ಉಡುಪಿ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಶೇ.72.30 ಮತದಾನ

Update: 2018-08-31 15:28 GMT

ಉಡುಪಿ, ಆ.31: ಜಿಲ್ಲೆಯ ನಾಲ್ಕು ನಗರ ಸ್ಥಳೀಯ ಸಂಸ್ಥೆಗಳಿಗೆ - ಉಡುಪಿ ನಗರಸಭೆ, ಕುಂದಾಪುರ ಮತ್ತು ಕಾರ್ಕಳ ಪುರಸಭೆ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್- ಶುಕ್ರವಾರ ನಡೆದ ಚುನಾವಣೆ ಶಾಂತಿಯುತ ಮತದಾನ ದೊಂದಿಗೆ ಮುಕ್ತಾಯಗೊಂಡಿದ್ದು ಜಿಲ್ಲೆಯಲ್ಲಿ ಸಾಸರಿ ಶೇ.72.30 ಮತದಾನ ವಾಗಿದೆ.

ಉಡುಪಿ ನಗರಸಭೆಯಲ್ಲಿ ಶೇ.68.52, ಸಾಲಿಗ್ರಾಮ ಪಟ್ಟಣ ಪಂಚಾಯತ್ ನಲ್ಲಿ ಶೇ.75.26, ಕುಂದಾಪುರ ಪುರಸಭೆಯಲ್ಲಿ ಶೇ.73.81 ಹಾಗೂ ಕಾರ್ಕಳ ಪುರಸಭೆಯಲ್ಲಿ ಶೇ.71.61 ಮತದಾನವಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಸರಾಸರಿ ಶೇ.72.30 ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾ ಕಚೇರಿ ತಿಳಿಸಿದೆ.

ಉಡುಪಿಯ ಕೊಡವೂರು ವಾರ್ಡ್ ಮತ್ತು ನಿಟ್ಟೂರು ವಾರ್ಡುಗಳ ಮತಗಟ್ಟೆಗಳಲ್ಲಿ ಬೆಳಗ್ಗೆ ಮತಯಂತ್ರ ಕೈಕೊಟ್ಟು ಕೆಲಕಾಲ ಮತದಾನ ಸ್ಥಗಿತ ಗೊಂಡಿದ್ದನ್ನು ಹೊರತು ಪಡಿಸಿದರೆ, ಜಿಲ್ಲೆಯ ನಾಲ್ಕು ನಗರ ಸ್ಥಳೀಯ ಸಂಸ್ಥೆ ಗಳಿಂದ ಮತದಾನಕ್ಕೆ ಅಡಚಣೆಯಾದ ಯಾವುದೇ ವರದಿಗಳು ಬಂದಿಲ್ಲ.

ಬೆಳಗ್ಗೆಯಿಂದಲೇ ಮತಗಟ್ಟೆಗಳಿಗೆ ಆಗಮಿಸಿದ ಜನತೆ ಉತ್ಸಾಹದಿಂದ ಮತ ಚಲಾಯಿಸಿದರು. ಬೆಳಗ್ಗೆ 9 ಗಂಟೆಯ ವೇಳೆಗೆ ಜಿಲ್ಲೆಯಲ್ಲಿ ಶೇ.14.25ರಷ್ಟು ಮತದಾನವಾಗಿದ್ದು, 11 ಗಂಟೆಯ ವೇಳೆಗೆ ಶೇ.31.14, ಒಂದು ಗಂಟೆ ವೇಳೆಗೆ ಶೇ.45.40 ಹಾಗೂ ಅಪರಾಹ್ನ 3 ಗಂಟೆಗೆ ಶೇ.56.43ರಷ್ಟು ಮತದಾನ ನಡೆದಿತ್ತು.

ಕಳೆದ ಕೆಲವು ದಿನಗಳಿಂದ ಆಗಾಗ ಸುರಿಯುತಿದ್ದ ಮಳೆ ಇಂದು ವಿಶ್ರಾಂತಿ ಪಡೆದಂತಿದ್ದು, ಇದರಿಂದ ಜನರು ಬೆಳಗ್ಗೆಯೇ ಬಂದು ಮತ ಚಲಾಯಿಸಿದರು. ಉಡುಪಿ, ಸಾಲಿಗ್ರಾಮ, ಕುಂದಾಪುರಗಳ ಹಲವು ಮತಗಟ್ಟೆಗಳಲ್ಲಿ ವೃದ್ದರು, ವಿಕಲಚೇತನರು, ಅನಾರೋಗ್ಯ ಪೀಡಿತರು ಸಹಾಯಕರ ನೆರವಿನಿಂದ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.

ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ ಕಾರ್ಕಡ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಇಬ್ಬರು ಗಾಲಿಕುರ್ಚಿಯಲ್ಲಿ ಬಂದು ಮತ ಚಲಾಯಿಸಿದರೆ, ಹೆಚ್ಚು ಕಡಿಮೆ ಎಲ್ಲಾ ಚುನಾವಣೆಗಳಲ್ಲೂ ಮತ ಚಲಾಯಿಸಿರುವ ಗುಂಡ್ಮಿಯ 88ರ ಹರೆಯದ ಗಿರಿಜಮ್ಮ ತನ್ನ ಮೊಮ್ಮಗಳ ನೆರವಿನಿಂದ ನಿಧಾನವಾಗಿ ನಡೆದುಕೊಂಡು ಬಂದು ತನ್ನ ಮತವನ್ನು ಚಲಾಯಿಸಿದರು.

