×
Ad

ಪ್ರಾಮಾಣಿಕತೆಯಿಂದ ಕೆಲಸ ಮಾಡಿ ನಿಗದಿತ ಗುರಿ ಸಾಧಿಸಿ: ಯು.ಟಿ.ಖಾದರ್

Update: 2018-08-02 21:39 IST

ಮಂಗಳೂರು, ಆ.2: ರಾಜ್ಯದ ಆಡಳಿತಯಂತ್ರವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯುವ ಬಗ್ಗೆ ಮುಖ್ಯಮಂತ್ರಿಯ ಆಶಯದಂತೆ ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳು ನಿಗದಿತ ಗುರಿಯನ್ನು ಸಮಯ ಮಿತಿಯೊಳಗೆ ಸಾಧಿಸಬೇಕು ಎಂದು ನಗರಾಭಿವೃದ್ದಿ, ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಇಲಾಖಾಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಜಿಲ್ಲೆಯಲ್ಲಿ ಈ ವರ್ಷ ವಾಡಿಕೆ ಮಳೆಗಿಂತ ಶೇ.40ರಷ್ಟು ಹೆಚ್ಚು ಮಳೆಯಾಗಿದ್ದು, ಮಳೆಯಿಂದ 9 ಜೀವಹಾನಿ, 148 ಮನೆ ಹಾನಿಯಾಗಿದ್ದು, 11 ಜಾನುವಾರು ಗಳು ಮೃತಪಟ್ಟಿದ್ದು, 1.95 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಪ್ರಾಕೃತಿಕ ವಿಕೋಪ ಸಂತ್ರಸ್ತರಿಗೆ ಒಟ್ಟು 185.52 ಲಕ್ಷ ಪರಿಹಾರವನ್ನು ವಿತರಿಸ ಲಾಗಿದೆ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.

ಪ್ರಾಕೃತಿಕ ವಿಕೋಪದಿಂದ ಸಾರ್ವಜನಿಕ ರಸ್ತೆ, ಸೇತುವೆ, ಕಾಲುಸಂಕ ಕಿರುಸೇತುವೆ ಹಾಗೂ ಮೂಲ ಸೌಕರ್ಯ ಹಾನಿಗಳ ಬಗ್ಗೆ ಅಂದಾಜು ಪಟ್ಟಿ ತಯಾರಿಸಿದ್ದು 26 ಕೋಟಿ ರೂ. ಅನುದಾನವನ್ನು ಕೋರಲಾಗಿದೆ. ತುರ್ತು ಕಾಮಗಾರಿಗಳಿಗೆ ಜಿಲ್ಲಾಧಿಕಾರಿ 15 ಲಕ್ಷ ರೂ. ಮಂಜೂರು ಮಾಡಬಹು ದಾಗಿದೆ. ಎಲ್ಲವನ್ನು ಸರಕಾರಕ್ಕೆ ಬರೆದು ಅನುದಾನ ತರಿಸುವುದು ವಿಳಂಬವಾಗಬಹುದು. ಹಲವಾರು ಅಂಗನವಾಡಿ, ಶಾಲೆಗಳಲ್ಲಿ ಸಣ್ಣ ಪುಟ್ಟ ದುರಸ್ತಿಯಾಗಬೇಕಿದ್ದಲ್ಲಿ ಶಿಕ್ಷಣಾಧಿಕಾರಿಗಳು ಇರುವ ಅನುದಾನದಲ್ಲಿ ದುರಸ್ತಿ ಪಡಿಸಿ ಎಂದು ಸಚಿವರು ಸೂಚಿಸಿದರು.

ದ.ಕ. ಜಿಲ್ಲೆಯಲ್ಲಿ ಇರುವ 540 ಸರಕಾರಿ ಶಾಲೆಗಳಿಗೆ ಆವರಣ ಗೋಡೆ ಇಲ್ಲದಿದ್ದು, ಜಿಲ್ಲಾ ಪಂಚಾಯತ್ ವತಿಯಿಂದ ಗ್ರಾಮ ಪಂಚಾಯತ್‌ಗಳಿಗೆ ಅನುದಾನ ಬಿಡುಗಡೆ ಮಾಡಿ ಆವರಣ ಗೋಡೆ ಕಟ್ಟಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ದ.ಕ. ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ. ಎಂ.ಆರ್ ರವಿ ಸಚಿವರಿಗೆ ಮಾಹಿತಿ ನೀಡಿದರು.

