ದ.ಕ. ಜಿಲ್ಲೆಯಲ್ಲಿ ಕೋಮು ಸಾಮರಸ್ಯದ ವಾತಾವರಣ ಅಗತ್ಯ: ಬಿ.ಎಂ.ಫಾರೂಕ್

Update: 2018-08-23 12:36 GMT

ಮಂಗಳೂರು, ಆ. 23: ರಾಜ್ಯದ ವಾಣಿಜ್ಯ ಕೇಂದ್ರವಾಗಿ ಮಂಗಳೂರು ಅಭಿವೃದ್ಧಿಯಾಗಬೇಕಾದರೆ ಜಿಲ್ಲೆಯಲ್ಲಿ ಕೋಮು ಸಾಮರಸ್ಯದ ವಾತವರಣ ನಿರ್ಮಾಣವಾಗಬೇಕಾದ ಅಗತ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯನ್ನು ರಾಜ್ಯದ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಮಂಗಳೂರನ್ನು ಅಭಿವೃದ್ಧಿ ಪಡಿಸಲು ಐ.ಟಿ,ಬಿ.ಟಿ ಹಾಗೂ ಇತರ ಉದ್ಯಮಿಗಳನ್ನು ಸಂಪರ್ಕಿಸಿದಾಗ ಆಸಕ್ತಿವ್ಯಕ್ತಪಡಿಸಿದ್ದಾರೆ. ಆದರೆ ಜಿಲ್ಲೆಯಲ್ಲಿ ಕೋಮು ಸಾಮರಸ್ಯಕ್ಕೆ ಧಕ್ಕೆಯಾಗುತ್ತಿರುವ ಘಟನೆಗಳನ್ನು ಅವರು ಉಲ್ಲೇಖಿಸಿ ಭಯ ಪಡುತ್ತಿದ್ದಾರೆ. ಈ ರೀತಿ ಸಂದೇಹಗಳು ನಿವಾರಿಸಬೇಕಾಗಿದೆ. ಜಿಲ್ಲೆಯಲ್ಲಿ ಶಾಂತಿಯುತ ವಾತಾವರಣವನ್ನು ,ಕೋಮು ಸೌಹಾರ್ದತೆಯನ್ನು ಕಾಯ್ದುಕೊಳ್ಳಲು ಎಲ್ಲರೂ ಸಹಕರಿಸಬೇಕಾಗಿದೆ ಎಂದು ಬಿ.ಎಂ.ಫಾರೂಕ್ ತಿಳಿಸಿದ್ದಾರೆ.

ಸಂತ್ರಸ್ತರಿಗೆ ಭೇದ ಬಾವ ಮರೆತು ನೆರವು ನೀಡುತ್ತಿರುವುದು ಶ್ಲಾಘನೀಯ:- ಜಿಲ್ಲೆಯಲ್ಲಿ ಹಾಗೂ ನೆರೆಯ ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ಆಗಿರುವ ಕಷ್ಟ ನಷ್ಟಗಳಿಗೆ ಜಿಲ್ಲೆಯ ಹಾಗೂ ರಾಜ್ಯದ ಎಲ್ಲಾ ಭಾಗದ ಜನರು ಜಾತಿ,ಮತ ಭೇದ ಮರೆತು ಸಹಕಾರ ನೀಡುತ್ತಿರುವುದು ಶ್ಲಾಘನೀಯ.

