ಸರಣಿ ಅಪಘಾತ: ಬೈಕ್ ಸವಾರ ಮೃತ್ಯು

Update: 2018-07-22 16:40 GMT

ಮಂಗಳೂರು, ಜು.22: ತೊಕ್ಕೊಟ್ಟುವಿನಿಂದ ಮಂಗಳೂರಿಗೆ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರೊಂದು ಢಿಕ್ಕಿ ಹೊಡೆದು ರಸ್ತೆಗೆಸೆಯಲ್ಪಟ್ಟ ಸವಾರನ ಮೇಲೆ ಟ್ಯಾಂಕರ್ ಹರಿದು ಮೃತಪಟ್ಟ ಘಟನೆ ರಾ.ಹೆ. 66ರ ನೇತ್ರಾವತಿ ಸೇತುವೆ ಸಮೀಪ ರವಿವಾರ ನಡೆದಿದೆ.

ದರೇಬೈಲ್ ನಿವಾಸಿ ಎಂ.ಕೃಷ್ಣ(57) ಮೃತಪಟ್ಟ ದುರ್ದೈವಿ. ಮೃತ ಎಂ.ಕೃಷ್ಣ ಎಕ್ಕೂರಿನ ಕಾಲೇಜೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.

ರವಿವಾರ ಮಧ್ಯಾಹ್ನ ತೊಕ್ಕೊಟ್ಟುವಿನಿಂದ ಮಂಗಳೂರಿಗೆ ಕಡೆಗೆ ಎಂ.ಕೃಷ್ಣ ಚಲಾಯಿಸಿಕೊಂಡು ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಅದೇ ಮಾರ್ಗದಿಂದ ಬರುತ್ತಿದ್ದ ಕಾರೊಂದು ಢಿಕ್ಕಿ ಹೊಡೆದಿದೆ. ಈ ವೇಳೆ ಮೃತ ಕೃಷ್ಣ ರಸ್ತೆಗೆಸೆಯಲ್ಪಟ್ಟು ಗಾಯಗೊಂಡಿದ್ದಾರೆ. ಬಳಿಕ ಹಿಂದಿನಿಂದ ಬರುತ್ತಿದ್ದ ಟ್ಯಾಂಕರ್ ರಸ್ತೆಯಲ್ಲಿ ಬಿದ್ದಿದ್ದ ಕೃಷ್ಣ ಅವರ ಮೇಲೆಯೇ ಹರಿದು ಹೋಗಿದೆ. ಘಟನೆಯಲ್ಲಿ ದರೇಬೈಲ್‌ನ ಕೃಷ್ಣ ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಈ ಕುರಿತು ಮಂಗಳೂರು ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News