ಕುಡಿಯುವ ನೀರಿನ ಸರಬರಾಜಿಗೆ ಸಂಬಂಧಿಸಿದಂತೆ ಗ್ರಾಮೀಣ ಅಭಿವೃದ್ಧಿ ಇಲಾಖೆಯಿಂದ ಶೇ.86 ಸಾಧನೆ ಮಾಡಲಾಗಿದೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಜುಲೈ 2018 ರವರೆಗೆ 8,750 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಸಂತ್ರಸ್ತ ರೈತ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಹಾಗೂ ಕುಟುಂಬ ಪಿಂಚಣಿ 2,000 ರೂ. ಮಂಜೂರು ಮಾಡಲಾಗಿದೆ ಎಂದರು.

ಸಾಮಾಜಿಕ ಭದ್ರತಾ ಯೋಜನೆಯಡಿಯಲ್ಲಿ ಒಟ್ಟು 5,473 ವೃದ್ದಾಪ್ಯ ವೇತನ, 43,600, ವಿಧವಾ ವೇತನ 18,151, ಅಂಗವಿಕಲ ವೇತನ , 5,547 ಮನಸ್ವಿನಿ, 27 ಮೈತ್ರಿ ಫಲಾನುಭವಿಗಳಿಗೆ ಪಿಂಚಣಿ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಸರಕಾರದ ಮಹತ್ವಕಾಂಕ್ಷಿ ಯೋಜನೆಯಾದ 94ಸಿ ಮತ್ತು 94ಸಿ.ಸಿ ಅಡಿ ಶೇ. 85 ರ ಸಾಧನೆಯನ್ನು ಜಿಲ್ಲೆ ದಾಖಲಿಸಿದೆ.

ನಗರೋತ್ಥಾನ ಯೋಜನೆ ಪ್ರಗತಿ ಪರಿಶೀಲನೆ ನಡೆಸಿದ ಉಸ್ತುವಾರಿ ಸಚಿವರು ಈ ಸಂಬಂಧ ಮುಖ್ಯ ಇಂಜಿನಿಯರ್ ಹಾಗೂ ಕನ್ಸಲ್ಟ್‌ಂಟ್ ಜೊತೆಗೆ ರವಿವಾರ ಪ್ರತ್ಯೇಖ ಸಭೆ ಕರೆಯಲು ನಿರ್ಧರಿಸಿದರು. ಜಿಲ್ಲೆಯಲ್ಲಿ ವಸತಿ ಯೋಜನೆಯ ಅನುಷ್ಠಾನದ ಪ್ರಗತಿಯನ್ನು ಪಡೆದ ಅವರು, ಜಿಲ್ಲೆಯಲ್ಲಿ ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಸರಕಾರಿ ಭೂಮಿಯನ್ನು ಗುರುತಿಸಿ ಆರ್.ಟಿ.ಸಿ ಯನ್ನು ಇಲಾಖೆಯ ಹೆಸರಿಗೆ ಮಾಡಿಸಿ ಸರಕಾರಿ ಜಮೀನು ಅಕ್ರಮ ಕಬಳಿಕೆಗೆ ಅವಕಾಶ ನೀಡಬೇಡಿ ಎಂದು ಸೂಚನೆ ನೀಡಿದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಶಿಕ್ಷಣ ಇಲಾಖೆ, ಮಲೆನಾಡು ಪ್ರದೇಶ ಅಭಿವೃದ್ಧಿ ಅನುದಾನ ಸಂಬಂಧಿಸಿದಂತೆ ಸಮಗ್ರ ವಿವರವನ್ನು ಸಚಿವರು ಸಂಬಂಧಪಟ್ಟ ಅಧಿಕಾರಿಗಳಿಂದ ಪಡೆದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್ ಉಪಸ್ಥಿತರಿದ್ದರು. ಜಿಲ್ಲಾ ಮಟ್ಟದ ವಿವಿಧ ಇಲಾಖಾಧಿಕಾರಿಗಳು ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News