ಉಬರಡ್ಕ-ಮಿತ್ತೂರು ಗ್ರಾಪಂ ಅಧ್ಯಕ್ಷ, ಪಿಡಿಒ ಸಹಿತ ಮೂವರ ವಿರುದ್ಧ ದೂರು
ಮಂಗಳೂರು, ಆ.1: ಸುಳ್ಯ ತಾಲೂಕಿನ ಉಬರಡ್ಕ-ಮಿತ್ತೂರು ಗ್ರಾಪಂನಲ್ಲಿ 2015-16ನೇ ಸಾಲಿನಲ್ಲಿ ಕಾಂಪೋಸ್ಟ್ ಪೈಪ್ ಖರೀದಿಯಲ್ಲಿ ಆದ ದುರು ಪಯೋಗದ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಪಂ ಅಧ್ಯಕ್ಷ ಹರೀಶ್, ಪಿಡಿಒ ಪ್ರವೀಣ್ ಕುಮಾರ್ ಮತ್ತು ದ.ಕ.ಜಿಪಂ ಸಂಪೂರ್ಣ ಸ್ವಚ್ಛತಾ ಆಂದೋಲನದ ನೋಡಲ್ ಅಧಿಕಾರಿಯಾಗಿದ್ದ ರೋಹಿತ್ ಎ.ಆರ್. ವಿರುದ್ಧ ಪ್ರಕರಣ ದಾಖಲಾಗಿದೆ.
ಈಗಾಗಲೇ ದ.ಕ.ಜಿಪಂ ವ್ಯಾಪ್ತಿಯ 7 ಗ್ರಾಪಂ ಅಧಿಕಾರಿಗಳ ಮೇಲೆ ನಿರ್ಮಲ ಗ್ರಾಮ ಪುರಸ್ಕಾರ ಯೋಜನೆಯ ಕಾಂಪೋಸ್ಟ್ ಪೈಪ್ ಖರೀದಿಯಲ್ಲಿ ನಡೆಸಿದ ಅವ್ಯವಹಾರಗಳ ಕುರಿತು ಪ್ರಕರಣಗಳು ದಾಖಲಾಗಿ ತನಿಖೆಯಲ್ಲಿರುತ್ತದೆ. ಭ್ರಷ್ಟಾಚಾರ ನಿಗ್ರಹ ದಳದ ಪಶ್ಚಿಮ ವಲಯದ ಆರಕ್ಷಕ ಅಧೀಕ್ಷಕಿ ಶ್ರುತಿ ಎನ್.ಎಸ್. ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಸುಧೀರ್ ಹೆಗಡೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಪೊಲೀಸ್ ಇನ್ಸ್ಪೆಕ್ಟರ್ ಯೊಗೀಶ್ ಕುಮಾರ್ ಈ ಪ್ರಕರಣಗಳ ಪೂರ್ವಭಾವಿ ವಿಚಾರಣೆ ನಡೆಸಿರುತ್ತಾರೆ ಎಂದು ಎಸಿಬಿ ಪ್ರಕಟನೆ ತಿಳಿಸಿದೆ.