ಗುಂಪು ಹತ್ಯೆಗಳಿಗೆ ಅನಗತ್ಯ ಮಹತ್ವ ನೀಡಲಾಗುತ್ತಿದೆ ಎಂದ ಆದಿತ್ಯನಾಥ್!
Update: 2018-07-25 19:52 IST
ಲಕ್ನೋ, ಜು.25: ಗುಂಪು ಹತ್ಯೆಯಂತಹ ಘಟನೆಗಳಿಗೆ ಅನಗತ್ಯ ಮಹತ್ವ ನೀಡಲಾಗುತ್ತಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮನುಷ್ಯರೂ ಕೂಡ ಪ್ರಮುಖರೇ ಹಾಗೆಯೇ ಗೋವುಗಳೂ ಕೂಡ, ಇವೆರಡನ್ನೂ ರಕ್ಷಿಸಬೇಕು ಎಂದವರು ಹೇಳಿದರು.
“ಇಂತಹ ಘಟನೆಗಳಿಗೆ ಕಾಂಗ್ರೆಸ್ ತುಪ್ಪ ಸುರಿಯುತ್ತಿದೆ. ಗುಂಪು ಹತ್ಯೆಗಳಿಗೆ ಅನಗತ್ಯ ಪ್ರಾಮುಖ್ಯತೆ ನೀಡಲಾಗುತ್ತಿದೆ. ಗುಂಪುಹತ್ಯೆಯ ಬಗ್ಗೆ ಮಾತನಾಡುವುದಾದರೆ 1984ರಲ್ಲಿ ನಡೆದ್ದೇನು?. ಕಾನೂನು ಮತ್ತು ಸುವ್ಯವಸ್ಥೆ ರಾಜ್ಯಗಳ ವಿಷಯ” ಎಂದು ಆದಿತ್ಯನಾಥ್ ಹೇಳಿದರು.
“ನಾವು ಎಲ್ಲರಿಗೂ ರಕ್ಷಣೆ ನೀಡುತ್ತೇವೆ. ಆದರೆ ಪ್ರತಿಯೊಬ್ಬರನ್ನೂ, ಪ್ರತಿ ಸಮುದಾಯವನ್ನೂ, ಪ್ರತಿ ಧರ್ಮವನ್ನೂ ರಕ್ಷಿಸುವುದು ನಮ್ಮ ಜವಾಬ್ದಾರಿಯಾಗಿದೆ. ಮನುಷ್ಯರೂ ಪ್ರಮುಖರೇ ಹಾಗೆಯೇ ಗೋವುಗಳೂ ಕೂಡ, ಪ್ರಕೃತಿಯಲ್ಲಿ ಇಬ್ಬರಿಗೂ ಅವರದ್ದೇ ಆದ ಪಾತ್ರಗಳಿವೆ” ಎಂದವರು ಹೇಳಿದರು.