ಜೋಡುಪಾಲ ಗುಡ್ಡಕುಸಿತ: ಅಲ್ಲಲ್ಲಿ ಭೂಮಿ ಬಿರುಕು

Update: 2018-08-18 15:46 GMT

ಸುಳ್ಯ, ಆ. 18: ಜೋಡುಪಾಲದಲ್ಲಿ ಗುಡ್ಡಗಳು ಜರಿದು ಉಂಟಾಗಿರುವ ಭಾರೀ ಪ್ರಕೃತಿ ದುರಂತದಿಂದ ಸಂತ್ರಸ್ತರಾಗಿ ಸಿಲುಕಿಕೊಂಡಿರುವ ಜನರ ರಕ್ಷಣಾ ಕಾರ್ಯ ಬಿರುಸಿನಿಂದ ಮುಂದುವರಿದಿದೆ. ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ ಸಂಪಾಜೆ ಸಮೀಪದ ಅರೆಕಲ್ಲು ಜೋಡುಪಾಲ ಮತ್ತು ಮದೆನಾಡು ಪ್ರದೇಶಗಳಲ್ಲಿ ಎತ್ತರದ ಗುಡ್ಡಗಳು ಬಿರುಕು ಬಿಡುತ್ತಿದ್ದು ಜನತೆ ಆತಂಕದಲ್ಲಿದ್ದಾರೆ.

ಶುಕ್ರವಾರ ರಾತ್ರಿ ಭಾರೀ ಮಳೆ ಮತ್ತು ಕತ್ತಲಿನ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಕಾರ್ಯಾಚರಣೆ ಶನಿವಾರ ಬೆಳಗ್ಗಿನಿಂದಲೇ ಮತ್ತೆ ಮುಂದುವರಿಯಿತು. ರಾಷ್ಟ್ರೀಯ ವಿಪತ್ತು ದಳ, ಅಗ್ನಿಶಾಮಕ ದಳ, ಸುಳ್ಯ ಪೊಲೀಸರು ಮತ್ತು ಊರವರು ಮತ್ತು ಸುಳ್ಯ ತಾಲೂಕಿನ ವಿವಿಧ ಕಡೆಗಳಿಂದ ಆಗಮಿಸಿದ್ದ ಜನ ಸೇರಿ ಅಪಾಯದಲ್ಲಿ ಸಿಲುಕಿದ ಮಂದಿಯನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿತು. ರಭಸವಾಗಿ ಹರಿಯುವ ನೀರು ಮತ್ತು ಕಿಲೋಮೀಟರ್ ಗಟ್ಟಲೆ ತುಂಬಿರುವ ಕೆಸರಿನ ಮಧ್ಯೆ ರಕ್ಷಣಾ ಕಾರ್ಯ ಹರಸಾಹಸವಾಗಿದ್ದು, ರೋಪ್ ಮೂಲಕ ಜನರನ್ನು ರಕ್ಷಿಸಲಾಗುತ್ತಿದೆ. ಪರಿಸರದ ಕೂಟೇಲು, ಅರೆಕಲ್ಲು ಮೊದಲಾದ ಪ್ರದೇಶಗಳಿಂದಲೂ ಜನರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ.

ರಕ್ಷಣೆಗೆ ಧಾವಿಸಿದ ಸಂಘ ಸಂಸ್ಥೆಗಳು : ಜೋಡುಪಾಲದಲ್ಲಿ ನಡೆದ ಪ್ರಕೃತಿ ದುರಂತಕ್ಕೆ ಹಲವು ಸಂಘಸಂಸ್ಥೆಗಳು ಸಹಾಯಹಸ್ತ ಚಾಚಿದೆ. ರಾಷ್ಟ್ರೀಯ ವಿಪತ್ತು ದಳ, ಅಗ್ನಿಶಾಮಕ ದಳ, ಸುಳ್ಯ ಪೊಲೀಸರೊಂದಿಗೆ ಸುಳ್ಯದ ಸಂಘಸಂಸ್ಥೆಗಳು, ಆರ್‌ಎಸ್‌ಎಸ್ ಸಂಘಟನೆ, ಯುವ ತೇಜಸ್ಸ್, ಎಸ್‌ಕೆಎಸ್‌ಎಸ್‌ಎಫ್ ಸಂಘಟನೆ, ಯುವಕರು ರಕ್ಷಣಾ ಕಾರ್ಯದಲ್ಲಿ ದುಡಿಯುತ್ತಿದ್ದಾರೆ.

