ಮಂಗಳೂರು: ರಾಸಾಯನಿಕ ಎರಚಿದಾತನ ಬಂಧನ

Update: 2018-09-08 17:09 GMT

ಮಂಗಳೂರು, ಸೆ.8: ನಗರದ ಸೆಂಟ್ರಲ್ ಮಾರುಕಟ್ಟೆ ಬಳಿ ಮಹಿಳೆಗೆ ರಾಸಾಯನಿಕ ಎರಚಿದಾತನನ್ನು ಬಂದರು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಪಾಂಡೇಶ್ವರದ ನೌಷಾದ್ ಬಂಧಿತ ಆರೋಪಿ.

ಈತ ಶುಕ್ರವಾರ ಬೆಳಗ್ಗೆ ಮೀನು ವ್ಯಾಪಾರ ಮಾಡುವ ರಾಜ್‌ಕುಮಾರಿ ಎಂಬ ಮಹಿಳೆಯ ಮೈ ಮೇಲೆ ರಾಸಾಯನಿಕ ಎರಚಿದ್ದ. ರಾಸಾಯನಿಕ ಮೈ ಮೇಲೆ ಬಿದ್ದು ಉರಿ ತಡೆಯಲಾರದೆ ಮಹಿಳೆ ಕಿರುಚಾಡುತ್ತಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಸ್ಪತ್ರೆಯಿಂದ ಬಂದರು ಪೊಲೀಸ್ ಠಾಣೆಗೆ ಬಂದ ಮಾಹಿತಿ ಪ್ರಕಾರ ಪೊಲೀಸರು ತೆರಳಿ ವಿಚಾರಣೆ ನಡೆಸಿ, ಮಹಿಳೆ ನೀಡಿದ ದೂರನ್ನು ದಾಖಲಿಸಿ ಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಈ ಹಿಂದೆಯೂ ಸಾರ್ವಜನಿಕರನ್ನು ಹೆದರಿಸಿ ಭಯ ಸೃಷ್ಟಿಸುವಂತೆ ಮಾಡುತ್ತಿದ್ದ ಬಗ್ಗೆ ದೂರುಗಳು ಬಂದಿವೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News