ರೈತರ ಸಾಲ ಮನ್ನಾ: 15ದಿನದಲ್ಲಿ ಖಾತೆಗಳಿಗೆ ಜಮೆ; ಕೃಷಿ ಸಚಿವ ಶಿವಶಂಕರ ರೆಡ್ಡಿ

Update: 2018-08-20 15:17 GMT

ಕುಂದಾಪುರ, ಆ.20: ರಾಜ್ಯದ ರೈತರ ಸಾಲಮನ್ನಾ ಕುರಿತಂತೆ ಈಗಾಗಲೇ ಎಲ್ಲಾ ಸಹಕಾರ ಸಂಘಗಳಿಗೆ ಸುತ್ತೋಲೆ ಕಳುಹಿಸಲಾಗಿದ್ದು, ಈ ಕುರಿತಂತೆ 15 ದಿನಗಳೊಳಗೆ ರೈತರ ಖಾತೆಗಳಿಗೆ ಹಣವನ್ನು ಜಮೆ ಮಾಡಲಾಗುವುದು ಎಂದು ರಾಜ್ಯದ ಕೃಷಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ತಿಳಿಸಿದ್ದಾರೆ.

ಸೋಮವಾರ ಕುಂದಾಪುರ ತಾಲೂಕು ಹೆಮ್ಮಾಡಿಯ ಸಂತೋಷನಗರದಲ್ಲಿ ಭತ್ತದ ಯಾಂತ್ರೀಕೃತ ನಾಟಿ ಪ್ರಾತ್ಯಕ್ಷಿಕೆ ವೀಕ್ಷಿಸಿ ಅವರು ಮಾತನಾಡುತಿದ್ದರು.

ಪ್ರಥಮ ಹಂತದಲ್ಲಿ ರಾಜ್ಯದ ರೈತರು ಸಹಕಾರ ಸಂಘಗಳಲ್ಲಿ ಪಡೆದ 9,500 ಕೋಟಿ ರೂ ಸಾಲಮನ್ನಾ ಮಾಡಲಾಗುವುದು. ಮುಂದಿನ ಹಂತದಲ್ಲಿ ಖಾಸಗಿ ಬ್ಯಾಂಕ್‌ಗಳಿಂದ ಪಡೆದ ಸಾಲ ಮನ್ನಾ ಮಾಡಲಾಗುವುದು ಎಂದು ಸಚಿವರು ನುಡಿದರು.

ಪ್ರಥಮ ಹಂತದಲ್ಲಿ ರಾಜ್ಯದ ರೈತರು ಸಹಕಾರ ಸಂಘಗಳಲ್ಲಿ ಪಡೆದ 9,500 ಕೋಟಿ ರೂ ಸಾಲಮನ್ನಾ ಮಾಡಲಾಗುವುದು. ಮುಂದಿನ ಹಂತದಲ್ಲಿ ಖಾಸಗಿ ಬ್ಯಾಂಕ್‌ಗಳಿಂದ ಪಡೆದ ಸಾಲ ಮನ್ನಾ ಮಾಡಲಾಗುವುದು ಎಂದು ಸಚಿವರು ನುಡಿದರು. ರಾಜ್ಯದಲ್ಲಿ ಸಾವಯವ ಕೃಷಿಗೆ ವಿಶೇಷ ಒತ್ತು ನೀಡಲಾಗುತ್ತಿದೆ. ರೈತರು ಬೆಳೆದ ಸಾವಯವ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ದೊರೆಯುತ್ತಿಲ್ಲ.ಈ ನಿಟ್ಟಿನಲ್ಲಿ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ಕೃಷಿ ಇಲಾಖೆಯಲ್ಲಿ ಹಲವು ಹುದ್ದೆಗಳು ಖಾಲಿ ಇದ್ದು, ಇದರಿಂದ ಕೃಷಿಕರಿಗೆ ಸೂಕ್ತ ಮಾಹಿತಿ ನೀಡಲು ಸಮಸ್ಯೆಯಾಗುತ್ತಿದೆ. ಇದಕ್ಕಾಗಿ ಕೃಷಿ ಸಂಪರ್ಕ ಕೇಂದ್ರಗಳಿಗೆ ಕೃಷಿ ವಿವಿಯ 600 ವಿದ್ಯಾರ್ಥಿಗಳನ್ನು ನೇಮಕ ಮಾಡಲು ಕ್ರಮ ಕೈಗೊಂಡಿದ್ದು, ಶೀಘ್ರದಲ್ಲಿ ನೇಮಕಾತಿ ಆದೇಶ ನೀಡಲಾಗುವುದು ಎಂದು ಸಚಿವರು ಹೇಳಿದರು.

