ಟೋಲ್ ಸಂಗ್ರಹ ಸಲ್ಲದು: ಶೋಭಾ ಕರಂದ್ಲಾಜೆ
ಉಡುಪಿ, ಆ.16: ರಾಷ್ಟ್ರೀಯ ಹೆದ್ದಾರಿ-66ರ ಕಾಮಗಾರಿ ಸಂಪೂರ್ಣವಾಗಿ ಮುಗಿಯುವವರೆಗೆ ಸ್ಥಳೀಯ ವಾಹನಗಳಿಂದ ಯಾವುದೇ ಸುಂಕವನ್ನು ಪಡೆಯಬಾರದು ಎಂದು ಉಡುಪಿ - ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ನವುುಗ ಸಂಸ್ಥೆಗೆ ಎಚ್ಚರಿಕೆ ನೀಡಿದ್ದಾರೆ.
ನವಯುಗ ಸಂಸ್ಥೆಯ ಅತ್ಯಂತ ವಿಳಂಬಗತಿಯ ಕಾಮಗಾರಿಯಿಂದ ಈವರೆಗೆ ಬಹಳಷ್ಟು ಹಾನಿಯುಂಟಾಗಿದ್ದು, ಸಂಸದೆಯಾಗಿ ತಾನು ಈ ವಿಚಾರವನ್ನು ಸಾಕಷ್ಟು ಬಾರಿ ಹೆದ್ದಾರಿ ಅಗಲೀಕರಣಕ್ಕೆ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ತಿಳಿಸಿದ್ದೇನೆ. ಕೇಂದ್ರ ಸಾರಿಗೆ ಸಚಿವರ ಗಮನಕ್ಕೂ ತಂದಿದ್ದೇನೆ. ಆ ಬಳಿಕ ನವಯುಗ ಸಂಸ್ಥೆಯ ಕೈಯಲ್ಲಿದ್ದ ಕೆಲವು ಕಾಮಗಾರಿಗಳನ್ನು ಕೇಂದ್ರ ಭೂ ಸಾರಿಗೆ ಇಲಾಖೆ ಹಿಂಪಡೆದು ರಾ.ಹೆ.66ರ ಕಾಮಗಾರಿಯನ್ನು ನಿರ್ದಿಷ್ಟ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಸಂಸ್ಥೆಗೆ ಸೂಚಿಸಿತ್ತು ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಉಡುಪಿ ಜಿಲ್ಲಾಧಿಕಾರಿಗೂ ರಾ.ಹೆ. ಕಾಮಗಾರಿ ಪೂರ್ಣಗೊಳ್ಳದೇ ನವಯುಗ ಸಂಸ್ಥೆ ಸ್ಥಳೀಯ ವಾಹನಗಳಿಂದ ಸುಂಕ ವಸೂಲಿ ಮಾಡಲು ಬಿಡದಂತೆ ತಾನುತಿಳಿಸಿದ್ದೇನೆ ಎಂದವರು ಹೇಳಿದ್ದಾರೆ.