ದಲಿತ ಯುವಕನಿಗೆ ಥಳಿಸಿ ಅಂಬೇಡ್ಕರ್, ದಲಿತರನ್ನು ಅವಮಾನಿಸಲು ಬಲವಂತ
ಮೀರತ್, ಜು.24: ದಲಿತ ಯುವಕನೊಬ್ಬನಿಗೆ ಥಳಿಸಿದ ಗುಂಪೊಂದು ದಲಿತ ಸಮುದಾಯದ ಬಗ್ಗೆ ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅವಹೇಳನ ಮಾಡುವಂತೆ ಬಲವಂತಪಡಿಸಿದ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ. ಹಲ್ಲೆಯ ವಿಡಿಯೋ ಮಾಡಿದ್ದ ದುಷ್ಕರ್ಮಿಗಳು ಇದೀಗ ತಲೆಮರೆಸಿಕೊಂಡಿದ್ದಾರೆ.
ಡಾ.ಬಿ.ಆರ್.ಅಂಬೇಡ್ಕರ್ ರನ್ನು ಅವಮಾನಿಸುವಂತೆ ದುಷ್ಕರ್ಮಿಗಳು ಯುವಕನನ್ನು ಒತ್ತಾಯಿಸುತ್ತಿರುವುದು 30 ಸೆಕೆಂಡುಗಳ ವಿಡಿಯೋದಲ್ಲಿ ಕಾಣಿಸುತ್ತದೆ. ನಿರಂತರವಾಗಿ ಯುವಕನ ಕೆನ್ನೆಗೆ ಹೊಡೆಯುವ ಕಿಡಿಗೇಡಿಗಳು ಕ್ಯಾಮರಾ ನೋಡುವಂತೆ ದಲಿತ ಯುವಕನನ್ನು ಒತ್ತಾಯಿಸಿದ್ದಾರೆ. ಎರಡೂ ಕೈ ಮುಗಿದು ನನ್ನನ್ನು ಬಿಟ್ಟುಬಿಡಿ ಎಂದು ಯುವಕ ಗೋಗರೆದಿದ್ದಾನೆ.
ಯುವಕ ತನ್ನ ಮನೆಗೆ ಹಿಂದಿರುಗುತ್ತಿದ್ದಾಗ ಜುಲೈ 18ರಂದು ಈ ಘಟನೆ ನಡೆದಿತ್ತು. ಸೋಮವಾರ ಯುವಕ ಈ ಬಗ್ಗೆ ದೂರು ನೀಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದುಷ್ಕರ್ಮಿಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಶೀಘ್ರ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.