ಬಿಲಿಯಾಧಿಪತಿಗಳ ಆರ್ಥಿಕ ಮಟ್ಟ ಏರಿಕೆ ಮೋದಿ ಸಾಧನೆ: ಪುತ್ತೂರು ಬ್ಲಾಕ್ ಕಾಂಗ್ರೆಸ್
ಪುತ್ತೂರು, ಜು. 23: ಬೆಲೆ ಏರಿಕೆ, ನಿರುದ್ಯೋಗ, ಆರ್ಥಿಕ ಕುಸಿತ, ಕೋಮುವಾದ ಇವೆಲ್ಲ ಕೇಂದ್ರ ಸರಕಾರದ ಸಾಧನೆ. ಮೋದಿ ಅಧಿಕಾರಕ್ಕೆ ಬಂದ ಮೇಲೆ ಬಿಲಿಯಾಧಿಪತಿಗಳ ಆರ್ಥಿಕ ಮಟ್ಟ ಏರಿದೆಯೇ ಹೊರತು ಸಾಮಾನ್ಯ ಜನರ ಜೀವನ ಮಟ್ಟ ಸುಧಾರಿಸಿಲ್ಲ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಆರೋಪಿಸಿದ್ದಾರೆ.
ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ ಜಾರಿಗೆ ಬಂದ ಯೋಜನೆಗಳನ್ನೇ ಹೆಸರು ಬದಲಾಯಿಸಿ ಹೊಸ ಹೆಸರಿನಲ್ಲಿ ಮೋದಿ ಜಾರಿಗೊಳಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಕುಸಿದಿದ್ದರೂ ನಮ್ಮಲ್ಲಿ ಪೆಟ್ರೋಲ್ ಬೆಲೆ ಇಳಿಯುತ್ತಿಲ್ಲ. ಆದರೆ ಬೇಳೆಕಾಳುಗಳ ಬೆಲೆ ಏರುತ್ತಲೇ ಇದೆ. ಕಾಶ್ಮೀರದಲ್ಲಿ ಶಾಂತಿ ನೆಲಸಿಲ್ಲ. ಪಾಕಿಸ್ತಾನದ ತಂಟೆಗೆ ಕಡಿವಾಣ ಹಾಕಿಲ್ಲ. ಇದೆಲ್ಲ ವಿಕಾಸವೇ? ಜನರ ಮನಸಿನಲ್ಲಿ ಕೇವಲ ಕನಸುಗಳನ್ನು ಬಿತ್ತಿ, ಅದಕ್ಕಾಗಿ ಬಣ್ಣ ಬಣ್ಣದ ಭರವಸೆಗಳನ್ನು ನೀಡಿ ಕೊನೆಗೆ ಯಾವುದನ್ನೂ ಈಡೇರಿಸದೆ ಹೊಸ ಕನಸುಗಳನ್ನು ಬಿತ್ತಲು ಮುಂದಾಗುವ ಮೋದಿ ತಮ್ಮ ಮಾತಿನ ಮೋಡಿಯಲ್ಲೇ ಮೋಸ ಮಾಡುತ್ತಿದ್ದಾರೆ. ಅದು ಬಿಟ್ಟರೆ ದೇಶದ ಅಭಿವೃದ್ದಿಗೆ ಮೋದಿ ಏನೂ ಕೊಡುಗೆ ನೀಡಿಲ್ಲ ಎಂದರು.
ಆಧಾರ್ ಯೋಜನೆ ಯುಪಿಎ ಸರಕಾರ ಜಾರಿಗೆ ತಂದಾಗ ಅದನ್ನು ಪ್ರಬಲವಾಗಿ ವಿರೋಧಿಸಿದ್ದ ಮೋದಿ ಮತ್ತು ಬಿಜೆಪಿ ಈಗ ಅದನ್ನೇ ಒಪ್ಪಿಕೊಂಡು ಎಲ್ಲದಕ್ಕೂ ಕಡ್ಡಾಯ ಮಾಡಿದೆ. ಜಿಎಸ್ಟಿ ಕೂಡ ಕಾಂಗ್ರೆಸ್ ತಯಾರಿಸಿದ ಯೋಜನೆ. ಅದನ್ನೇ ಮೋದಿ ಸರಕಾರ ಜಾರಿಗೊಳಿಸಿದ್ದರೂ ಯುಪಿಎ ಸರಕಾರ ನಿಗದಿ ಮಾಡಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಶೇ. 28ರವರೆಗೆ ತರಿಗೆ ವಿಧಿಸುವ ಮೂಲಕ ಜಿಎಸ್ಟಿಯನ್ನು ಜನರ ಪಾಲಿಗೆ ಹೊರೆ ಮಾಡಿದೆ. ನರೇಗಾ ಯೋಜನೆಯೂ ಯುಪಿಎ ಸರಕಾರದ ಕೊಡುಗೆ. ಆಗ ಅದನ್ನು ಟೀಕಿಸಿದ್ದ ಮೋದಿ ಈಗ ಅದನ್ನೇ ಅಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ತಂದ ನಿರ್ಮಲ ಗ್ರಾಮ ಯೋಜನೆಯನ್ನೇ ಈಗ ಸ್ವಚ್ಛ ಭಾರತ ಎಂದು ಬದಲಾಯಿಸಲಾಗಿದೆ. ಪ್ರತೀ ಕುಟುಂಬಕ್ಕೂ ಬ್ಯಾಂಕ್ ಖಾತೆ ನೀಡುವ ಕಾಂಗ್ರೆಸ್ ಸರಕಾರದ ಅಭಿಯಾನವನ್ನೇ ಜನಧನ್ ಎಂಬ ಹೊಸ ಹೆಸರಿನಿಂದ ಜಾರಿಗೊಳಿಸಲಾಗಿದೆ. ರಾಜೀವ ಗಾಂಧಿ ಗ್ರಾಮೀಣ ವಿದ್ಯುದ್ದೀಕರಣ ಯೋಜನೆಯನ್ನೇ ದೀನ ದಯಾಳ್ ವಿದ್ಯುತ್ ಯೋಜನೆಯಾಗಿ ಹೆಸರಿಸಲಾಗಿದೆ. ಪಂಚವಾರ್ಷಿಕ ಯೋಜನೆಗೆ ಈಗ ನೀತಿ ಆಯೋಗ ಎಂದು ಹೆಸರಿಸಲಾಗಿದೆ. ಈ ಎಲ್ಲದರಲ್ಲೂ ಮೋದಿ ಸರಕಾರದ ಹೆಚ್ಚುಗಾರಿಕೆ ಏನೂ ಇಲ್ಲ ಎಂದು ಆರೋಪಿಸಿದರು.
