update: 2018-07-21 17:21 GMT

ಮೂಡುಬಿದಿರೆ, ಜು.21: ನೀರಿನ ಡ್ರಮ್ ಕದ್ದ ಆರೋಪದಲ್ಲಿ ಗುಂಪೊಂದರಿಂದ ಥಳಿತಕ್ಕೊಳಗಾದ ವ್ಯಕ್ತಿಯೋರ್ವ ಘಟನೆಯ ಎರಡು ದಿನಗಳ ಬಳಿಕ ಮೃತಪಟ್ಟ ಘಟನೆ ದರೆಗುಡ್ಡೆಯಲ್ಲಿ ಶನಿವಾರ ನಡೆದಿದೆ.

ದರೆಗುಡ್ಡೆ ದರ್ಖಾಸು ನಿವಾಸಿ ಅನಿಲ್ ಯಾನೆ ಮಾರ್ಕ್ ಮಥಾಯಸ್(52) ಮೃತಪಟ್ಟವರು ಜು.19ರಂದು ಸ್ಥಳೀಯ ಗಿರಿಜಾ ಶೆಟ್ಟಿ ಎಂಬವರ ಮನೆ ಆವರಣದಲ್ಲಿದ್ದ ನೀರಿನ ಡ್ರಮ್ ಕಳ್ಳತನ ಮಾಡಿದ ಆರೋಪದಲ್ಲಿ ಗುಂಪೊಂದು ಸೇರಿ ಆರೋಪಿಗೆ ಹಲ್ಲೆ ನಡೆಸಿ ಕಳ್ಳತನ ಮಾಡಿದ್ದ ನೀರಿನ ಡ್ರಮ್ ಅನ್ನು ಆರೋಪಿಯಿಂದ ವಾಪಾಸು ಕದ್ದ ಸ್ಥಳಕ್ಕೆ ತಂದಿರಿಸಿದ್ದರು ಎನ್ನಲಾಗಿದೆ.

ಮರುದಿನ ಅಂದರೆ ಶುಕ್ರವಾರ ಅನಿಲ್ ಕೆಲಸಕ್ಕೆ ಹೋಗಿದ್ದರು. ಆದರೆ ಶನಿವಾರ ನಸುಕಿನ ಜಾವ ಮನೆಯಲ್ಲಿ ಹೊಟ್ಟೆ ನೋವು ಉಂಟಾಗಿ ವಾಂತಿ ಮಾಡಿದರೆನ್ನಲಾಗಿದೆ. ತಕ್ಷಣ ಚಿಕಿತ್ಸೆಗಾಗಿ ಮೂಡುಬಿದಿರೆ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಪರೀಕ್ಷಿಸಿದ ವೈದ್ಯರು ಅನಿಲ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆನ್ನಲಾಗಿದೆ.

ನೀರಿನ ಡ್ರಮ್ ಕಳ್ಳತನಕ್ಕೆ ಸಂಬಂಧಿಸಿ ಕೆಲವರು ಸೇರಿ ನನ್ನ ಪತಿಗೆ ತೀವ್ರ ಸ್ವರೂಪದ ಹಲ್ಲೆ ನಡೆಸಿದ್ದೇ ಸಾವಿಗೆ ಕಾರಣ ಎಂದು ಮೃತ ಅನಿಲ್ ಮಾರ್ಕ್ ಮಥಾಯಸ್ ಅವರ ಪತ್ನಿ ಚಂಪಾ ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ದಿನೇಶ್ ಶೆಟ್ಟಿ ಮತ್ತು ಬೊಗ್ಗು ಶೆಟ್ಟಿಎಂಬವರ ಹೆಸರನ್ನು ದಾಖಲಿಸಿದ್ದಾರೆ.

ಮಹಿಳೆ ನೀಡಿದ ದೂರಿನಂತೆ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News