ಸತ್ವಯುತ ಆಹಾರವೇ ಔಷಧಿಯಾಗಬೇಕು: ಭಾರತಿ ನಾಯಕ್
ಉಡುಪಿ, ಜು.23: ಆಷಾಢ ಮಾಸದಲ್ಲಿ ಭೂಗರ್ಭದಿಂದ ವಿವಿಧ ಔಷಧೀಯ ಸತ್ವಗಳು ಇರುವ ಗಿಡ ಮೂಲಿಕೆಗಳ ಉದ್ಭವವಾಗುತ್ತದೆ. ಇಂತಹ ಗಿಡ ಮೂಲಿಕೆಗಳ ಮಹತ್ವವನ್ನು ಅರಿತು ಸಮಯೋಚಿತವಾಗಿ ಬಳಸುವುದು ನಮ್ಮ ಆರೋಗ್ಯಕ್ಕೆ ಹಿತಕರ ಎಂದು ಎಂದು ತೆಕ್ಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಭಾರತಿ ಜಿ.ನಾಯಕ್ ಹೇಳಿದ್ದಾರೆ.
ಅಂಬಲಪಾಡಿ ಶ್ರೀವಿಠೋಬ ಭಜನಾ ಮಂದಿರ ಬಿಲ್ಲವ ಸೇವಾ ಸಂಘದ ವತಿಯಿಂದ ಸಂಘದ ಮಹಿಳಾ ಘಟಕದ ಸಹಯೋಗದೊಂದಿಗೆ ರವಿವಾರ ಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ಆಯೋಜಿಸಲಾದ ಆಟಿಡೊಂಜಿ ಕೂಟದಲ್ಲಿ ಆಷಾಡ ಮಾಸ ದಿನಾಚರಣೆಯ ಔಚಿತ್ಯ ಹಾಗೂ ಔಷಧೀಯ ಸಸ್ಯಗಳ ಉಪಯೋಗದ ಬಗ್ಗೆ ಅವರು ಮಾಹಿತಿ ನೀಡಿದರು.
ಸತ್ವಯುಕ್ತ ಸೊಪ್ಪು ತರಕಾರಿಗಳನ್ನು ಆಹಾರವಾಗಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯು ಹೆಚ್ಚುತ್ತದೆ. ನಾವು ಸೇವಿಸುವ ಆಹಾರವೇ ಔಷಧಿಯಾಗ ಬೇರೆ ಹೊರತು ಔಷಧಿಯೇ ಆಹಾರವಾಗಬಾರದೆಂದು ಅವರು ತಿಳಿಸಿದರು.
ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷ ಗೋಪಾಲ್ ಸಿ.ಬಂಗೇರ ಉದ್ಘಾಟಿಸಿ ದರು. ಕೃಷಿ ವ್ಯವಸಾಯದಲ್ಲಿ ಸುದೀರ್ಘವಾಗಿ ತೊಡಗಿಸಿಕೊಂಡಿದ್ದ ಹಿರಿಯ ಮಹಿಳೆ ರಾಧು ಪೂಜಾರ್ತಿ ಅವರನ್ನು ಸನ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷ ಎ.ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಕೃಷ್ಣ ಕೋಟ್ಯಾನ್, ಕೋಶಾಧಿಕಾರಿ ದಯಾನಂದ ಎ., ಮಹಿಳಾ ಘಟಕದ ಸಹ ಸಂಚಾಲಕಿ ದೇವಕಿ ಕೆ. ಕೋಟ್ಯಾನ್, ಜತೆ ಕಾರ್ಯದರ್ಶಿ ಸವಿತಾ ಸಂತೋಷ್, ವಿಜಯ ಕೃಷ್ಣ ಉಪಸ್ಥಿತರಿದ್ದರು.
ಸಂಘದ ಮಹಿಳಾ ಘಟಕದ ಸಂಚಾಲಕಿ ವಿಜಯಾ ಜಿ.ಬಂಗೇರ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜಯಂತಿ ಹರೀಶ್ ವಂದಿಸಿದರು. ಲೋಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಸುಮಾರು 30 ವಿವಿಧ ಬಗೆಯ ಆಟಿ ತಿಂಗಳ ಖಾದ್ಯಗಳ ಪ್ರಾತ್ಯಕ್ಷಿಕೆಯೊಂದಿಗೆ ಸಾಮೂಹಿಕ ಸಹ ಭೋಜನ ನಡೆಯಿತು. ವಿವಿಧ ಗ್ರಾಮೀಣ ಕ್ರೀಡೆಗಳನ್ನು ನಡೆಸಿ ಬಹುಮಾನ ವಿತರಿಸ ಲಾಯಿತು.