ಕುಂದಾಪುರ ಪುರಸಭೆಯ ಸರಕಾರಿ ಆಸ್ಪತ್ರೆ ವಾರ್ಡ್‌ನ ಬಂಟ್ವಾಳ ರಘುನಾಥ ರಾವ್ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ಅನಾರೋಗ್ಯ ಪೀಡಿತ 80 ವರ್ಷದ ಸೀತು ಮೊಗೇರ್ತಿ ವಾಕರ್ ನೆರವಿನಿಂದ ನಡೆದುಕೊಂಡು ಬಂದು ಮತ ಚಲಾಯಿಸಿದರು. ಸಾಲಿಗ್ರಾಮ ಪ.ಪಂ.ನ ಯಕ್ಷಮಠ ವಾರ್ಡ್‌ನ ಗುಂಡ್ಮಿ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 50 ವರ್ಷ ಪ್ರಾಯದ ವಿಕಲಚೇತನ ವಾಸು ಅವರು ಪತ್ನಿಯೊಂದಿಗೆ ಬಂದು ತಮ್ಮ ಮತವನ್ನು ಚಲಾಯಿಸಿ ತೆರಳಿದರು.

ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ಭಾರೀ ಕುತೂಹಲ ಕೆರಳಿಸಿರುವ ಸೆಂಟ್ರಲ್ ವಾರ್ಡ್‌ನಲ್ಲಿ 11 ಗಂಟೆಯ ಸುಮಾರಿಗೆ ಶೇ.40ರಷ್ಟು ಮತದಾನ ವಾಗಿತ್ತು. ಈ ವಾರ್ಡ್‌ನಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿ, ಹಿರಿಯ ನಾಯಕ ಮೋಹನದಾಸ ಶೆಣೈ ಅವರು ಬಿಜೆಪಿ ವಿರುದ್ಧ ಬಂಡಾಯವೆದ್ದು ಪಕ್ಷೇತರರಾಗಿ ಅಟೋ ಚಿನ್ನೆಯೊಂದಿಗೆ ಸ್ಪರ್ಧಿಸಿರುವ ರಾಜೇಶ್ ಕಾವೇರಿ ನಡುವೆ ಜಿದ್ದಾಜಿದ್ದಿ ಸೆಣಸಾಟ ನಡೆದಿದೆ.

ಸೆಂಟ್ರಲ್ ವಾರ್ಡಿನ ನಾರಾಯಣಗುರು ಕಲ್ಯಾಣ ಮಂಟಪ ಮತಗಟ್ಟೆಯಲ್ಲಿ ಸುದ್ದಿಗಾರರಿಗೆ ಮಾತನಾಡಲು ಸಿಕ್ಕಿದ ರಾಜೇಶ್ ಕಾವೇರಿ, ಗೆಲುವಿನ ಪೂರ್ಣ ವಿಶ್ವಾಸ ವ್ಯಕ್ತಪಡಿಸಿದರು. ಎರಡು ದಶಕಗಳಿಗೂ ಅಧಿಕ ಸಮಯದಿಂದ ಪಕ್ಷಕ್ಕಾಗಿ ಅಹಿರ್ನಿಶಿ ದುಡಿದ ತನ್ನನ್ನು ರಾಜಕೀಯವಾಗಿ ಮುಗಿಸಲು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರ ನೇತೃತ್ವದಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಆದರೆ ಈ ವಾರ್ಡಿನ ಜನರು ತನ್ನ ಹಿಂದೆ ಬಂಡೆಗಲ್ಲಿನಂತೆ ನಿಂತಿದ್ದಾರೆ ಎಂದರು.

ಕೋಡಿ ಉತ್ತರ ವಾರ್ಡ್‌ನ ಕೋಡಿ ಲೈಟ್‌ಹೌಸ್ ಮತಗಟ್ಟೆಯ ಬಳಿ ಸುದ್ದಿಗಾರರಿಗೆ ಎದುರಾದ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಮತದಾನದಲ್ಲಿ ಬಂಡಾಯವೆಲ್ಲಾ ಇದ್ದದ್ದೆ. ಭಿನ್ನಮತವಿಲ್ಲದೇ ಪ್ರಜಾಪ್ರಭುತ್ವ ವಿಲ್ಲ. ಆದರೆ ಮತದಾರರು ಪ್ರಜ್ಞಾವಂತರಿದ್ದಾರೆ. ಅವರಿಗೆ ಯಾರ ಸಾಮರ್ಥ್ಯ ಏನು ಎಂಬುದು ಚೆನ್ನಾಗಿ ಗೊತ್ತಿದೆ. ನಮಗಂತೂ ಪೂರ್ಣ ಬಹುಮತದೊಂದಿಗೆ ಗೆಲ್ಲುವ ವಿಶ್ವಾಸವಿದೆ ಎಂದರು.

ಉಡುಪಿಯ ವಿವಿಧ ಮತಗಟ್ಟೆಗಳಲ್ಲೂ ಸಂಜೆ ನಾಲ್ಕು ಗಂಟೆಯ ಬಳಿಕ ಮತದಾನ ನಿಧಾನವಾಯಿತು. ಹೀಗಾಗಿ ಜಿಲ್ಲೆಯ ನಾಲ್ಕು ಸ್ಥಳೀಯ ಸಂಸ್ಥೆಗಳಲ್ಲಿ ಉಡುಪಿಯಲೆ್ಲೀ ಅತೀ ಕಡಿಮೆ ಮತದಾನವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News