ಕ್ಷಮೆಯಾಚಿಸಿ, ಇಲ್ಲವೇ ಕಾನೂನು ಕ್ರಮ ಎದುರಿಸಿ: ಅಮಿತ್ ಶಾಗೆ ಟಿಎಂಸಿ ಎಚ್ಚರಿಕೆ
ಕೊಲ್ಕತ್ತಾ, ಆ.11: ಪಶ್ಚಿಮ ಬಂಗಾಳದಲ್ಲಿ ನಡೆದ ರ್ಯಾಲಿಯ ವೇಳೆ ಸುಳ್ಳು ಆರೋಪಗಳನ್ನು ಮಾಡಿದ್ದಕ್ಕಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕ್ಷಮೆಯಾಚಿಸಬೇಕು ಇಲ್ಲದಿದ್ದರೆ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತೃಣಮೂಲ ಕಾಂಗ್ರೆಸ್ ನಾಯಕ ಡೆರೆಕ್ ಒ’ಬ್ರಿಯಾನ್ ಎಚ್ಚರಿಕೆ ನೀಡಿದ್ದಾರೆ.
“ಅಮಿತ್ ಶಾರ ಸಭೆ ಒಂದು ಫ್ಲಾಪ್ ಶೋ. ಇಂದು ಅವರು ಬಂಗಾಳವನ್ನು ಅವಮಾನಿಸಿದ್ದಾರೆ. ಅವರಿಗೆ ಬಂಗಾಳದ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಅವರ ಹಸಿಹಸಿ ಸುಳ್ಳುಗಳಿಂದ ಬಂಗಾಳವನ್ನು ಅವಮಾನಿಸಿದ್ದಾರೆ. ಮುಂದಿನ 72 ಗಂಟೆಗಳೊಳಗೆ ಅಮಿತ್ ಶಾ ಕ್ಷಮೆಯಾಚಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಬಂಗಾಳದಲ್ಲಿ ಅಮಿತ್ ಶಾ ಕೋಮುದ್ವೇಷ ಹರಡಲು ಯತ್ನಿಸಿದ್ದಾರೆ. ಆದರೆ ಈ ತಂತ್ರಗಳು ಇಲ್ಲಿ ನಡೆಯುವುದಿಲ್ಲ. ನಮ್ಮ ವಿರುದ್ಧ ಹಸಿ ಸುಳ್ಳುಗಳನ್ನು ಹರಡುವುದಕ್ಕೆ ಮುನ್ನ ಅಮಿತ್ ಶಾ ಅವರ ‘ಟ್ರ್ಯಾಕ್ ರೆಕಾರ್ಡ್’ ನೋಡಿಕೊಳ್ಳಲಿ ಎಂದವರು ಹೇಳಿದರು.