ಮರಾಠಾ ಪ್ರತಿಭಟನೆ:ನವಿ ಮುಂಬೈ ಹಿಂಸಾಚಾರದ ಮೂವರು ಆರೋಪಿಗಳು ಗೋವಾದಲ್ಲಿ ಸೆರೆ
Update: 2018-08-02 14:30 GMT
ಪಣಜಿ,ಆ.2: ಮಹಾರಾಷ್ಟ್ರದ ನವಿ ಮುಂಬೈನಲ್ಲಿ ಜು.25ರಂದು ಮರಾಠಾ ಮೀಸಲಾತಿ ಪ್ರತಿಭಟನೆ ಸಂದರ್ಭ ಹಿಂಸಾಚಾರದಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಗುರುವಾರ ಗೋವಾದಲ್ಲಿ ಬಂಧಿಸಲಾಗಿದೆ.
ಹಿಂಸಾಚಾರದ ಸಂದರ್ಭದಲ್ಲಿ ರೋಹನ ತೋಡ್ಕರ್ ಎಂಬಾತನ ಮೇಲೆ ಗುಂಪೊಂದು ಹಲ್ಲೆ ನಡೆಸಿದ್ದು,ತೀವ್ರವಾಗಿ ಗಾಯಗೊಂಡಿದ್ದ ಆತ ಜ.27ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಈ ಬಗ್ಗೆ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದರು.
ಆರೋಪಿಗಳು ಗೋವಾದಲ್ಲಿ ಅಡಗಿರಬಹುದು ಎಂದು ನವಿ ಮುಂಬೈ ಪೊಲೀಸರು ರವಾನಿಸಿದ್ದ ಮಾಹಿತಿ ಮತ್ತು ಫೋಟೊಗಳ ಆಧಾರದಲ್ಲಿ ಗೋವಾ ಪೊಲೀಸರು ಕಲಂಗುಟ ಬೀಚ್ ಬಳಿಯ ಗ್ರಾಮದಿಂದ ಆರೋಪಿಗಳಾದ ಭೂಷಣ್ ಅಗಾಸ್ಕರ್,ಆಶಿಷ್ ಕಾಳೆ ಮತ್ತು ಚಂದ್ರಕಾಂತ ಪಾಟೀಲ ಅವರನ್ನು ಬಂಧಿಸಿದ್ದು,ಅವರನ್ನು ನವಿ ಮುಂಬೈ ಪೊಲೀಸರ ವಶಕ್ಕೊಪ್ಪಿಸಲಾಗಿದೆ.