ಮಲ್ಯ ಸುಳ್ಳು ಹೇಳುತ್ತಿದ್ದಾರೆ, ಅವರು ನನ್ನನ್ನು ಭೇಟಿಯಾಗಿಲ್ಲ: ಅರುಣ್ ಜೇಟ್ಲಿ
Update: 2018-09-12 14:58 GMT
ಹೊಸದಿಲ್ಲಿ, ಸೆ.12: ಭಾರತ ತೊರೆಯುವುದಕ್ಕೂ ಮುನ್ನ ತಾನು ಹಣಕಾಸು ಸಚಿವರನ್ನು ಭೇಟಿಯಾಗಿದ್ದೆ ಎಂಬ ಉದ್ಯಮಿ ವಿಜಯ್ ಮಲ್ಯ ಹೇಳಿಕೆಗೆ ವಿತ್ತ ಸಚಿವ ಅರುಣ್ ಜೇಟ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ.
ಮಲ್ಯ ಸುಳ್ಳು ಹೇಳಿಕೆ ನೀಡಿದ್ದಾರೆ. ನಾನು ಅವರಿಗೆ ಎಂದೂ ನನ್ನನ್ನು ಭೇಟಿಯಾಗಲು ಸಮಯ ನೀಡಿಲ್ಲ. ಹಾಗಾಗಿ ಅವರು ನನ್ನನ್ನು ಭೇಟಿಯಾಗಿರುವ ಪ್ರಶ್ನೆಯೇ ಇಲ್ಲ ಎಂದು ಜೇಟ್ಲಿ ತಿಳಿಸಿದ್ದಾರೆ.
ಇದೇ ವೇಳೆ, ಮಲ್ಯ ತಮ್ಮ ರಾಜ್ಯಸಭಾ ಸದಸ್ಯತ್ವದ ಸೌಲಭ್ಯವನ್ನು ದುರುಪಯೋಗಪಡಿಸಿಕೊಂಡು ಸಂಸತ್ನ ಆವರಣದಲ್ಲಿ ಭೇಟಿಯಾಗಿದ್ದರು ಎಂದೂ ಜೇಟ್ಲಿ ತಿಳಿಸಿದ್ದಾರೆ. “ಈ ವೇಳೆ ಮಲ್ಯ, ನಾನು ವ್ಯವಹಾರ ಇತ್ಯರ್ಥಗೊಳಿಸಲು ಬಯಸುತ್ತೇನೆ ಎಂದು ನನ್ನ ಬಳಿ ತಿಳಿಸಿದ್ದರು. ಆದರೆ ಅವರ ಈ ಹಿಂದಿನ ಸುಳ್ಳು ಹೇಳಿಕೆಗಳ ಬಗ್ಗೆ ಅರಿವಿದ್ದ ನಾನು ಕೂಡಲೇ ಅವರನ್ನು ತಡೆದು, ನೀವೇನಿದ್ದರೂ ಬ್ಯಾಂಕ್ಗಳ ಅಧಿಕಾರಿಗಳ ಜೊತೆ ಈ ಕುರಿತು ಮಾತನಾಡಿ” ಎಂದು ಹೇಳಿದ್ದೆ ಎಂದು ಜೇಟ್ಲಿ ತಿಳಿಸಿದ್ದಾರೆ.