ಸಂತ್ರಸ್ತರಲ್ಲಿ ಆತ್ಮ ವಿಶ್ವಾಸ ಮೂಡಿಸಲು ಹಾಗೂ ಅವರಿಗೆ ನೆರವು ನೀಡಲು ರಾಜ್ಯ ಸರಕಾರ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ನಿರಂತರವಾಗಿ ಕೊಡಗಿಗೆ ಭೇಟಿ ನೀಡಿ ಕಾರ್ಯನಿರ್ವಹಿಸುತ್ತಿದ್ದಾರೆ.ಕೊಡಗಿನ ಜೊತೆ ಇತರ 7 ಜಿಲ್ಲೆಗಳಲ್ಲಿ ಮಳೆ ಹಾಗೂ ಪ್ರಾಕೃತಿಕ ವಿಕೋಪದಿಂದ ಹಾನಿಯಾಗಿದೆ. ಕೊಡಗಿನಲ್ಲಿ ಮೂರು ಸಾವಿರ ಕೋಟಿ ರೂ ಅಧಿಕ ನಷ್ಟ ಉಂಟಾಗಿದೆ. ಹೈದರಾಬಾದಿನಿಂದ ಬಂದಿರುವ ತಜ್ಞರ ತಂಡ ಕೊಡಗಿನ ಭೂಕುಸಿತದ ಬಗ್ಗೆ ಪರಿಶೀಲನೆ ನಡೆಸಿ ಅಲ್ಲಿನ ಪರಿಸರದಲ್ಲಿ ಆಗಿರುವ ವಾಣಿಜ್ಯ ಚಟುವಟಿಕೆಗಳ ಪರಿಣಾಮವಾಗಿ ಮಳೆ ಬಂದ ಸಂದರ್ಭದಲ್ಲಿ ಸಡಿಲಗೊಂಡಿರುವ ಮಣ್ಣು ಸಹಿತ ಗುಡ್ಡ ಕುಸಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಮುಂದಿನ ನ ಹಂತದಲ್ಲಿ ಈ ರೀತಿಯ ಪರಿಸರಕ್ಕೆ ಹಾನಿಯಾಗುವ ವಾಣಿಜ್ಯ ಚಟುವಟಿಕೆಗಳನ್ನು ನಿಯಂತ್ರಿಸಲು ಸೂಕ್ತ ನೀತಿ ರೂಪಿಸುವುದಾಗಿ ಮುಖ್ಯ ಮಂತ್ರಿ ತಿಳಿಸಿರುವುದಾಗಿ ಬಿ.ಎಂ.ಫಾರೂಕ್ ತಿಳಿಸಿದ್ದಾರೆ.

ರಾಜ್ಯದ ಎರಡನೆ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಮಂಗಳೂರು:-ರಾಜ್ಯದ ಎರಡನೆ ಪ್ರಮುಖ ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿರುವ ಮಂಗಳೂರು ಅಭಿವೃದ್ಧಿಗೆ ಇಲ್ಲಿ ರಸ್ತೆ, ವಿಮಾನ ನಿಲ್ದಾಣ ಸೇರಿದಂತೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸ್ಥಾನಮಾನ ದೊರೆಯಬೇಕಾದರೆ 36 ಎಕ್ರೆ ಸ್ಥಳವನ್ನು ರಾಜ್ಯ ಸರಕಾರ ಸ್ವಾಧೀನ ಪಡಿಸಿಕೊಂಡು ವಿಮಾನ ನಿಲ್ದಾಣ ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡಬೇಕಾಗಿದೆ. ರನ್‌ವೇ ವಿಸ್ತರಣೆಗೆ ಇದರ ಅಗತ್ಯವಿದೆ. ಇಲ್ಲಿಂದ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ರಸ್ತೆಯನ್ನು ಅಷ್ಟಪಥ ರಸ್ತೆಯಾಗಿ ಅಭಿವೃದ್ಧಿ ಪಡಿಸಬೇಕಾಗಿದೆ.

ಮಂಗಳೂರು -ಬೆಂಗಳೂರು ನಡುವೆ ಏರ್ ಇಂಡಿಯಾವತಿಯಿಂದ ಹೆಚ್ಚುವರಿ ವಿಮಾನಯಾನ ಆರಂಭಿಸಬೇಕಾದ ಅಗತ್ಯವಿದೆ.ಬಿ.ಸಿ ರೋಡ್‌ನಿಂದ ಪಂಪ್‌ವೆಲ್‌ವೃತ್ತದ ವರೆಗಿನ ವಾಹನದಟ್ಟಣೆ ನಿವಾರಿಸಲು ಮೆಲ್ಕಾರ್ ಜಂಕ್ಷನ್‌ನಿಂದ ವಿಶ್ವ ವಿದ್ಯಾನಿಲಯ ಮೂಲಕ ಮಂಗಳೂರು ತಲುಪುವ ರಸ್ತೆಯನ್ನು ಅಷ್ಟ ಪಥ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲು ಮುಖ್ಯ ಮಂತ್ರಿ ಯೋಜನೆ ಹೊಂದಿದ್ದಾರೆ.

