ಪುತ್ತೂರು ನಗರಸಭೆ ಅಭ್ಯರ್ಥಿಯ ವಿರುದ್ಧ ಅವಹೇಳನಕಾರಿ ಕರಪತ್ರ ರವಾನೆ: ದೂರು

Update: 2018-09-01 12:53 GMT

ಪುತ್ತೂರು, ಸೆ. 1: ಇಲ್ಲಿನ ನಗರಸಭಾ 10ನೇ ವಾರ್ಡ್‍ನ ಕಾಂಗ್ರೆಸ್ ಚುನಾವಣಾ ಅಭ್ಯರ್ಥಿ ಹಾಗೂ ನಗರ ಕಾಂಗ್ರೆಸ್ ಅಧ್ಯಕ್ಷರಾಗಿರುವ ಸೂತ್ರಬೆಟ್ಟು ಜಗನ್ನಾಥ ರೈ  ವಿರುದ್ಧ ಅವಹೇಳನಕಾರಿಯಾದ ಪತ್ರವನ್ನು ಬರೆದು ಅಂಚೆ ಮೂಲಕ ಅವರು ಸ್ಪರ್ಧಿಸಿದ ಕ್ಷೇತ್ರಗಳ ಮನೆಗೆ ಕಳುಹಿಸಿರುವ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಸೂತ್ರಬೆಟ್ಟು ಜಗನ್ನಾಥ ರೈ, ನಾನು ಎಲ್ಲ ಸಮುದಾಯಗಳನ್ನೂ ಪ್ರೀತಿಸುವವನಾಗಿದ್ದು, ನಮ್ಮ ಪಕ್ಷದ ಸಿದ್ಧಾಂತದ ಪ್ರಕಾರ ಸರ್ವ ಧರ್ಮ ಸಮಭಾವದಿಂದ ಸಮಾಜದಲ್ಲಿ ನಡೆದುಕೊಳ್ಳುತ್ತಿದ್ದೇನೆ. ಆದರೆ ಚುನಾವಣೆಯಲ್ಲಿ ನನ್ನನ್ನು ಸೋಲಿಸಬೇಕೆಂಬ ಉದ್ದೇಶದಿಂದ ನನ್ನ ವಾರ್ಡ್‍ನಲ್ಲಿರುವ ಮುಸ್ಲಿಂ ಮನೆಗಳಿಗೆ ಕರಪತ್ರಗಳನ್ನು ಅಂಚೆ ಮೂಲಕ ಕಳುಹಿಸಲಾಗಿದೆ. ಈ ಕರಪತ್ರದಲ್ಲಿ ನನ್ನನ್ನು ಮುಸ್ಲಿಂ ವಿರೋಧಿ ಎಂದೂ, ಹಿಂದುತ್ವ ಸಂಘಟನೆಗಳ ಜತೆಗೆ ಗುರುತಿಸಿಕೊಂಡವನೆಂದೂ ವ್ಯಾಖ್ಯಾನಿಸಲಾಗಿದೆ. ಈ ರೀತಿ ತಪ್ಪು ಸಂದೇಶವನ್ನು ಜನರಿಗೆ ನೀಡುವ ಮೂಲಕ ರಾಜಕೀಯ ಷಡ್ಯಂತ್ರ ರೂಪಿಸಲಾಗಿದೆ. ಇದರ ವಿರುದ್ಧ ತಾನು ಪುತ್ತೂರು ನಗರ ಠಾಣೆಗೆ  ದೂರು ನೀಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News