ಹಬ್ಬಗಳು ಸ್ನೇಹ ಸೌಹಾದರ್ತೆಯನ್ನು ಸಾರುವ ಕೊಂಡಿ: ಹುಮೈರಾ
ಕಾಪು, ಜು.21: ಹಬ್ಬಗಳು ಸಮಾಜದಲ್ಲಿ ಸ್ನೇಹ ಸೌಹಾದರ್ತೆಯನ್ನು ಸಾರುವ ಕೊಂಡಿಗಳಾಗಿವೆ. ಇಸ್ಲಾಮ್ ಶಾಂತಿಯ ಧರ್ಮವಾಗಿದ್ದು, ಸಮಾಜದಲ್ಲಿರುವ ಬಡತನವನ್ನು ನಿವಾರಿಸಲು ಆದೇಶಿಸುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಸೌಹಾರ್ದತೆಯನ್ನು ಬಲಪಡಿಸುವ ಕಾರ್ಯ ಮಾಡಬೇಕೆಂದು ಜಮಾಅತ್ನ ಮಹಿಳಾ ವಿಭಾಗದ ಸಂಚಾಲಕಿ ಹುಮೈರಾ ಕಾರ್ಕಳ ಹೇಳಿದ್ದಾರೆ.
ಜಮಾಅತೆ ಇಸ್ಲಾಮೀ ಹಿಂದ್ ಕಾಪು ಮಹಿಳಾ ವಿಭಾಗದ ವತಿಯಿಂದ ಕಳತ್ತೂರಿನ ಇಂಟರ್ನ್ಯಾಶನಲ್ ಸ್ಕೂಲ್ನಲ್ಲಿ ಇತ್ತೀಚೆಗೆ ಆಯೋಜಿಸಲಾದ ಈದ್ ಸೌಹಾರ್ದ ಕೂಟದಲ್ಲಿ ಅವರು ಮಾತನಾಡುತಿದ್ದರು. ಇಸ್ಲಾಮ್ ಧರ್ಮ ಸಮಾಜದಲ್ಲಿರುವ ಕೆಡುಕುಗಳನ್ನು ಅಳಿಸಲು, ಒಳಿತನ್ನು ಸ್ಥಾಪಿಸಲು, ಶಾಂತಿ ಸೌಹಾರ್ದತೆಯನ್ನು ನೆಲೆಗೊಳಿಸಲು ಪ್ರತಿಯೊಬ್ಬರಿಗೂ ಆದೇಶಿಸುತ್ತದೆ ಎಂದರು.
ವೇದಿಕೆಯಲ್ಲಿ ಶಾಲಾ ಸಂಚಾಲಕಿ ಶೆಹನಾಝ್, ಪ್ರಾಂಶುಪಾಲೆ ಸ್ಮಿತಾ ಹಾಗೂ ಅಂಜಲಿ ಉಪಸ್ಥಿತರಿದ್ದರು. ಸಾದಿಯಾ ಕುರ್ಆನ್ ಪಠಿಸಿದರು. ಕಾಪು ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವರ್ತುಲದ ಸಂಚಾಲಕಿ ಶೆಹನಾಝ್ ಕಾಪು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಆಯಿಶಾ ಶೈಮಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.