ಬೆಂಗಳೂರಿನ ನಂತರ ಮಂಗಳೂರು ನಗರವನ್ನು ರಾಜ್ಯದ ಎರಡನೆ ವಾಣಿಜ್ಯ ಕೇಂದ್ರವಾಗಿ ಅಭಿವೃದ್ಧಿ ಪಡಿಸುವ ಆಶಯವನ್ನು ಮುಖ್ಯ ಮಂತ್ರಿ ಹೊಂದಿದ್ದಾರೆ ಎಂದು ಬಿ.ಎಂ.ಫಾರೂಕ್ ತಿಳಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯನಾಗಿ ದ.ಕ ಜಿಲ್ಲೆ ನನ್ನ ನೋಡಲ್ ಜಿಲ್ಲೆಯಾಗಿ ಆಯ್ಕೆ:- ದಕ್ಷಿಣ ಕನ್ನಡ ಜಿಲ್ಲೆಯನ್ನು ನಾನು ನೋಡಲ್ ಜಿಲ್ಲೆಯಾಗಿ ಆಯ್ಕೆಮಾಡಿ ಅಭಿವೃದ್ಧಿಗೆ ಶ್ರಮಿಸುವುದಾಗಿ ಮತ್ತು ದಕ್ಷಿಣ ಕನ್ನಡದ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಸೆಪ್ಟೆಂಬರ್ ಮೊದಲ ವಾರ ತನ್ನ ಕಚೇರಿ ಆರಂಭಿಸಲಾಗುವುದು ಪ್ರತಿ ವಾರ ಈ ಕಚೇರಿಗೆ ಭೇಟಿ ನೀಡುವುದಾಗಿ ಬಿ.ಎಂ.ಫಾರೂಕ್ ತಿಳಿಸಿದ್ದಾರೆ.

ಮಂಗಳೂರು -ಬೆಂಗಳೂರು ನಡುವಿನ ಘಾಟಿಯ ಸಮಸ್ಯೆ ಬಗೆಹರಿಸಲು ಸುರಂಗ ಮಾರ್ಗ ನಿರ್ಮಾಣ ಸೂಕ್ತ ಪರಿಹಾರವಾಗಬಹುದು ಈ ಬಗ್ಗೆ ಸರಕಾರದಿಂದ ಯೋಜನೆ ರೂಪಿಸಲಾಗಿದೆ ಎಂದು ಬಿ.ಎಂ.ಫಾರೂಕ್ ತಿಳಿಸಿದ್ದಾರೆ.

ಮುಡಿಪುವಿನಲ್ಲಿರುವ ಕೆನರಾ ಕೈಗಾರಿಕಾ ಅಭಿವೃದ್ಧಿ ಪ್ರದೇಶದ ಸುಮಾರು 600 ಎಕ್ರೆ ಭೂಮಿ ಬಹುತೇಕ ನಿಷ್ಕ್ರೀಯ ಪ್ರದೇಶವಾಗಿದೆ. ಈ ಪ್ರದೇಶದ ಅಭಿವೃದ್ಧಿಗೆ ಮೂಲಭೂತ ಸೌಕರ್ಯ ಸಂಪರ್ಕ ರಸ್ತೆ ಅಭಿವೃದ್ಧಿಯಾಗಬೇಕಾಗಿದೆ. ತುಂಬೆಯಿಂದ ನೀರಿನ ಸಂಪರ್ಕ ನೀಡಬೇಕಾಗಿದೆ. ಬೊಳ್ಯಾರ್ ಜಂಕ್ಷನ್‌ನಿಂದ ಒಂದೂವರೆ ಕಿಲೋಮೀಟರ್ ಸಂಪರ್ಕ ರಸ್ತೆ ಅಭಿವೃದ್ಧಿಯಾಗಬೇಕಾಗಿದೆ. ಈ ಬಗ್ಗೆ ಮುಖ್ಯ ಮಂತ್ರಿಯ ಜೊತೆ ಸಮಾಲೋಚನೆ ನಡೆಸಲಾಗಿದೆ ಎಂದು ಬಿ.ಎಂ.ಫಾರೂಕ್ ತಿಳಿಸಿದ್ದಾರೆ.

