ಯುಎಇ ದೇಣಿಗೆ ತಿರಸ್ಕರಿಸುವುದಾದರೆ ಕೇರಳಕ್ಕೆ 2,600 ಕೋ. ರೂ. ನೀಡಿ: ಸಿಪಿಐ
ಹೈದರಾಬಾದ್, ಆ. 23: ಯುಎಇ ನೀಡಲು ಉದ್ದೇಶಿಸಿದ 700 ಕೋ. ರೂ. ದೇಣಿಗೆಯನ್ನು ಕೇಂದ್ರ ಸರಕಾರ ನಿರಾಕರಿಸಲು ಬಯಸಿದಲ್ಲಿ, ಕೇರಳ ಕೋರಿದ 2,600 ಕೋ. ರೂ. ಮಧ್ಯಂತರ ನೆರವು ನೀಡಬೇಕು ಎಂದು ಸಿಪಿಐ ತಿಳಿಸಿದೆ.
ಪ್ರಾಕೃತಿಕ ವಿಕೋಪದ ಸಂದರ್ಭ ವಿದೇಶಿ ನೆರವಿನಂತಹ ವಿಷಯಗಳಲ್ಲಿ ಕೇಂದ್ರ ಸರಕಾರ ನಕಲಿ ಘನತೆ ಅವಲಂಬಿಸುತ್ತಿದೆ ಎಂದು ಸಿಪಿಐಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುವರ್ಣ ಸುಧಾಕರ್ ರೆಡ್ಡಿ ತಿಳಿಸಿದ್ದಾರೆ. ದೇಶವೊಂದು ಪ್ರಾಕೃತಿಕ ವಿಕೋಪಕ್ಕೆ ತುತ್ತಾದಾಗ, ಇತರ ದೇಶಗಳು ನೆರವಿಗೆ ಧಾವಿಸುವುದು ಸಾಮಾನ್ಯ ಎಂದು ಹೇಳಿದ ಅವರು, ಈ ಹಿಂದೆ ನೇಪಾಳ ಹಾಗೂ ಬಾಂಗ್ಲೇದೇಶದಲ್ಲಿ ಇಂತಹ ಸನ್ನಿವೇಶ ಉಂಟಾದಾಗ ಭಾರತ ನೆರವು ನೀಡಿತ್ತು. ಪಾಕಿಸ್ತಾನದಲ್ಲಿ ಭೂಕಂಪ ಸಂಭವಿಸಿದಾಗ ಭಾರತ ನೆರವು ನೀಡುವುದಾಗಿ ತಿಳಿಸಿತ್ತು ಎಂದು ಉಲ್ಲೇಖಿಸಿದರು. ಇಂತಹ ಸನ್ನಿವೇಶದಲ್ಲಿ ನಾವು ಯುಎನ್ಒ ಹಾಗೂ ಯುಎಇಯಿಂದ ದೇಣಿಗೆ ಸ್ವೀಕರಿಸಬಹುದು. ನಿಶ್ಯರ್ತವಾಗಿ ನೆರವು ನೀಡಲು ಮುಂದೆ ಬರುವ ದೇಶಗಳ ಸಹಾಯವನ್ನು ನಾವು ಪಡೆದುಕೊಳ್ಳಬೇಕು ಎಂದು ರೆಡ್ಡಿ ಹೇಳಿದರು.