‘ರಕ್ತ ಸಂಬಂಧ’ ಕನ್ನಡ ಕಿರುಚಿತ್ರ ಬಿಡುಗಡೆ ಸಮಾರಂಭ
ಮಂಗಳೂರು, ಆ.7: ದಿಲ್ಲಿ ಕನ್ನಡ ಹಿರಿಯ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪಾತ್ರ ವಹಿಸಿದ ಸಂಜನಾರವಿ ನಿರ್ದೇಶನದ ಸಾಮಾಜಿಕ ಜಾಗೃತಿ ಮೂಡಿಸುವ ‘ರಕ್ತ ಸಂಬಂಧ’ ಕನ್ನಡ ಕಿರುಚಿತ್ರದ ಬಿಡುಗಡೆ ಸಮಾರಂಭವು ಇತ್ತೀಚೆಗೆ ದಿಲ್ಲಿ ಕನ್ನಡ ಶಿಕ್ಷಣ ಸಂಸ್ಥೆಯಲ್ಲಿ ನಡೆಯಿತು.
ಕಿರುಚಿತ್ರದ ಬಿಡುಗಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ದಿಲ್ಲಿ ಕನ್ನಡ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಕೆ.ಆರ್. ರಾಮಮೂರ್ತಿ ಮಾತನಾಡಿ, ಮುಗ್ಧ ಮನಸ್ಸಿನ ಮಕ್ಕಳಲ್ಲಿ ಮುಟ್ಟಿನ ಬಗ್ಗೆ ತಿಳಿಹೇಳಿ ಅದೊಂದು ಪ್ರಕೃತಿ ಸಹಜ ದೈಹಿಕ ಬದಲಾವಣೆ. ಇದರ ಬಗ್ಗೆ ಜನರು ತಾವಾಗಿಯೇ ಸಮಾಜದಲ್ಲಿ ಸಂಪ್ರದಾಯ, ಕಟ್ಟುಪಾಡುಗಳನ್ನು ನಿರ್ಮಿಸಿಕೊಂಡಿದ್ದಾರೆ. ಹಿರಿಯರು ಮಕ್ಕಳ ಮನಸ್ಸನ್ನು ಇಂತಹ ಸಾಮಾಜಿಕ ಕಟ್ಟಪಾಡುಗಳಿಂದ ಮುಕ್ತ ಮಾಡಿ ಹೊಸ ಸಮಾಜ ಕಟ್ಟುವ ಬಗ್ಗೆ ಮನದಟ್ಟು ಮಾಡಿಕೊಡುವ ಉದ್ದೇಶವನ್ನು ಹೊಂದಿರುವ ಈ ಕಿರುಚಿತ್ರವನ್ನು ಕಹಾನಿವಾಲೇ ಸಂಸ್ಥೆ ನಿರ್ಮಿಸಿದೆ ಎಂದರು.
ವಿದ್ಯಾರ್ಥಿಗಳ ವ್ಯಕ್ತಿತ್ವದ ಪರಿಪೂರ್ಣ ಬೆಳವಣಿಗೆಗೆ ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳು ಅತ್ಯಗತ್ಯ. ಮೊದಲ ಬಾರಿಗೆ ಕಿರುಚಿತ್ರದಲ್ಲಿ ಪಾತ್ರ ವಹಿಸುವ ಅವಕಾಶ ಸಂಸ್ಥೆಯ ವಿದ್ಯಾರ್ಥಿಗಳಿಗೆ ಒದಗಿ ಬಂದಿರುವುದು ಸೌಭಾಗ್ಯ ಎಂದರು.
ಅವಕಾಶಗಳನ್ನು ಆಸಕ್ತ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡಲ್ಲಿ ಖಂಡಿತವಾಗಿ ಯಶಸ್ಸನ್ನು ಕಾಣಲು ಸಾಧ್ಯ. ಇಂತಹ ಸಾಮಾಜಿಕ ಜಾಗೃತಿ ಮೂಡಿಸುವಂತಹ ಕಿರುಚಿತ್ರಕ್ಕಾಗಿ ಸಂಸ್ಥೆಯನ್ನು ಆಯ್ಕೆ ಮಾಡಿ ವಿದಾರ್ಥಿಗಳಿಗೆ ಅವಕಾಶ ನೀಡಿದಂತಹ ಕಿರುಚಿತ್ರದ ತಂಡಕ್ಕೆ ಸಂಸ್ಥೆಯ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
ಕಿರುಚಿತ್ರದ ಸಂಕಲನಗಾರ ಜೀಯೋ ಸಿರಿಲ್, ಸಂಸ್ಥೆಯ ಪ್ರಭಾರ ಪ್ರಾಂಶುಪಾಲೆ ಎನ್.ವಿಜಯಕುಮಾರಿ ಮಾತನಾಡಿದರು. ಕಿರುಚಿತ್ರದಲ್ಲಿ ಪ್ರಧಾನ ಪಾತ್ರವಹಿಸಿದ ವಿದ್ಯಾರ್ಥಿಗಳಾದ ಶ್ರೇಷ್ಠಾ ಎಚ್.ತೇಲಿ, ಜಾಹ್ನವಿ, ಅಭಿಷೇಕ್ ಉಬಾಳೆ ಮತ್ತು ಶಿಕ್ಷಕರಾದ ಪ್ರೇಮಲತಾ, ಮಾಲಾಗೋಪಾಲ್, ಎಚ್.ಎಸ್. ತೇಲಿ ಕಿರುಚಿತ್ರದ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ಶಿವಾನಂದ ಇಂಗಳೇಶ್ವರ, ಕಲಾವಿದರಾದ ಮಾಲಿನಿ ಪ್ರಹ್ಲಾದ್, ಹರಿಪ್ರಿಯ ಉಪಸ್ಥಿತರಿದ್ದರು. ಶಿಕ್ಷಕ ಅರವಿಂದ ಬಿಜೈ ಕಾರ್ಯಕ್ರಮ ನಿರೂಪಿಸಿದರು.