*ಲಕ್ಷ್ಯ ಡ್ಯಾಂ ನಿಂದ ಹೂಳೆತ್ತಲು ಕ್ರಮ ಕೈಗೊಂಡರೆ ರಾಜ್ಯಕ್ಕೆ ಬೇಕಾದ ಮರಳು ಜಿಲ್ಲೆಗೆ ಅಗತ್ಯವಿರುವ ನೀರು ಪೂರೈಕೆಗೂ ಸಹಾಯವಾಗಲಿದೆ ಎಂದು ಬಿ.ಎಂ.ಫಾರೂಕ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 140 ಶೇ ಅಧಿಕ ಮಳೆಯಾಗಿದೆ. 228 ಮನೆಗಳಿಗೆ ಶಾಶ್ವತ ಹಾನಿಯಾಗಿದೆ.151 ಕಚ್ಚಾ ಮನೆಗಳು ಹಾನಿಗೀಡಾಗಿವೆ.14 ಕಡೆ ಸಂತ್ರಸ್ತರ ಕೇಂದ್ರ ತೆರೆಯಲಾಗಿದೆ. ಜಿಲ್ಲಾಡಳಿತ ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಯನಿರ್ವಹಿಸುತ್ತಿದ್ದಾರೆ. 200 ಕೋಟಿ ಗೂ ಅಧಿಕ ನಷ್ಟ ಉಂಟಾಗಿದೆ. ಅಡಿಕೆಗೆ ಕೊಳೆ ರೋಗದಿಂದ ಹಾನಿಯಾಗಿದೆ. ಮಡಿಕೇರಿ ಸಂಪರ್ಕಿಸಲು ರಸ್ತೆ ಸಂಪರ್ಕದ ಸಮಸ್ಯೆಯಿಂದ ಹರಿಹರ, ಕಲ್ಮಕಾರು,ಗಾಳಿ ಬೀಡು, ರಸ್ತೆ ನಿರ್ಮಾಣ ಮತ್ತು ಅರಂತೋಡು ಭಾಗಮಂಡಲ ರಸ್ತೆ ನಿರ್ಮಾಣ ಮಾಡುವ ಮೂಲಕ ಶಾರ್ಶವತ ಅಭಿವೃದ್ಧಿಗೆ ಸರಕಾರಕ್ಕೆ ಒತ್ತಾಯಿಸಲಾಗಿದೆ. ಜಿಲ್ಲೆಯ ಪ್ರವಾಸೋದ್ಯಮ ಅಭಿವ್ರದ್ಧಿಗೆ ವಿಶೇಷ ಅಭಿವೃದ್ಧಿಪಡಿಸಲು ಯೋಜನೆ ಸಿದ್ಧಪಡಿಸಲಾಗಿದೆ. ಪ್ರವಾಸೋದ್ಯಮ ಸಚಿವರು ಜಿಲ್ಲೆಗೆ ಆಗಮಿಸಲಿದ್ದು ಈ ಬಗ್ಗೆ ಚರ್ಚಿಸಲಿದ್ದಾರೆ ಎಂದು ಬಿ.ಎಂ.ಫಾರೂಕ್ ತಿಳಿಸಿದ್ದಾರೆ.

ಮಂಗಳೂರಿಗೆ ಅಂತಾರಾಷ್ಟ್ರೀಯ ಮಟ್ಟದ ಕ್ರೀಕೇಟ್ ಸ್ಟೇಡಿಯಂ ನಿರ್ಮಿಸುವ ಚಿಂತನೆ ಇದೆ ಎಂದು ಬಿ.ಎಂ.ಫಾರೂಕ್ ತಿಳಿಸಿದ್ದಾರೆ. ಮಂಗಳೂರು ವಿದ್ಯುಚ್ಛಕ್ತಿ ಸಮಸ್ಯೆ ಪರಿಹರಿಸಲು 66ಕೆ.ವಿ. ಉಪ ವಿಭಾಗದ ಬದಲು 110 ಕೆ.ವಿ ಗ್ಯಾಸ್ ಆಧಾರಿತ ಉಪ ವಿಭಾಗ ಪಾರಂಭಕ್ಕೆ ಯೋಜನೆ ರೂಪಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ಅಧ್ಯಕ್ಷ ವಿಟ್ಲ ಮುಹಮ್ಮದ್ ಕುಂಞ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ.ಸದಾಶಿವ, ರಾಜ್ಯ ಕಾರ್ಯದರ್ಶಿ ರಿಝ್ವಾನ್, ವಕ್ತಾರ ಸುಶೀಲ್ ನರ್ಹೋನ್ನಾ, ಜಿಲ್ಲಾ ಮುಖಂಡರಾದ ವಸಂತ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News