ಮತ್ತೊಂದು ಮೃತದೇಹ ಪತ್ತೆ: ಪ್ರಕೃತಿ ದುರಂತದ ಸ್ಥಳದಲ್ಲಿ ಮತ್ತೊಂದು ಮೃತದೇಹ ಪತ್ತೆಯಾಗಿದೆ. ಈ ಪರಿಸರದಲ್ಲಿ ಗುಡ್ಡ ಜರಿದು ಮೂರು ಮನೆಗಳು ಸಂಪೂರ್ಣ ನಾಶಗೊಂಡು ಮನೆ ಮಂದಿ ಮಣ್ಣಿನೊಳಗೆ ಸಮಾಧಿಯಾಗಿದ್ದರು. ಈ ಪೈಕಿ ಬಸಪ್ಪ ಎಂಬವರ ಮೃತದೇಹವು ಶುಕ್ರವಾರ ಪತ್ತೆಯಾಗಿತ್ತು. ಅವರ ಪತ್ನಿ, ಮಗಳು ಮತ್ತು ಮನೆಗೆ ಬಂದಿದ್ದ ಬಂಧುವೊಬ್ಬರು ನಾಪತ್ತೆಯಾಗಿದ್ದರು. ಈ ಪೈಕಿ ಒಂದು ಮೃತದೇಹ ಇಂದು ಪತ್ತೆಯಾಗಿದ್ದು, ಅದನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ತರಲಾಗಿದೆ.

ಜಲ ಪ್ರಳಯಕ್ಕೆ ಹಲವಾರು ಮಂದಿ ಕೊಚ್ಚಿ ಹೋಗಿರುವ ಶಂಕೆ : ಜೋಡುಪಾಲದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಮತ್ತು ಜಲ ಪ್ರಳಯಕ್ಕೆ ಹಲವಾರು ಮಂದಿ ಕೊಚ್ಚಿ ಹೋಗಿರುವ ಶಂಕೆ ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ. 5 ಜನ ಮಾತ್ರ ಸಾವಿಗೀಡಾದ ಬಗ್ಗೆ ದಾಖಲಾಗಿದೆ. ಆದರೆ ಶುಕ್ರವಾರ ಮಡಿಕೇರಿ ಸಂತೆಗೆ ವ್ಯಾಪಾರಕ್ಕಾಗಿ ಹೋಗಲು ಬಸ್ಸಿಗಾಗಿ ಕಾಯುತ್ತಿದ್ದ ಸುಮಾರು 20 ರಿಂದ 25 ಮಂದಿ ಕೊಚ್ಚಿ ಹೋಗಿರುವ ಶಂಕೆಯನ್ನು ಸ್ಥಳೀಯರು ವ್ಯಕ್ತ ಪಡಿಸುತ್ತಿದ್ದಾರೆ.

ಈಗಾಗಲೇ ಇಬ್ಬರ ಮೃತದೇಹ ಮಾತ್ರ ಸಿಕ್ಕಿದ್ದು ಉಳಿದ ನಾಪತ್ತೆಯಾದವರ ಹುಡುಕಾಟ ನಡೆಸುತ್ತಿದ್ದಾರೆ. ಭಾರೀ ಗುಡ್ಡ ಕುಸಿತದಿಂದ ಸಂತ್ರಸ್ತರಾಗಿರುವ ನೂರಾರು ಮಂದಿಯನ್ನು ವಿವಿಧ ನಿರಾಶ್ರಿತ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಅರಂತೋಡು ತೆಕ್ಕಿಲ್ ಹಾಲ್‌ನಲ್ಲಿ ಸುಮಾರು 120 ಮಂದಿ , ಕಲ್ಲುಗುಂಡಿ ಶಾಲೆಯಲ್ಲಿ ಸುಮಾರು 64 ಮತ್ತು ಕೊಡಗು ಸಂಪಾಜೆ ಶಾಲೆಯಲ್ಲಿ ಸುಮಾರು 170 ಮಂದಿ ಇದ್ದಾರೆ. ನಿರಾಶ್ರಿತರಿಗೆ ಊರವರು ಆಹಾರ ಪೂರೈಸುತ್ತಿದ್ದಾರೆ. ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡುತ್ತಿದೆ. ಸುಳ್ಯದಿಂದ ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು ತೆರಳಿ ನಿರಾಶ್ರಿತರಿಗೆ ಆಹಾರ, ದಿನಸು ಸಾಮಾಗ್ರಿ, ಬಟ್ಟೆಬರೆಗಳನ್ನು ನೀಡುತ್ತಿದ್ದಾರೆ. ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸುಳ್ಯದ ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳ ತಂಡ ಶಿಬಿರಗಳಿಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಸ್ಥಳೀಯ ಮುಖಂಡರು ಆಯಾ ನಿರಾಶ್ರಿತ ಕೇಂದ್ರಗಳ ಜವಾಬ್ದಾರಿ ವಹಿಸಿದ್ದಾರೆ.

ಖಾದರ್, ಕಟೀಲ್ ಭೇಟಿ: ನಿರಾಶ್ರಿತ ಶಿಬಿರಗಳಿಗೆ ಉಸ್ತುವಾರಿ ಸಚಿವ ಯು.ಟಿ.ಖಾದರ್, ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾಧಿಕಾರಿ ಡಾ. ಸಸಿಕಾಂತ್ ಸೆಂಥಿಲ್, ತಹಶೀಲ್ದಾರ್ ಕುಂಞಿಮ್ಮ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News