ಜ್ಯೋತಿಷಿ ಸಹಿತ ಇಬ್ಬರಿಗೆ ಹಲ್ಲೆ ಪ್ರಕರಣ: ಹಿಂಜಾವೇ ಮುಖಂಡರ ಸೇರಿ 9 ಮಂದಿ ಸೆರೆ
ಪುತ್ತೂರು, ಜು. 31: ಜ್ಯೋಷಿತಿ ಮತ್ತು ಅವರ ಸ್ನೇಹಿತರೊಬ್ಬರು ಹೋಗುತ್ತಿದ್ದ ಕಾರನ್ನು ಅಡ್ಡಗಟ್ಟಿ ನಿಲ್ಲಿಸಿದ ತಂಡವೊಂದು ಅವರಿಬ್ಬರಿಗೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿ ಹಿಂಜಾವೇಯ ಇಬ್ಬರು ಮುಖಂಡರು ಸಹಿತ 9 ಮಂದಿಯನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.
ಕೊಂಬೆಟ್ಟು ನಿವಾಸಿ ಶಶಿಕಾಂತ್ (25), ನೆಟ್ಟಣಿಗೆಮುಡ್ನೂರು ಗ್ರಾಮದ ಈಶ್ವರಮಂಗಲ ನಿವಾಸಿ ಚಿನ್ಮಯ ರೈ(28), ಸಾಮೆತ್ತಡ್ಕ ಅನುಪ್ ಕಂಪೌಂಡ್ನ ಕೃಷ್ಣಪ್ರಸಾದ್ (40), ನರಿಮೊಗರು ಪುರುಷರಕಟ್ಟೆ ಇಂದಿರಾನಗರ ನಿವಾಸಿ ಅವಿನಾಶ್ ಜೋಗಿ (27), ಇಂದಿರಾನಗರದ ಅವಿನಾಶ್ ಯಾನೆ ಅಭಿ (21), ಶಾಂತಿಗೋಡು ಗ್ರಾಮದ ಪಂಜಿಗ ನಿವಾಸಿ ದಿನೇಶ್ (32), ಅರಿಯಡ್ಕ ಗ್ರಾಮದ ಪಾಪೆಮಜಲು ನಿವಾಸಿ ಸಚಿನ್ ರೈ(32), ನೆಟ್ಟಣಿಗೆಮುಡ್ನೂರು ಗ್ರಾಮದ ಈಶ್ವರಮಂಗಲದ ರಾಕೇಶ್ ಪಂಚೋಡಿ (27), ಆರ್ಯಾಪು ಗ್ರಾಮದ ನೇರ್ಲ ನಿವಾಸಿ ಕಾರ್ತಿಕ್ (25) ಬಂಧಿತ ಆರೋಪಿಗಳು.
ಜು. 29ರಂದು ರಾತ್ರಿ ಬಂಟ್ವಾಳ ತಾಲ್ಲೂಕಿನ ವಿಟ್ಲಮುಡ್ನೂರು ಗ್ರಾಮದ ನೇರಳಕಟ್ಟೆ ನಿವಾಸಿ, ವೃತ್ತಿಯಲ್ಲಿ ಜ್ಯೋತಿಷಿ ಆಗಿರುವ ಡಿ.ಕೆ.ಸ್ವಾಮೀಜಿ (43) ಮತ್ತು ಅವರ ಜತೆಗಿದ್ದ ಮಂಗಳೂರಿನ ಮರೋಳಿ ಮಾರಿಕಾಂಬ ದೇವಸ್ಥಾನದ ಬಳಿಯ ನಿವಾಸಿ ಅಭಿಷೇಕ್ (23) ತಮ್ಮ ಮಾರುತಿ ಎರಿಟಿಗಾ ಕಾರಿನಲ್ಲಿ ಪುತ್ತೂರು ಮುಖ್ಯರಸ್ತೆಯ ಪಕ್ಕದಲ್ಲಿರುವ ಉಳ್ಳಾಲ್ತಿ ಕಟ್ಟೆಯ ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಕಾರು ಮತ್ತು ನಾಲ್ಕು ಬೈಕ್ಗಳಲ್ಲಿ ಬಂದ 15 ಮಂದಿಯ ತಂಡ ಅವರ ಕಾರನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂಧಿಸಿ, ಮರದ ತುಂಡಿನಿಂದ ಹಲ್ಲೆ ನಡೆಸಿದ್ದರು.
ಈ ಕುರಿತು ಗಾಯಾಳು ನೀಡಿದ ದೂರಿನಂತೆ ಪುತ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.