ಕಳೆದ ಹತ್ತು ವರ್ಷಗಳಿಂದ ದ.ಕ. ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಂಸದರು ಊಟಕ್ಕಿಲ್ಲದ ಉಪ್ಪಿನಕಾಯಿ ಆಗಿದ್ದಾರೆ. ಜನಪರ ಕೆಲಸ ಮಾಡದೆ ಕೇವಲ ಪ್ರಚಾರದಲ್ಲೇ ನಂಬರ್ ವನ್ ಸಂಸದರಾಗಿದ್ದಾರೆ. ಐದು ವರ್ಷದಲ್ಲಿ ಐದು ಗ್ರಾಮಗಳನ್ನು ಆದರ್ಶ ಗ್ರಾಮವಾಗಿ ಅಭಿವೃದ್ಧಿಪಡಿಸಬೇಕಾಗಿದ್ದ ಸಂಸದರು ಕೇವಲ ಬಳ್ಪವೊಂದನ್ನು ಮಾತ್ರ ದತ್ತು ಪಡೆದು ಅಲ್ಲೂ ಕೂಡ ಪೂರ್ಣ ಅಭಿವೃದ್ಧಿ ಮಾಡಲಾಗದೆ ಬಸವಳಿದಿದ್ದಾರೆ ಎಂದು ಟೀಕಿಸಿದರು.
ಮುಂಬರುವ ಪುತ್ತೂರು ನಗರಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳನ್ನು ಪಕ್ಷ ಅಂತಿಮಗೊಳಿಸಲಿದೆ. ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧರು. ಮೀಸಲಾತಿ ಅಂತಿಮ ಪಟ್ಟಿ ಪ್ರಕಟಗೊಂಡ ನಂತರವಷ್ಟೇ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಪಕ್ಷದ ಹಾಲಿ ಸದಸ್ಯರೆಲ್ಲರಿಗೆ ಟಿಕೆಟ್ ನೀಡಲಾಗುವುದೇ ಎಂಬುದು ಕೂಡ ಮೀಸಲಾತಿ ಪಟ್ಟಿ ಪ್ರಕಟಗೊಂಡ ಬಳಿಕಷ್ಟೇ ತೀರ್ಮಾನಗೊಳ್ಳಲಿದೆ. ಅದರ ಬಗ್ಗೆ ಈಗ ಏನೂ ಹೇಳಲಾಗದು ಎಂದು ಹೇಳಿದ ಮಹಮ್ಮದ್ ಬಡಗನ್ನೂರು, ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರ ವಿರುದ್ಧ ಕೆಪಿಸಿಸಿ ಕ್ರಮ ಕೈಗೊಳ್ಳಲಿದೆ ಎಂದರು. ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಿದ್ದರೂ, ಉಪಾಧ್ಯಕ್ಷರು ಬಿಜೆಪಿಯವರಿದ್ದಾರೆ. ಈ ಅವ್ಯವಸ್ಥೆಗೆ ಕಾಂಗ್ರೆಸ್ ಮಾತ್ರ ಕಾರಣವಲ್ಲ, ಬಿಜೆಪಿಯೂ ಕಾರಣ. ಹಾಗಾಗಿ ಆಡಳಿತದ ವೈಫಲ್ಯಗಳೇನಾದರೂ ಇದ್ದರೆ ಅದರಲ್ಲಿ ಬಿಜೆಪಿಗೂ ಪಾಲಿದೆ ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ಬ್ಲಾಕ್ ಪ್ರಧಾನ ಕಾರ್ಯದರ್ಶಿಗಳಾದ ಕೃಷ್ಣ ಪ್ರಸಾದ್ ಆಳ್ವಾ, ಅಮಳ ರಾಮಚಂದ್ರ ಉಪಸ್ಥಿತರಿದ್ದರು.