ಕೊಣಾಜೆ: ಮನೆಗೆ ನುಗ್ಗಿ ದರೋಡೆ

Update: 2018-08-20 16:43 GMT

ಕೊಣಾಜೆ, ಆ. 20: ಮನೆಯೊಂದಕ್ಕೆ ವಿವಾಹ ಕಾರ್ಯಕ್ರಮಕ್ಕೆ ಆಹ್ವಾನ ನೀಡುವ ನೆಪದಲ್ಲಿ ಬಂದ ಬುರ್ಖಾಧಾರಿಗಳ ತಂಡ ಮನೆಯೊಳಗೆ ಅಕ್ರಮ ಪ್ರವೇಶ ಗೈದು ಮಹಿಳೆಯನ್ನು ಬೆದರಿಸಿ ಚಿನ್ನಾಭರಣ ದರೋಡೆಗೈದು ಪರಾರಿಯಾದ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ಮಂಗಳನಗರದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

ಮಂಗಳನಗರ ನಿವಾಸಿ ಲತೀಫ್ ಎಂಬವರ ಮನೆಗೆ ಬಂದ ಇಬ್ಬರು ಅಪರಿಚಿತರು ಈ ಕೃತ್ಯ ಎಸಗಿದ್ದಾರೆ. 

ಘಟನೆಯ ವಿವರ: ಸೋಮವಾರ ಬೆಳಗ್ಗೆ ಲತೀಫ್‌ರವರು ತನ್ನ ಮಕ್ಕಳನ್ನು ಶಾಲೆಗೆ ಕರಕೊಂಡು ಹೋಗಿದ್ದರು. ಇದೇ ಸಂದರ್ಭವನ್ನು ಸದುಪಯೋಗ  ಪಡಿಸಿದ ಇಬ್ಬರು ಮದುವೆಗೆ ಆಹ್ವಾನ ನೀಡುವ ನೆಪದಲ್ಲಿ ಲತೀಫ್‌ರವರ ಮನೆಗೆ ಬಂದಿದ್ದಾರೆ. ಇವರಲ್ಲಿ ಒಬ್ಬ ಬುರ್ಖಾ ಧರಿಸಿದ್ದ ಎನ್ನಲಾಗಿದೆ. ಇವರನ್ನು ನೋಡಿದ ಮನೆಯೊಡತಿ ಕುಟುಂಬಿಕರು ಬಂದಿರಬೇಕೆಂದು ಭಾವಿಸಿ ಬಾಗಿಲು ತೆರೆದಿದ್ದರು. ಆ ವೇಳೆಗೆ ಇಬ್ಬರು ದರೋಡೆಕೋರರು ಮಹಿಳೆಯನ್ನು ಬೆದರಿಸಿ ಕೊಠಡಿಯೊಳಗೆ ನುಗ್ಗಿ 20 ಪವನ್ ಚಿನ್ನಾಭರಣವನ್ನು ದರೋಡೆ ಮಾಡಿ ಪರಾರಿಯಾಗಿದ್ದಾರೆ.

ಚಿನ್ನಾಭರಣ ದೋಚಿದವರು ಮಾಹಿತಿ ಇದ್ದವರೇ ಸಂಚು ರೂಪಿಸಿ ಈ ಕೃತ್ಯ ಎಸಗಿರಬೇಕೆಂದು ಶಂಕಿಸಲಾಗಿದೆ. ತಕ್ಷಣ ಮಾಹಿತಿ ಪಡೆದ ಲತೀಫ್ ಮಕ್ಕಳನ್ನು ಶಾಲೆಗೆ ಬಿಟ್ಟು ಮನೆಗೆ ಬಂದಿದ್ದರು. ಬಳಿಕ ಕೊಣಾಜೆ ಠಾಣೆಗೆ ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News