ಬೆಳ್ತಂಗಡಿ: ಬೈಕ್‌ಗೆ ಕಾರು ಡಿಕ್ಕಿ; ಯುವಕ ಮೃತ್ಯು

Update: 2018-08-19 17:11 GMT

ಬೆಳ್ತಂಗಡಿ, ಆ. 19: ಬೈಕ್‌ಗೆ ಕಾರು ಢಿಕ್ಕಿಯೊಡೆದು ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಅಂಡಿಂಜೆಯಲ್ಲಿ ರವಿವಾರ ಸಂಭವಿಸಿದೆ.

ಬಂಟ್ವಾಳ ತಾಲೂಕಿನ ನೈನಾಡು ಬರಿಮಾರು ನಿವಾಸಿ ದಿ. ಸಂಜೀವ ಶೆಟ್ಟಿಯವರ ಪುತ್ರ, ಮಂಗಳೂರಿನಲ್ಲಿ ಎಲೆಕ್ಟ್ರಿಶಿಯನ್ ವೃತ್ತಿ ಮಾಡುತ್ತಿದ್ದ ಅಶ್ವಿತ್ ಶೆಟ್ಟಿ (24) ಮೃತಪಟ್ಟ ಯುವಕ.

ಮನೆ ಸಮೀಪದಲ್ಲಿ ಸಂಬಂಧಿಯೊಬ್ಬರ ಮದುವೆ ಕಾರ್ಯಕ್ರಮ ನಡೆದಿತ್ತು. ಇಲ್ಲಿಗೆ ಬಂದಿದ್ದ ಸಂಬಂಧಿಕರೊಬ್ಬರನ್ನು ಅಶ್ವಿತ್ ಶೆಟ್ಟಿ ಅಂಡಿಂಜೆಗೆ ಬಿಟ್ಟು ಬರಲು ಬೈಕ್‌ನಲ್ಲಿ ತೆರಳಿದ್ದರು. ಅಲ್ಲಿಂದ ವಾಪಸಾಗುತ್ತಿದ್ದ ವೇಳೆ ತಿರುವಿನಲ್ಲಿ ಎದುರಿನಿಂದ ಬರುತ್ತಿದ್ದ ಕಾರು ಬೈಕ್‌ಗೆ ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಅಶ್ವಿತ್‌ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ.

ಕಾರು ಚಾಲಕನ ವಿರುದ್ಧ ನಿರ್ಲಕ್ಷ್ಯದ ಚಾಲನೆ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಆರ್ಥಿಕವಾಗಿ ಸಮಸ್ಯೆಯಿರುವ ಮೃತ ಅಶ್ವಿತ್ ತಂದೆ ಹಲವು ವರ್ಷಗಳ ಹಿಂದೆ ಮೃತರಾಗಿದ್ದು, ಈತನೇ ಮನೆಯ ಆಧಾರ ಸ್ತಂಭವಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News