ಕೃಷಿಯಲ್ಲಿ ಕೂಲಿಯಾಳುಗಳ ಸಮಸ್ಯೆ ಇದ್ದು, ಇದನ್ನು ನಿವಾರಿಸುವ ಉದ್ದೇಶ ದಿಂದ ಕೃಷಿಗೆ ಆದ್ಯತೆಯ ಮೇಲೆ ರೈತ ಸೇವಾ ಕೇಂದ್ರಗಳ ಮೂಲಕ ಕೃಷಿ ಯಂತ್ರೋಪಕರಣ ಒದಗಿಸಲಾಗುತ್ತಿದೆ. ಈ ಕೇಂದ್ರಗಳಲ್ಲಿ ಹೆಚ್ಚಿನ ಯಂತ್ರೋಪಕರಣ ಒದಗಿಸಲು ಹಾಗೂ ಸ್ಥಳೀಯ ರೈತರ ಅಗತ್ಯಕ್ಕೆ ಬೇಕಾದ ಯಂತ್ರೋಪಕರಣಗಳನ್ನು ಒದಗಿಸಲಾಗುವುದು. ಈ ಯಂತ್ರಗಳನ್ನು ದುರಸ್ತಿ ಗೊಳಿಸುವ ಕುರಿತಂತೆ ಕೃಷಿ ಯಂತ್ರೋಪಕರಣ ಸರಬರಾಜು ಮಾಡುವ ಕಂಪೆನಿಗಳು ಪ್ರತಿ ತಾಲೂಕಿಗೆ ಕಡ್ಡಾಯವಾಗಿ ಒಂದು ರಿಪೇರಿ ಕೇಂದ್ರ ತೆರೆದು ಸೂಕ್ತ ತಂತ್ರಜ್ಞರನ್ನು ನೇಮಿಸುವಂತೆ ಟೆಂಡರ್‌ನಲ್ಲಿ ಸೂಚನೆ ನೀಡಲಾಗುವುದು ಎಂದು ಸಚಿವ ರೆಡ್ಡಿ ನುಡಿದರು.

ರೈತರಿಗೆ ಗುರುತಿನ ಚೀಟಿ ನೀಡುವ ಕುರಿತಂತೆ ಈಗಾಗಲೇ ಕ್ರಮವಹಿಸಿದ್ದು, 6 ತಿಂಗಳ ಒಳಗೆ ಎಲ್ಲಾ ರೈತರಿಗೆ ಗುರುತಿನ ಚೀಟಿ ನೀಡಲಾಗುವುದು. ಈ ಚೀಟಿಯಿಂದ ರೈತರು ವಿವಿಧ ಸೌಲ್ಯಗಳನ್ನು ಪಡೆಯಲು ಅನುಕೂಲ ವಾಗಲಿದೆ ಎಂದು ಸಚಿವರು ಹೇಳಿದರು.

ಬೆಳೆಗಳಿಗೆ ಕೇಂದ್ರ ಸರಕಾರ ಈಗಾಗಲೇ ಕನಿಷ್ಠ ಬೆಂಬಲ ಬೆಲೆ ಘೋಷಿಸಿದ್ದು, ಮಾರುಕಟ್ಟೆಯಲ್ಲಿ ಈ ಬೆಳೆಗಳ ಬೆಲೆ ಇಳಿಕೆಯಾದರೂ ಸಹ ರಾಜ್ಯ ಸರಕಾರ ಕನಿಷ್ಠ ಬೆಂಬಲ ಬೆಲೆಯಲ್ಲಿ ಬೆಳೆ ಖರೀದಿ ಮಾಡಿ, ಹೆಚ್ಚುವರಿ ಮೊತ್ತವನ್ನು ಕೇಂದ್ರದಿಂದ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚುವರಿ ಮೊತ್ತವನ್ನು ಕೇಂದ್ರ ರಾಜ್ಯಗಳಿಗೆ ಬಿಡುಗಡೆ ಮಾಡಲಿದೆ ಎಂದು ಕೃಷಿ ಸಚಿವರು ತಿಳಿಸಿದರು.

ಉಡುಪಿ ಜಿಲ್ಲೆಯಲ್ಲಿ ರೈತರ ಬೆಳೆಗಳಿಗೆ ಕಾಡು ಪ್ರಾಣಿಗಳ ಹಾವಳಿ ಇದ್ದು, ಕೋವಿ ಲೈಸೆನ್ಸ್ ಪಡೆಯಲು ಇರುವ ಸಮಸ್ಯೆ ಕುರಿತು ರೈತರ ದೂರುಗಳನ್ನು ಆಲಿಸಿದ ಸಚಿವರು, ಈ ಕುರಿತಂತೆ ನಿಯಮ ಸಡಿಲಿಕೆಗೆ ಜಿಲ್ಲಾಧಿಕಾರಿ ಗಳೊಂದಿಗೆ ಚರ್ಚಿಸಲಾಗುವುದು ಎಂದರು. ರೈತರ ಬೆಳೆಗಳಿಗೆ ಉಪ್ಪುನೀರು ನುಗ್ಗಿ ಬೆಳೆ ಹಾನಿಯಾಗುವ ಕುರಿತಂತೆ ರೈತರ ಜಮೀನಿನ ಬಳಿ ದಂಡೆ ನಿರ್ಮಿಸುವ ಕುರಿತಂತೆ ರಾಜ್ಯದ ಸಣ್ಣ ನೀರಾವರಿ ಸಚಿವರ ಜೊತೆ ಚರ್ಚಿಸುವುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಗೋಪಾಲ ಪೂಜಾರಿ, ಕುಂದಾಪುರ ಎಪಿಎಂಸಿ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಜಿಪಂ ಸದಸ್ಯೆ ಶೋಭಾ ಜಿ ಪುತ್ರನ್, ಹೆಮ್ಮಾಡಿ ಗ್ರಾಪಂ ಅಧ್ಯಕ್ಷೆ ಜ್ಯೋತಿ, ಜಲಾನಯನ ಇಲಾಖೆಯ ನಿರ್ದೇಶಕ ಪದ್ಮಯ್ಯ ನಾಯ್ಕ, ಮಂಗಳೂರು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಂಥೋಣಿ ಮರಿಯಾ ಇಮ್ಯಾನ್ಯುಯಲ್, ಉಡುಪಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ, ಕುಂದಾಪುರ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ವಿಠಲ ರಾವ್, ಕಾರ್ಕಳ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಜಯರಾಜ್ ಪ್ರಕಾಶ್ ಅಲ್ಲದೇ ವಿವಿಧ ರೈತ ಸಂಘಟನೆಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News